ರೈತರ ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಪೂರಕ

KannadaprabhaNewsNetwork | Published : Jan 12, 2024 1:46 AM

ದೊಡ್ಡಬಳ್ಳಾಪುರ: ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಹೈನುಗಾರಿಕೆಯ ಪಾತ್ರ ಮಹತ್ವದ್ದಾಗಿದೆ ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಹೇಳಿದರು.

ದೊಡ್ಡಬಳ್ಳಾಪುರ: ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಹೈನುಗಾರಿಕೆಯ ಪಾತ್ರ ಮಹತ್ವದ್ದಾಗಿದೆ ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಹೇಳಿದರು.

ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ಗ್ರಾಮಗಳ ಹಾಲು ಉತ್ಪಾದಕ ರೈತರಿಗೆ ಬಮೂಲ್ ನಿಂದ ವೈದ್ಯಕೀಯ ವೆಚ್ಚ, ಸದಸ್ಯರ ಮರಣ ಪರಿಹಾರ, ವಿಶೇಷ ಪರಿಹಾರ ಯೋಜನೆಯ ಚೆಕ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವಿಧ ಗ್ರಾಮದ ಹಾಲು ಉತ್ಪಾದಕ ಸಂಘದ ವ್ಯಾಪ್ತಿಯಲ್ಲಿ ಮೃತಪಟ್ಟ ಸದಸ್ಯರ ಕುಟುಂಬದವರಿಗೆ ಹಾಗೂ ವೈದ್ಯಕೀಯ ವೆಚ್ಚವನ್ನು 30 ಕುಟುಂಬಗಳಿಗೆ ಬಮೂಲ್ ವಿಮಾ ಯೋಜನೆಯಲ್ಲಿ ಒಟ್ಟು 8 ಲಕ್ಷ ರುಪಾಯಿ ಮೊತ್ತದ ಪರಿಹಾರ ಚೆಕ್‌ ವಿತರಿಸಲಾಯಿತು. ರೈತರಿಗಾಗಿ ಕೆಎಂಎಫ್‌ ಹಾಗೂ ಬಮೂಲ್‌ ಹಲವು ಯೋಜನೆಗಳನ್ನು ರೂಪಿಸಿವೆ. ಮುಂದಿನ ದಿನಗಳಲ್ಲಿ ತಾಲೂಕಿನ ಮೆಣಸಿ ಬಳಿ 600 ಕೋಟಿ ರು. ವೆಚ್ಚದಲ್ಲಿ ನಂದಿನಿ ಟೆಟ್ರಾ ಪ್ಯಾಕ್ ಘಟಕ ನಿರ್ಮಿಸಲಾಗುತ್ತಿದೆ. ಇದರಿಂದ ನಂದಿನಿ ಹಾಲಿಗೆ ಉತ್ತಮ ಮಾರುಕಟ್ಟೆ ಸಿಗಲಿದ್ದು ಸ್ಥಳೀಯ ಹೈನುಗಾರಿಕೆ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಹೇಳಿದರು.

ಹೈದರಾಬಾದ್, ಮುಂಬೈನಲ್ಲೂ ನಂದಿನಿ ಉತ್ಪನ್ನಗಳ ಮಾರುಕಟ್ಟೆಯು ವಿಸ್ತರಣೆಗೊಂಡಿದೆ. ಇದರಿಂದ ಒಕ್ಕೂಟವು ಲಾಭದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರೈತರಿಗೆ ಗುಣಮಟ್ಟದ ಪಶು ಆಹಾರ ದೊರೆಯುವಂತೆ ಮಾಡುವುದರ ಜೊತೆಗೆ ಉತ್ತಮ ಮಿಶ್ರತಳಿ ಜಾನುವಾರು ತಳಿ ಅಭಿವೃದ್ಧಿಗೆ ಕೃತಕ ಗರ್ಭಧಾರಣೆ ನಳಿಕೆಗಳನ್ನು ಒಕ್ಕೂಟ ಸರಬರಾಜು ಮಾಡುತ್ತಿದೆ ಎಂದರು.

ಪ್ರತೀ ಗ್ರಾಮ ಮಟ್ಟದಲ್ಲೂ ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವಂತೆ ಮಾಡಲು ಒಕ್ಕೂಟದಿಂದ ಧನ ಸಹಾಯ ನೀಡಲಾಗುತ್ತಿದೆ. ಹಾಲು ಉತ್ಪಾದಕ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿ ಜಮೀನಿನಲ್ಲಿ ಹಾವು ಕಡಿತಕ್ಕೊಳಗಾಗಿ ಮರಣ ಹೊಂದಿದರೆ 2 ಲಕ್ಷ ರು. ಪರಿಹಾರ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಾಲು ಉತ್ಪಾದಕ ಸಹಕಾರಿ ಸಂಘಗಳ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಕುಮಾರ್, ವಿಸ್ತರಾಣಾಧಿಕಾರಿಗಳಾದ ಕುಸುಮಾ, ಅಶ್ವಥ್, ನಾಗೇಶ್, ಡೇರಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಇತರರಿದ್ದರು.10ಕೆಡಿಬಿಪಿ3-

ದೊಡ್ಡಬಳ್ಳಾಪುರ ಬಮೂಲ್ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕ ರೈತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ಗಳನ್ನು ವಿತರಿಸಲಾಯಿತು.