ಸುರಪುರದ ಶ್ರೀರಾಮನ ಬಾಣಕ್ಕೆ ನಿತ್ಯಪೂಜೆ

KannadaprabhaNewsNetwork |  
Published : Jan 21, 2024, 01:33 AM IST
ಸುರಪುರ ನಗರದ ಸಿಬಾರ ಬಂಡಿಯಲ್ಲಿರುವ ಶ್ರೀರಾಮನ ಬಾಣ. | Kannada Prabha

ಸಾರಾಂಶ

ಶಿಬಾರಬಂಡಿ ಎಂಬ ಗ್ರಾಮದಲ್ಲಿ ರಾಮಬಾಣ ಎಂಬ ಫ್ಲೆಕ್ಸ್ ಹಾಕಿರುವುದು ಗುಡಿ ಇರುವ ಮಾರ್ಗ ಸೂಚಿಸುತ್ತದೆ. ಈ ಬಾಣ ಸರಿಸುಮಾರು 8 ರಿಂದ 9 ಅಡಿಯಿದ್ದು, 25 ರಿಂದ 30 ಕೆ.ಜಿ. ಇದೆ. ಈ ಬಾಣಕ್ಕೆ ಜನತೆ ಸಿಬಾರ ಎನ್ನುತ್ತಾರೆ. ರಾಮ ಬಾಣ ಬಿದ್ದಿರುವ ಸ್ಥಳದಲ್ಲೇ ಗ್ರಾಮಸ್ಥರು ದೇಗುಲ ನಿರ್ಮಿಸಿ ನಿತ್ಯ ಪೂಜೆ ಕೈಗೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಸೀತೆ ಕುರುಹುಗಳು ಗುಡ್ಡಗಳಲ್ಲಿ ಸಿಗುತ್ತವೆ.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಯಾದಗಿರಿ ಜಿಲ್ಲೆಯ ಶೂರರ ನಾಡು ಸುರಪುರಕ್ಕೂ, ಅಯೋಧ್ಯೆಯ ಶ್ರೀರಾಮಚಂದ್ರನಿಗೂ ಅವಿನಾಭಾವ ಸಂಬಂಧವಿದೆ! ತೇತ್ರಾಯುಗದಲ್ಲಿ ರಾಕ್ಷಸನ ಸಂಹಾರಕ್ಕಾಗಿ ಶ್ರೀರಾಮನು ಬಿಟ್ಟ ಬಾಣ ಹಾಗೂ ಸೀತೆಯ ಕುರುಹುಗಳಂತೆ ಭಾಸವಾಗುವ ಕಲ್ಲಿನ ಗುಡ್ಡಗಳಲ್ಲಿ ಕಪ್ಪನೆಯ ಗೆರೆಗಳಿವೆ. ಹೀಗಾಗಿ, ಇಲ್ಲಿ ರಾಮನ ಬಾಣಕ್ಕೆ ನಿತ್ಯಪೂಜೆ ನೆರವೇರುತ್ತಿರುವ ಸ್ಥಳಕ್ಕೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ.

ಸುರಪುರ ನಗರದ ಸರಹದ್ದಿನಲ್ಲಿರುವ, ಬೆಂಗಳೂರು-ಬೀದರ್ ರಾಜ್ಯ ಹೆದ್ದಾರಿಯ ಕುಂಬಾರಪೇಟೆ-ವೆಂಕಟಾಪುರ ಮಾರ್ಗದ ಸಮೀಪದ ಹತ್ತಿರ ಶಿಬಾರಬಂಡಿ ಎಂಬ ಗ್ರಾಮವಿದೆ. ಇಲ್ಲಿ 200 ಜನರು ವಾಸವಾಗಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಂತೆ ರಾಮಬಾಣ ಎಂಬ ಫ್ಲೆಕ್ಸ್ ಹಾಕಿರುವುದು ಗುಡಿ ಇರುವ ಮಾರ್ಗವನ್ನು ಸೂಚಿಸುತ್ತದೆ. ಈ ಬಾಣವೂ ಸರಿಸುಮಾರು 8 ರಿಂದ 9 ಅಡಿಯಿದ್ದು, 25 ರಿಂದ 30 ಕೆ.ಜಿ. ಇದೆ.

ಈ ಬಾಣಕ್ಕೆ ಜನತೆ ‘ಸಿಬಾರ’ ಎನ್ನುತ್ತಾರೆ. ಇಲ್ಲಿ ವಾಸಿಸುವ ಜನರಿರುವ ಗ್ರಾಮ ಶಿಬಾರ ಬಂಡಿ ಪ್ರಸಿದ್ಧಿ ಪಡೆಯಿತು. ತೇತ್ರಾಯುಗದಲ್ಲಿ ಶ್ರೀರಾಮನ ಪೂರ್ವಜ ಇಕ್ಷಾಕು ವಂಶದ ಸಗರ ಚಕ್ರವರ್ತಿಗೆ ಈ ಭಾಗ ಸೇರಿತ್ತು ಎಂಬ ಪ್ರತೀತಿ ಇದೆ.

ಈಗಲೂ ರಾಮ ಬಾಣ ಬಿದ್ದಿರುವ ಸ್ಥಳದಲ್ಲೇ ಗ್ರಾಮಸ್ಥರು ದೇಗುಲ ನಿರ್ಮಿಸಿ ನಿತ್ಯ ಪೂಜೆ ಕೈಗೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಸೀತೆಯ ಕುರುಹುಗಳು ಗುಡ್ಡಗಳಲ್ಲಿ ಸಿಗುತ್ತವೆ. ಇಲ್ಲಿನ ಗುಡ್ಡಗಳಲ್ಲಿ ಕಪ್ಪನೆಯ ಗೆರೆಯಿದ್ದು, ಇದನ್ನು ಸೀತೆಯ ಸೆರಗು ಎಂಬುದಾಗಿ ನಂಬುತ್ತಾರೆ.

ಈ ಭಾಗವನ್ನು ಇಕ್ಷಾಕು ವಂಶಸ್ಥರು ಆಳುತ್ತಿದ್ದರು. ಶ್ರೀರಾಮಚಂದ್ರ ಈ ಮಾರ್ಗದಲ್ಲಿ ಹಾದು ಹೋಗಿದ್ದ ಎನ್ನುವ ಪ್ರತೀತಿಯಿದೆ. ಇಲ್ಲಿನ ಕೆಲವು ಬೆಟ್ಟಗಳು ಮಹಿಳೆ ಆಕೃತಿ ಹೋಲುವುದರಿಂದ ಸೀತೆಯ ಬೆಟ್ಟ ಎನ್ನಬಹುದು ಎಂಬುದು ಸಾಹಿತಿ, ಶಿಕ್ಷಕ ಕನಕಪ್ಪ ವಾಗಣಗೇರಿಯವರ ಅಭಿಪ್ರಾಯವಾಗಿದೆ.

ಶೂರರ ನಾಡು ಸುರಪುರವು ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದ್ದು, ಗೋಸಲ ಅರಸರು ಆಳ್ವಿಕೆ ನಡೆಸಿದ್ದಾರೆ. ಸಿಬಾರ ಬಂಡಿಯಲ್ಲಿ ನಮ್ಮ ಪೂರ್ವಜರು ರಾಮಬಾಣಕ್ಕೆ ಪೂಜೆ ಮಾಡಿಕೊಂಡು ಬಂದಿದ್ದಾರೆ. ಅದರಂತೆ ನಾವು ಕೂಡ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ ಎಂಬುದಾಗಿ ದೇಗುಲದ ಅರ್ಚಕ ಚಂದಪ್ಪ ತಿಳಿಸುತ್ತಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ನಗರದಲ್ಲಿರುವ ಸೀತಾರಾಮಚಂದ್ರ ಮಂದಿರದಲ್ಲಿ ಜ.21ರಂದು ರಾಮನ ಶೋಭಾಯಾತ್ರೆ, ಜ.22ರಂದು ಮಂದಿರದಲ್ಲಿ ಶ್ರೀರಾಮ ಸುಪ್ರಭಾತ, ಶ್ರೀರಾಮತಾರಕ ಮಹಾಯಜ್ಞ, ಪೂರ್ಣಾಹುತಿ ಬಳಿಕ ನೈವೇದ್ಯ ನಂತರ ತೀರ್ಥ ಪ್ರಸಾದ ನೆರವೇರಲಿದೆ. ರಾಮನ ಹಬ್ಬ ಅದ್ಧೂರಿಯಾಗಿ ಜರುಗಲಿದೆ.

ರಾಮಚಂದಿರ, ಪುರೋಹಿತ.

ಜಗದೈವ ಶ್ರೀರಾಮನ ಬಾಣ ನಮ್ಮಲ್ಲಿರುವುದು ಹೆಮ್ಮೆಯ ಸಂಕೇತ. ಇಲ್ಲಿರುವ ಬೆಟ್ಟಗಳಲ್ಲಿ ಸೀತೆಯ ಬೆಟ್ಟಗಳಿವೆ. ಸಿಬಾರ ಬಂಡಿ ಮತ್ತು ಇಲ್ಲಿರುವ ಬೆಟ್ಟಗುಡ್ಡಗಳನ್ನು ಐತಿಹಾಸಿಕ ತಾಣವಾಗಿ ಮಾರ್ಪಡಿಸಿ ಅಭಿವೃದ್ಧಿ ಪಡಿಸಬೇಕು. ಸಿಬಾರಬಂಡಿಗೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು.

ವೆಂಕಟೇಶ, ಸಿಬಾರಬಂಡಿ ನಿವಾಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ
ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ