-ಮನೆಯಲ್ಲಿದ್ದವರನ್ನು ಕಟ್ಟಿಹಾಕಿ, ಬೆದರಿಸಿ ನಗದು, ಆಭರಣ ದೋಚಿ ಸುಲಿಗೆಕೋರರು ಪರಾರಿ । ಜಿಲ್ಲಾ ರಕ್ಷಣಾಧಿಕಾರಿ ಭೇಟಿ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ ೨ಗಂಟೆ ವೇಳೆಯಲ್ಲಿ ಮನೆಯ ಬಾಗಿಲನ್ನು ಆಯುಧದಿಂದ ಒಡೆದು ಒಳ ಪ್ರವೇಶಿಸಿದ ಮೂವರು ಸೂಲಿಗೆಕೋರರು ೬.೫೦ ಲಕ್ಷ ನಗದು ಹಣ ಹಾಗೂ ಆಭರಣ ದೋಚಿ, ಮನೆಯವರನ್ನು ಬೆಡ್ರೂಂನಲ್ಲಿ ಕೂಡಿ ಹಾಕಿ ಪರಾರಿಯಾದ ಘಟನೆ ನಡೆದಿದೆ.ಹಿರೇಹಳ್ಳಿ ಗ್ರಾಮದ ಮೆಕ್ಕೆಜೋಳ ವ್ಯಾಪಾರಿ ಜಿ.ಬಿ.ತಿಪ್ಪೇಸ್ವಾಮಿ(೬೮) ತಳಕು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಿರೇಹಳ್ಳಿ ಗ್ರಾಮದ ಹೊರವಲಯದ ತನ್ನ ಜಮೀನಿನಲ್ಲಿ ಮನೆಯನ್ನು ಕಟ್ಟಿಕೊಂಡು ವಾಸಿಸುತ್ತಿದ್ದು, ಪುತ್ರ ಶ್ರೀನಿಧಿ ಹಾಗೂ ಹೆಂಡತಿಯ ಅಕ್ಕನ ಮಗಳಾದ ಪುಷ್ಪಲತರೊಂದಿಗೆ ಊಟ ಮಾಡಿ ಮಲಗಿದ್ದು, ೨ರ ಸಮಯದಲ್ಲಿ ಮುಖಕ್ಕೆ ಮಂಕಿಕ್ಯಾಪ್, ಮಾಸ್ಕ್, ಟೀಶರ್ಟ್ ಧರಿಸಿ ಬಂದ ೨೫ರಿಂದ೩೦ವರ್ಷದ ಮೂವರು ಅಪರಿಚಿತ ವ್ಯಕ್ತಿಗಳು ಮನೆಯ ಬಾಗಿಲು ಮುರಿದು ಜಿ.ಬಿ.ತಿಪ್ಪೇಸ್ವಾಮಿ, ಶ್ರೀನಿಧಿ, ಪುಷ್ಪಲತಾ ಅವರ ಕೈಗಳನ್ನು ಹಿಂದಕ್ಕೆ ಕಟ್ಟಿ ಹಾಕಿ, ಚಾಕು ತೋರಿಸಿ ಹಣ, ಒಡವೆ ಕೊಡುವಂತೆ ಬೆದರಿಸಿದ್ದಾರೆ. ಪುಷ್ಪಲತಾ ಪರ್ಸ್ನಲ್ಲಿದ್ದ ೨.೫೦೦, ಕಿವಿಯ ಓಲೆ ಹಾಗೂ ಜಿ.ಬಿ.ತಿಪ್ಪೇಸ್ವಾಮಿಯ ಮೆಕ್ಕೆಜೋಳ ವ್ಯಾಪಾರದ ಹಣ ೬.೫೦ ಲಕ್ಷ ಹಣ ದೋಚಿ ಮೂವರನ್ನು ಬೆಡ್ರೂಂನಲ್ಲಿ ಕೂಡಿ ಹಾಕಿ ಅವರ ಮೊಬೈಲ್ಗಳನ್ನು ಕಸಿದುಕೊಂಡು ಪರಾರಿಯಾಗಿದ್ಧಾರೆ.
ಜಿಲ್ಲಾ ರಕ್ಷಣಾಧಿಕಾರಿಗಳ ಭೇಟಿ: ಜಿಲ್ಲಾ ರಕ್ಷಣಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ, ದರೋಡೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಳೆದ ಜೂನ್ ೨೩ರಂದು ನಗರದ ಬೆಂಗಳೂರು ರಸ್ತೆಯ ಈರಣ್ಣ ಎಂಬುವವರ ಶಿಕ್ಷಕರ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ೩.೫೦ ಲಕ್ಷ ಹಣ ದೋಚಿದ್ದರು. ಚಳ್ಳಕೆರೆ ಉಪವಿಭಾಗದ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಸಿಪಿಐ ರಾಜಶೇಖರಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು, ತಳಕು ಪಿಎಸ್ಐ ಎಚ್.ವಿ.ಲೋಕೇಶ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ.
ಪೋಟೋ: ೯ಸಿಎಲ್ಕೆ೧
------
ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದಲ್ಲಿ ದರೋಡೆ ಮಾಡಲು ಬಂದ ಕಳ್ಳರ ಕೈಚಳಕ ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವುದು.