ಕನ್ನಡಪ್ರಭ ವಾರ್ತೆ ಶಿರಾಗ್ರಾಮೀಣ ಪ್ರದೇಶದಲ್ಲಿ ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಯುವಕರು ಬೇರೆ ಕಡೆ ಕೆಲಸಕ್ಕೆ ಹೋಗುವ ಬದಲು ಹೈನುಗಾರಿಕೆ ಮಾಡಿ ಹೆಚ್ಚು ಹಾಲು ಉತ್ಪಾದಿಸಿ ನೀವೆ ಇನ್ನೊಬ್ಬರಿಗೆ ಉದ್ಯೋಗ ನೀಡಿ. ಹೈನುಗಾರಿಕೆಯನ್ನು ತಾಂತ್ರಿಕತೆ ಉಪಯೋಗಿಸಿಕೊಂಡು ಮಾಡಿದರೆ ಕ್ಷೀರ ಕ್ರಾಂತಿ ಮಾಡಬಹುದು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಹೇಳಿದರು. ಅವರು ಗುರುವಾರ ನಗರದ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ವತಿಯಿಂದ ಹಮ್ಮಿಕೊಂಡಿದ್ದ ಹಾಲು ಪರೀಕ್ಷಕರಿಗೆ ತರಬೇತಿ ಹಾಗೂ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಮಾರು ೫೦ ವಿದ್ಯಾರ್ಥಿಗಳಿಗೆ ಸುಮಾರು ೫ ಲಕ್ಷ ರು.ಗಳ ವಿದ್ಯಾರ್ಥಿ ವೇತನ ಚೆಕ್ ಹಾಗೂ ಹೈನುಗಾರಿಕೆಯಲ್ಲಿ ಹಿಂದುಳಿದು ನಷ್ಟದಲ್ಲಿದ್ದ ದೊಡ್ಡಬಾಣಗೆರೆ ಹಾಲು ಉತ್ಪಾದಕರ ಸಂಘದ ಪುನಶ್ಚೇತನಕ್ಕಾಗಿ ಸುಮಾರು ೨ ಲಕ್ಷ ರೂಗಳ ಬಡ್ಡಿ ರಹಿತ ಸಾಲದ ಚೆಕ್ ವಿತರಿಸಲಾಯಿತು.
ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ತುಮಕೂರು ಹಾಲು ಪಕ್ಕೂಟದ ಅಪರ ನಿರ್ದೇಶಕ ಡಾ. ರಾಘವೇಂದ್ರ, ಫಕ್ರುದ್ದೀನ್ ಬಾಬು, ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಅಜ್ಜಣ್ಣ, ನೇಜಂತಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿ ಗೌಡ, ಪ್ರಕಾಶ, ಮೋಹನ ಸೇರಿದಂತೆ ಹಲವರು ಹಾಜರಿದ್ದರು. ----------------------ಬಾಕ್ಸ್೨೫ ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣಹೈನುಗಾರರ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ತುಮಕೂರು ಹಾಲು ಒಕ್ಕೂಟದಿಂದ ಹಾಸ್ಟೆಲ್ ವ್ಯವಸ್ಥೆ ಮಾಡಲು ೨೫ ಕೋಟಿ ರುಗಳ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ವಿದ್ಯಾರ್ಥಿ ನಿಲಯದಲ್ಲಿ ಸುಮಾರು ೫೦೦ ಜನ ಹೆಣ್ಣು ಮಕ್ಕಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕಟ್ಟಡ ಕಾಮಗಾರಿ ಶೀಘ್ರದಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ಎಸ್.ಆರ್.ಗೌಡ ಹೇಳಿದರು.