ಕಂಪ್ಲಿ: ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕಂಪ್ಲಿ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಸೋಮವಾರ ಆಚರಿಸಲಾಯಿತು.
ತಹಶೀಲ್ದಾರ್ ಶಿವರಾಜ ಶಿವಪುರ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನಕದಾಸರ ಮೊದಲ ಹೆಸರು ತಿಮ್ಮಪ್ಪನಾಯಕ. ಕನಕದಾಸರು ಕಾಗಿನೆಲೆಯ ಅಂಕಿತನಾಮದಿಂದ ಅನೇಕ ಕೀರ್ತನೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 16ನೇ ಶತಮಾನದಲ್ಲಿ ಅನೇಕ ದಾಸರು ಬಂದರು ಅವರಲ್ಲೆಲ್ಲಾ ಶ್ರೇಷ್ಠ ದಾಸರಾಗಿ, ಸಂತರಾಗಿ ಬದುಕಿದ್ದರು. ಅವರ ಭಕ್ತಿ ಎಷ್ಟಿತ್ತೆಂದರೆ ಭಗವಂತ ಶ್ರೀಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿಕೊಂಡರು. ಇವರು ಭಕ್ತಿ ಚಳುವಳಿಯ ಜೊತೆಗೆ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಮಾನವೀಯತೆಯನ್ನು ಎತ್ತಿಹಿಡಿದು ಅರಿವಿನ ಬೆಳಕಿನ ದಾರಿಯನ್ನು ತೋರಿಸಿದ್ದಾರೆ. ಇವರ ಸಾಹಿತ್ಯ ಜನರಾಡುವ ಭಾಷೆಯಲ್ಲಿದ್ದುದರಿಂದ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಾಹಿತ್ಯವಾಗಿ ಜೀವಂತಿಕೆಯನ್ನು ಪಡೆದಿದೆ ಎಂದರು.ಕಂಪ್ಲಿ ತಾಲೂಕು ಕುರುಬರ ಸಂಘದ ತಾಲೂಕು ಅಧ್ಯಕ್ಷ ಗೌಡ್ರು ಡಿಂಡಿ ಮಹರ್ಷಿ ಮಾತನಾಡಿ ಕನಕದಾಸರು ಇಡೀ ಮನುಕುಲಕ್ಕೆ ನೀಡಿದ ಕೊಡುಗೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಇಒ ಆರ್.ಕೆ. ಶ್ರೀಕುಮಾರ, ಶಿರಸ್ತೇದಾರರಾದ ಪಂಪಾಪತಿ, ಎಸ್.ಡಿ. ರಮೇಶ, ಕಂದಾಯ ಅಧಿಕಾರಿ ಜಗದೀಶ, ಪ್ರಥಮ ದರ್ಜೆ ಸಹಾಯಕ ಮಾಲತೇಶ ದೇಶಪಾಂಡೆ, ಗ್ರಾಮ ಆಡಳಿತ ಅಧಿಕಾರಿಗಳಾದ ಲಕ್ಷ್ಮಣನಾಯ್ಕ್, ಮಂಜುನಾಥ ಶಿವರುದ್ರಯ್ಯ, ವನಿತಾ, ನಿಲಯಪಾಲಕ ವಿರುಪಾಕ್ಷಿ, ಇಸಿಓ ಟಿ.ಎಂ.ಬಸವರಾಜ, ಕಂಪ್ಲಿ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಾದ ಕೆ.ದೊಡ್ಡಬಸಪ್ಪ ಗೋನಾಳ, ಕೆ.ಮಲ್ಲಿಕಾರ್ಜುನ, ಮಂಜುನಾಥ ಜೀನೂರು, ಗಣಪತಿ, ಕರೇಗೌಡ್ರು ಪಾಂಡುರಂಗಪ್ಪ, ಯು.ಫಕೀರಪ್ಪ, ಗುಡ್ರುನೀಲಪ್ಪ, ಕುರುಬರ ಹುಸೇನಪ್ಪ, ಕನಕ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಮುತ್ತಣ್ಣ, ಬೀರಲಿಂಗಪ್ಪ, ಲಿಂಗಪ್ಪ, ರಂಗಪ್ಪ, ಹರಿನಾಥ, ಆನಂದ ಸಿಬ್ಬಂದಿ, ಪದಾಧಿಕಾರಿಗಳು, ಮುಖಂಡರಿದ್ದರು.