ಪರಿಸರ ನಿಷ್ಕಾಳಜಿಯಿಂದ ಮುಂದಿದೆ ಅಪಾಯ

KannadaprabhaNewsNetwork | Published : Jun 7, 2025 12:02 AM
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರುತ್ತಿದ್ದರೂ ನಾವು ಪ್ರಕೃತಿ, ಭೂಮಂಡಲದ ಕುರಿತು ಯೋಚನೆ ಮಾಡುತ್ತಿಲ್ಲ. ಈ ನಿಷ್ಕಾಳಜಿ ಹೀಗೆಯೇ ಮುಂದುವರಿದರೆ ಭೂಮಿ ಕೆಲವು ವರ್ಷಗಳಲ್ಲಿ ಬೆಂಕಿಯ ಉಂಡೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರುತ್ತಿದ್ದರೂ ನಾವು ಪ್ರಕೃತಿ, ಭೂಮಂಡಲದ ಕುರಿತು ಯೋಚನೆ ಮಾಡುತ್ತಿಲ್ಲ. ಈ ನಿಷ್ಕಾಳಜಿ ಹೀಗೆಯೇ ಮುಂದುವರಿದರೆ ಭೂಮಿ ಕೆಲವು ವರ್ಷಗಳಲ್ಲಿ ಬೆಂಕಿಯ ಉಂಡೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪದವಿ ಪೂರ್ವ ಕಾಲೇಜು ಹಾಗೂ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉಚಿತವಾಗಿ ಸಿಗುತ್ತಿದ್ದ ನೀರನ್ನು ಇಂದು ಹಣ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ನಾವು ಸೇವಿಸುವ ಆಮ್ಲಜನಕವನ್ನು ಖರೀದಿಸುವ ದಿನಗಳು ಬರುವ ಸಾಧ್ಯತೆಯಿದೆ. ಯುವಜನಾಂಗ ಯಾರನ್ನೋ ಆದರ್ಶವಾಗಿಟ್ಟುಕೊಳ್ಳದೇ ಪರಿಸರ ಸಂರಕ್ಷಣೆಯ ನಾಯಕರಾದ ಸುಂದರಲಾಲ ಬಹುಗುಣ, ಸಾಲುಮರದ ತಿಮ್ಮಕ್ಕರಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಇವರ ಆದರ್ಶಗಳನ್ನು ಯುವಜನಾಂಗ ಮೈಗೂಡಿಸಿಕೊಂಡರೆ ಖಂಡಿತ ಪರಿಸರವನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಮಹತ್ತರ ಕೊಡುಗೆ ನೀಡಬಹುದು ಎಂದರು.ಬರಡು ಭೂಮಿಯೆಂಬ ಹಣೆಪಟ್ಟಿ ಪಡೆದುಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಸಸಿಗಳನ್ನು ನೆಟ್ಟರೆ ಖಂಡಿತ ಈ ಹಣೆಪಟ್ಟಿಯಿಂದ ಹೊರತರಲು ಸಾಧ್ಯವಿದೆ. ಆಮ್ಲಜನಕದ ಮಹತ್ವವು ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಮನದಟ್ಟಾಗಿದೆ. ಎಲ್ಲ ಅಪಾಯಗಳಿಂದ ಭೂಮಿಯನ್ನು ಕಾಪಾಡಬೇಕಾದರೆ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು. ನಮ್ಮ ಮುಂದಿನ ಜನಾಂಗಕ್ಕೆ ನಾವು ಸಮೃದ್ಧವಾದ ಭೂಮಿ, ಪರಿಶುದ್ಧವಾದ ಪರಿಸರವನ್ನು ಉಳಿಸಿ ಹೋಗಬೇಕಾಗಿದೆ ಎಂದು ಎಚ್ಚರಿಸಿದರು.ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಆರ್‌.ಎ.ಪವಾರ, ಅರಣ್ಯ ಇಲಾಖೆಯ ಎಎಸ್‌ಐ ಬಸವರಾಜ ಜಾಧವ, ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಸವರಾಜ ನಾಯ್ಕೋಡಿ, ಡಾ.ಎಸ್.ಬಿ.ಜನಗೊಂಡ, ಎಂ.ಕೆ.ಯಾದವ, ಲಕ್ಷ್ಮಣ ಬ್ಯಾಡಗಿ, ಎಂ.ಆರ್‌.ಮಮದಾಪುರ, ತ್ರಿವೇಣಿ ಮಣ್ಣೂರ, ತೇಜಸ್ವಿನಿ ಖೇಡದ, ಎಸ್.ಜಿ.ಪಾಟೀಲ, ಎಲ್.ಎಲ್.ರಾಠೋಡ, ಪೃಥ್ವಿ ನಾಯ್ಕೋಡಿ, ಮೌನೇಶ ಪತ್ತಾರ ಇತರರು ಇದ್ದರು. ನಂತರ ಮಹಾವಿದ್ಯಾಲಯದ ಆವರಣದಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಸಸಿಗಳನ್ನು ಅರಣ್ಯ ಇಲಾಖೆಯಿಂದ ನೆಡಲಾಯಿತು.