ಆಮ್‌ ಆದ್ಮಿ ಪಕ್ಷದಿಂದ ಬಿಜೆಪಿಗೆ ಆಪತ್ತು

KannadaprabhaNewsNetwork |  
Published : Jan 13, 2025, 12:46 AM IST
ಚಿತ್ರ:ಆಪ್‌ ಜಿಲ್ಲಾಧ್ಯಕ್ಷ ಬಿ.ಜಿ. ಜಗದೀಶ್ | Kannada Prabha

ಸಾರಾಂಶ

ಕಳೆದ ಚುನಾವಣೆಗಿಂತಲೂ ಎಎಪಿ ಹೆಚ್ಚು ಸ್ಥಾನಗಳಿಸಿ ದೆಹಲಿ ಗದ್ದುಗೆ ಏರುವುದು ಖಚಿತ: ಜಗದೀಶ್

ಕನ್ನಡಪ್ರಭ ವಾರ್ತೆ ಸಿರಿಗೆರೆ

ದೇಶದಲ್ಲಿ ಹೊಸ ಸಂಚಲನ ಉಂಟು ಮಾಡುತ್ತಿರುವ ಎಎಪಿ ಪಕ್ಷ ಕುರಿತು ತೀವ್ರ ಆತಂಕಕ್ಕೆ ಒಳಗಾಗಿರುವ ಪ್ರಧಾನಿ ನರೇಂದ್ರ ಮೋದಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಖಚಿತವೆಂಬ ಕಾರಣಕ್ಕೆ ಕೆಳಮಟ್ಟದ ಟೀಕೆ ಮಾಡುತ್ತಿದ್ದಾರೆ ಎಂದು ಎಎಪಿ ಜಿಲ್ಲಾಧ್ಯಕ್ಷ ಬಿ.ಜಿ. ಜಗದೀಶ್ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಆಪ್‍ನಿಂದ ಜನರಿಗೆ ಆಪತ್ತು ಎಂಬ ಮೋದಿ ಅವರ ಹೇಳಿಕೆಯೇ ಅವರಲ್ಲಿನ ಭೀತಿಗೆ ಸಾಕ್ಷಿಯಾಗಿದೆ. ಚುನಾವಣೆ ಸಂದರ್ಭ ಸರ್ಕಾರವೊಂದರ ಲೋಪ ಅಥವಾ ಭ್ರಷ್ಟಾಚಾರ ಕುರಿತು ಮಾತನಾಡಲು ಎಎಪಿ 10 ವರ್ಷದ ಆಡಳಿತದಲ್ಲಿ ಎಳ್ಳಷ್ಟು ಅವಕಾಶ ಕೊಡದ ಕಾರಣಕ್ಕೆ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.

ಆಪ್‍ನಿಂದ ಜನರಿಗೆ ಆಪತ್ತು ಇಲ್ಲವೆಂಬ ಸತ್ಯ ಮೋದಿ ಅವರಿಗೂ ಗೊತ್ತಿದೆ. ಆದರೆ, ಚುನಾವಣೆಯಲ್ಲಿ ಕನಿಷ್ಠ ಮರ್ಯಾದೆ ಉಳಿಸಿಕೊಳ್ಳುವಷ್ಟು ಸ್ಥಾನ ಗಳಿಸಲು ಹೀಗೆ ಹೇಳುತ್ತಿದ್ದಾರೆ. ಪಕ್ಷದ ಸಂಸ್ಥಾಪಕ ಕೇಜ್ರಿವಾಲ್ ಅವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದ್ದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ, ಕೋರ್ಟ್ ಹಂತದಲ್ಲಿನ ವಿಚಾರಣೆಗಳು ಕೇಜ್ರಿವಾಲ್ ಸತ್ಯವಂತ ಎಂದು ದೃಢಪಡಿಸುತ್ತಿವೆ. ಜತೆಗೆ ಈ ಬಾರಿ ಕಳೆದ ಚುನಾವಣೆಗಿಂತಲೂ ಎಎಪಿ ಹೆಚ್ಚು ಸ್ಥಾನ ಗಳಿಸಿ ದೆಹಲಿ ಗದ್ದುಗೆ ಏರುವುದು ಖಚಿತವೆಂದು ಗುಪ್ತದಳದ ಮಾಹಿತಿಯಿಂದ ಆತಂಕಕ್ಕೆ ಒಳಗಾಗಿ ನರೇಂದ್ರ ಮೋದಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ದೆಹಲಿಯಲ್ಲಿ ಹೈಟೆಕ್ ಸರ್ಕಾರಿ ಶಾಲೆಗಳು, ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅನೇಕ ಯೋಜನೆಗಳು ಇಡೀ ದೇಶಕ್ಕೆ ಮಾದರಿ ಆಗಿದೆ. ದೆಹಲಿ ಮಾದರಿ ಯೋಜನೆಗಳನ್ನು ವಿವಿಧ ರಾಜ್ಯಗಳು ಅನುಸರಿಸುತ್ತಿವೆ. ಅನೇಕ ವಿವಿ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗೆ ದೆಹಲಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿವೆ. ಅದರರ್ಥ ಇಡೀ ದೇಶದಲ್ಲಿಯೇ ದೆಹಲಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಜತೆಗೆ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುತ್ತಿದೆ ಎಂಬುದು ಅನೇಕ ಬಾರಿ ಬಹಿರಂಗಗೊಂಡಿದೆ.

ಬಾಯಿ ತೆರೆದರೆ ನಾವು ಸುಸಂಸ್ಕೃತರು ಎಂದು ಹೇಳಿಕೊಂಡು ಬೆನ್ನು ತಟ್ಟಿಕೊಳ್ಳುವ ಬಿಜೆಪಿ ನಾಯಕರು ಮಹಿಳೆಯರ ಕುರಿತು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಸಿ.ಟಿ.ರವಿ, ದೆಹಲಿಯಲ್ಲಿ ಬಿಜೆಪಿಯ ನಾಯಕ ರಮೇಶ್ ಬಿಧೂರಿ ಅಲ್ಲಿನ ಮುಖ್ಯಮಂತ್ರಿ ಅತಿಷಿ ಅವರ ಕುರಿತು ಆಡಿರುವ ಮಾತುಗಳು ಬಿಜೆಪಿಯ ಮನಸ್ಥಿತಿಗೆ ಕೈಗನ್ನಡಿ ಆಗಿದೆ. ಮಹಿಳೆಯರು ರಾಜಕಾರಣಕ್ಕೆ ಪ್ರವೇಶ ಮಾಡಲೇಬಾರದೆಂದು ನಿಲುವು ಆಗಿದೆ ಎಂದು ದೂರಿದ್ದಾರೆ.

ಮಹಿಳೆ, ಮೀಸಲಾತಿ, ಸಂವಿಧಾನ, ಅಂಬೇಡ್ಕರ್ ಕುರಿತು ಅಸಮಾಧಾನ ವ್ಯಕ್ತಪಡಿಸುವ ಬಿಜೆಪಿಗರಿಗೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ಬೇಕಿಲ್ಲ. ಅವರಿಗೆ ದೇಶದ ಮೂವರು ಪ್ರಮುಖ ಉದ್ಯಮಿಗಳ ಬೆಳವಣಿಗೆಯಷ್ಟೇ ಬೇಕಾಗಿದೆ ಎಂದು ಆರೋಪಿಸಿದ್ದಾರೆ.

ಎಲೆಕ್ಟ್ರೋ ಬಾಂಡ್ ಮೂಲಕ ಕೋಟ್ಯಂತರ ರು.ಹಗರಣ ನಡೆಸಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಈ ಕಾರಣಕ್ಕೆ ಭೀತಿಗೆ ಬಿಜೆಪಿ ಒಳಗೊಂಡಿದೆ. ಎಲ್ಲಿ ನೋಡಿದರೂ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಳುಗಿದೆ. ಆದರೂ ಅವರು ಮತ್ತೊಂದು ಪಕ್ಷದ ವಿರುದ್ಧ ಅನಗತ್ಯ ಟೀಕೆ ಮಾಡುವುದು ಕಾಯಿಲೆ ಆಗಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ