ಕನ್ನಡಪ್ರಭವಾರ್ತೆ ಚಾಮರಾಜನಗರ
ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅಸಾಂವಿಧಾನಿಕ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಮಿತಿ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಬಿಜೆಪಿ ವಿರುದ್ಧ ದಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ ಸಿ.ಎಂ.ಶಿವಣ್ಣ ಮಾತನಾಡಿ, ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರನ್ನು ಬಿಜೆಪಿ ಎತ್ತಿಕಟ್ಟಿ ಜಾತ್ಯತೀತ ಅಂಬೇಡ್ಕರ್ವಾದಿ ಸಚಿವರಾದ ಪ್ರಿಯಾಂಕಾ ಖರ್ಗೆ ವಿರುದ್ದ ಅಸಂಸದೀಯ ಪದ ಬಳಕೆ ಮಾಡಿ ಹೇಳಿಕೆ ನೀಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಛಲವಾದಿ ನಾರಾಯಣಸ್ವಾಮಿ, ಎನ್ .ರವಿಕುಮಾರ್ ಎಂಲ್ಸಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಜನಾ ಮಂಡಳಿಯ ಸದಸ್ಯರಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇತರ ದಲಿತ ನಾಯಕರನ್ನು ವಿನಾಕಾರಣ ನಿಂದಿಸುವ ಕೀಳುಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ. ಅವರು ಜಾತಿವಾದವನ್ನು ಬೆಂಬಲಿಸುವವರ ಹಾಗೂ ಸಂವಿಧಾನ ವಿರೋಧಿಗಳ ಜೊತೆಯಲ್ಲಿ ನಿಂತಿದ್ದಾರೆ. ಮನುವಾದವೇ ಅವರ ಮೂಲ ಮಂತ್ರ, ವರ್ಣಾಶ್ರಮ ಧರ್ಮದ ಅಸಮಾನ ನೆಲೆಗಳೇ ಅವರ ಅಸ್ತ್ರಗಳಾಗಿವೆ. ಅಂತಹವರೊಂದಿಗೆ ಸೇರಿ ನೀವು ದಲಿತರಿಗೆ ನ್ಯಾಯ ಕೊಡಿಸುವುದಕ್ಕೆ ಆಗುತ್ತದೆ? ಅವರು ಹೇಳಿದ ಕೆಲಸ ಮಾಡಲು ನಿಮ್ಮಂತವರು ಮನುವಾದಿಗಳಿಗೆ ಬೇಕು. ನಿಮ್ಮ ಕೈಯಿಂದಲೇ ದಲಿತರನ್ನು ಹೇಗೆ ಅವಮಾನಿಸಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿಯೇ ಅವರು ನಿಮ್ಮಂತಹವರನ್ನು ಇಟ್ಟುಕೊಂಡಿದ್ದಾರೆ’ ಮನುವಾದಿ ನಾರಾಯಣಸ್ವಾಮಿ ಪ್ರಿಯಾಂಕ್ ಖರ್ಗೆ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವಹೇಳನ ಕಾರಿ ಹೇಳಿಕೆ ನಿಲ್ಲಿಸದೆ ಹೋದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೊತ್ತಲವಾಡಿ ಶಿವು, ಯಳಂದೂರು ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮಧು, ಮಹಾದೇವಸ್ವಾಮಿ, ಆಟೋ ಉಮೇಶ್, ಉಮೇಶ್ ಕುಮಾರ್, ಪ್ರಕಾಶ್, ಪುಟ್ಟನಂಜಮ್ಮ.ಮಹದೇವಮ್ಮ, ಗೌರಮ್ಮ, ಇತರರು ಭಾಗವಹಿಸಿದ್ದರು.