;Resize=(412,232))
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಚಿನ್ನಯ್ಯನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಬುರುಡೆ ಪ್ರಕರಣದಲ್ಲಿ ಆಗಸ್ಟ್ 23ರಂದು ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸಿದ್ದರು. ಸೆಪ್ಟೆಂಬರ್ನಲ್ಲಿ ಬೆಳ್ತಂಗಡಿ ನ್ಯಾಯಾಲಯ ಆತನಿಗೆ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆತ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ. ಇದೀಗ ಜಿಲ್ಲಾ ನ್ಯಾಯಾಲಯ ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ₹1 ಲಕ್ಷ ವೈಯಕ್ತಿಕ ಬಾಂಡ್ ಮತ್ತು 12 ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
ಇದೇ ರೀತಿಯ ಅಪರಾಧವನ್ನು ಮಾಡಬಾರದು, ತಪ್ಪಿಸಿಕೊಳ್ಳಬಾರದು, ಬೆದರಿಕೆ, ಪ್ರಚೋದನೆ ಅಥವಾ ಇತರ ರೀತಿಯಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಹಾಳು ಮಾಡಬಾರದು. ಪ್ರಾಸಿಕ್ಯೂಷನ್ ಸಾಕ್ಷ್ಯಗಳನ್ನು ನಾಶಪಡಿಸಬಾರದು. ತನಿಖಾಧಿಕಾರಿಗೆ ಲಭ್ಯವಾಗುವಂತಿರಬೇಕು, ಅಗತ್ಯವಿದ್ದಾಗ ತನಿಖೆ ಸಮಯದಲ್ಲಿ ಸಹಕರಿಸಬೇಕು, ವಿಚಾರಣೆಯ ಎಲ್ಲ ದಿನಾಂಕಗಳಲ್ಲಿ ನಿಯಮಿತವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ನಂತಹ ವಿಳಾಸ ಪುರಾವೆ ದಾಖಲೆಯನ್ನು ಮತ್ತು ಜಾಮೀನು ಬಾಂಡ್ಗಳನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ಅವರ ಜಾಮೀನುದಾರರನ್ನು ಹಾಜರುಪಡಿಸಬೇಕು, ತನ್ನ ವಾಸಸ್ಥಳ ವಿಳಾಸವನ್ನು ಒದಗಿಸಬೇಕು ಮತ್ತು ವಿಳಾಸದಲ್ಲಿ ಬದಲಾವಣೆಯಾಗಿದ್ದರೆ ನ್ಯಾಯಾಲಯಕ್ಕೆ ತಿಳಿಸಬೇಕು, ಮೊಬೈಲ್ ಸಂಖ್ಯೆ, ವಾಟ್ಸಪ್ ಸಂಖ್ಯೆ ಮತ್ತು ಇ-ಮೇಲ್ ಐಡಿ (ಲಭ್ಯವಿದ್ದರೆ) ಒದಗಿಸಬೇಕು, ಪೂರ್ವಾನುಮತಿ ಇಲ್ಲದೆ ಈ ನ್ಯಾಯಾಲಯದ ವ್ಯಾಪ್ತಿಯನ್ನು ಬಿಡಬಾರದು, ಸಾಮಾಜಿಕ ಮಾಧ್ಯಮ, ಟಿವಿ ಚಾನೆಲ್ಗಳು, ಪತ್ರಿಕೆ ಮತ್ತು ಅಂತಹ ಇತರ ಮಾಧ್ಯಮಗಳಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 39/2025 ಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಂದರ್ಶನ/ ಹೇಳಿಕೆಯನ್ನು ನೀಡಬಾರದು, ಬಿಡುಗಡೆಯಾದ ದಿನಾಂಕದಿಂದ ಅಂತಿಮ ವರದಿ ಸಲ್ಲಿಸುವವರೆಗೆ ಪರ್ಯಾಯ ದಿನಗಳಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆ ಎದುರು ಹಾಜರಾತಿಯನ್ನು ದಾಖಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯವು ಚಿನ್ನಯ್ಯನಿಗೆ ವಿಧಿಸಿದೆ.