ಅರಬ್ಬಿ ಸಮುದ್ರದಲ್ಲಿ ಸರಕು ಹಡಗು ಮುಳುಗಡೆ, ಆರು ಸಿಬ್ಬಂದಿ ರಕ್ಷಣೆ

Sujatha NRPublished : May 16, 2025 9:43 AM

ಕರಾವಳಿ ಸಮುದ್ರ ತೀರದಿಂದ 60 ನಾಟಿಕಲ್‌ ಮೈಲ್‌ ದೂರದಲ್ಲಿ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಎಂಎಸ್‌ವಿ ಸಲಾಮತ್‌ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು ಅರಬ್ಬಿ ಸಮುದ್ರದ ಮಧ್ಯದಲ್ಲಿ ಮುಳುಗಡೆಯಾಗಿದೆ.

ಮಂಗಳೂರು: ಕರಾವಳಿ ಸಮುದ್ರ ತೀರದಿಂದ 60 ನಾಟಿಕಲ್‌ ಮೈಲ್‌ ದೂರದಲ್ಲಿ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಎಂಎಸ್‌ವಿ ಸಲಾಮತ್‌ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು ಅರಬ್ಬಿ ಸಮುದ್ರದ ಮಧ್ಯದಲ್ಲಿ ಮುಳುಗಡೆಯಾಗಿದೆ.

ಸರಕು ಸಾಗಣೆಯ ಹಡಗು ಮೇ 12ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿದ್ದು, ಮೇ 18ರಂದು ಲಕ್ಷದ್ವೀಪದ ಕಡಮತ್‌ ದ್ವೀಪಕ್ಕೆ ತಲುಪಬೇಕಾಗಿತ್ತು. ಹಡಗಿನಲ್ಲಿ ಆರು ಮಂದಿ ಭಾರತೀಯ ಸಿಬ್ಬಂದಿಯಿದ್ದು, ಸಿಮೆಂಟ್‌ ಹಾಗೂ ನಿರ್ಮಾಣ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದರು. ಸಮುದ್ರದ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ಹಡಗಿಗೆ ನೀರು ನುಗ್ಗಿದ್ದು, ಹಡಗು ಮುಳುಗಡೆಯಾಗಿದೆ. 

ಈ ವೇಳೆ, ಸಿಬ್ಬಂದಿ ಹಡಗಿನಿಂದ ಹಾರಿ ಸಣ್ಣ ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಕೋಸ್ಟ್‌ ಗಾರ್ಡ್‌ ಮಾಹಿತಿ ನೀಡಿದೆ.