ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ದೇವಿಯ ಒಂಬತ್ತು ವಿಧದ ರೂಪುಗಳನ್ನು ಒಂದೊಂದು ದಿನವೂ ವಿಶೇಷವಾಗಿ ಆರಾಧಿಸಲ್ಪಡುವುದೇ ನವರಾತ್ರಿ ಹಬ್ಬದ ವಿಶೇಷ. ಈ ಹಬ್ಬಕ್ಕೆ ಗೊಂಬೆಗಳು ಮತ್ತಷ್ಟು ಮೆರಗು ನೀಡುತ್ತವೆ. ದಸರಾ ಗೊಂಬೆ ಪ್ರದರ್ಶನ ರಾಜ್ಯದ ಅನೇಕ ಕಡೆ ಸಂಪ್ರಾದಾಯಿಕ ಆಚರಣೆಯಾಗಿದೆ.ನಾಡ ಹಬ್ಬ ದಸರಾ ಪ್ರಯುಕ್ತ ಅಂತಹ ವಿವಿಧ ಪೌರಾಣಿಕ ಕಥೆ ಸಾರುವ ಮನಮೋಹಕ ದಸರಾ ಬೊಂಬೆಗಳ ಪ್ರದರ್ಶನವನ್ನು ಪಟ್ಟಣದ ಆಚಾರ ಬಡಾವಣೆಯ ಡಾ.ರಮೇಶಕುಮಾರ ಹಾಗೂ ಅರ್ಚನಾ ದಂಪತಿಗಳ ನಿವಾಸದಲ್ಲಿ ಕಾಣಬಹುದಾಗಿದೆ.
ದಶಾವತಾರದ ಗೊಂಬೆಗಳು ಸೇರಿದಂತೆ ವಿವಿಧ ಕಥಾ ಪ್ರಸಂಗಗಳುಳ್ಳ ಗೊಂಬೆಗಳನ್ನು ಜೋಡಿಸಿ ದಸರಾ ಹಬ್ಬದ ಪೂಜಾ ವಿಧಿ ವಿಧಾನಗಳನ್ನು ಮಾಡಲಾಗುತ್ತಿದೆ. ಈ ಬಾರಿ 11 ದಿನಗಳ ಕಾಲ ದಶಾವತಾರ ಕಲ್ಪನೆ ಹೊಂದಿರುವ ಶಕ್ತಿ ದೇವತೆ ದುರ್ಗಾಮಾತೆ, ಅಷ್ಟ ಲಕ್ಷ್ಮೀ ಗೌರಿ, ಪಾರ್ವತಿ, ಈಶ್ವರ, ರಾಮಲಕ್ಷ್ಮಣ, ಸೀತೆ, ಲಕ್ಷ್ಮೀ ವೆಂಕಟೇಶ್ವರ, ಸರಸ್ವತಿ ಮುಂತಾದ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.ದಶಾವಾತಾರ, ಕೃಷ್ಣವತಾರ, ನವದುರ್ಗೆಯರ ವೈಭವ, ಮದುವೆ ದಿಬ್ಬಣ, ಜಟ್ಟಿ ಕಾಳಗ, ಶಿವನ ಕೈಲಾಸ, ಕೃಷ್ಣ, ನಾರಾಯಣರು ಸೇರಿದಂತೆ ಇನ್ನೂ ವಿವಿಧ ಆಕರ್ಷಕ ಗೊಂಬೆಗಳು ಗಮನ ಸೆಳೆಯುತ್ತಿವೆ.
ಕಳೆದ 7 ವರ್ಷಗಳಿಂದ ಈ ದಂಪತಿ ದಸರಾ ಗೊಂಬೆಗಳ ಪ್ರದರ್ಶನ ವನ್ನು ಪ್ರತಿ ವರ್ಷ ದಸರಾ ಹಬ್ಬದಲ್ಲಿ ಮಾಡುತ್ತಾ ಪೂಜಿಸುತ್ತಾ ಬಂದಿದ್ದಾರೆ.ಈ ಗೊಂಬೆಗಳು 11 ದಿವಸ ನಿತ್ಯವೂ ಬೆಳಿಗ್ಗೆ, ಸಂಜೆ ಪೂಜಿಸಲಾಗುತ್ತದೆ, ನಮ್ಮ ಹಿರಿಯರು ಸಂಪ್ರದಾಯದಂತೆ ನಾವು ಕೂಡ ಈ ಬಾರಿ 11 ದಿನಗಳ ಕಾಲ ಪೂಜೆ ಮಾಡಿ ವಿಜಯದಶಮಿ ಯಂದು ಸಮಾಪ್ತಿ ಮಾಡುತ್ತೇವೆ ಎನ್ನುತ್ತಾರೆ ಗೊಂಬೆಗಳ ಆಯೋಜಕರಾದ ಅರ್ಚನಾ ಎಂ.ಆರ್ ಹಾಗೂ ಅವರ ಪತಿ ಡಾ.ರಮೇಶ ಕುಮಾರ ದಂಪತಿ.
ಚಿತ್ರ: ಹರಪನಹಳ್ಳಿ ಪಟ್ಟಣದ ಆಚಾರ ಬಡಾವಣೆಯಲ್ಲಿ ಡಾ.ರಮೇಶಕುಮಾರ ಹಾಗೂ ಅರ್ಚನಾ ದಂಪತಿಗಳ ನಿವಾಸದಲ್ಲಿ ಆಯೋಜಿಸಿರುವ ದಸರಾ ಬೊಂಬೆಗಳ ಆಕರ್ಷಣೆ.