ಕಲಬುರಗಿ: ಎಸ್ಪಿಜೆ ಮ್ಯೂವಿಸ್ ಅರ್ಪಿಸುವ ದಾಸವರೇಣ್ಯ ಶ್ರೀ ವಿಜಯದಾಸರು ಚಲನಚಿತ್ರ ಏ.19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ತ್ರಿವಿಕ್ರಮಜೋಶಿ ಹಾಗೂ ನಿರ್ದೇಶಕ ಮಧುಸೂದನ ಹವಲ್ದಾರ್ ತಿಳಿಸಿದರು.
ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಭಗವಂತನ ಅಸ್ತಿತ್ವ ತೋರಿಸಿಕೊಟ್ಟಿರುವ ದಾಸ ಸಾಹಿತ್ಯ ಕೇವಲ ಧಾರ್ಮಿಕ ಆಚರಣೆಗೆ ಸೀಮೀತವಾಗಿಲ್ಲ.ಸಮಾಜ ತಿದ್ದುವ ಕಾರ್ಯ ದಾಸರು ಮಾಡಿದ್ದಾರೆ.
ದಾಸರ ಸಮಾಜಮುಖಿ ಕೆಲಸಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿನಲ್ಲಿ ನಮ್ಮ ತಂಡ ಶ್ರಮಿಸುತ್ತಿದೆ ಎಂದು ಹೇಳಿದರು.ಈ ಮೊದಲು ಜಗನ್ನಾಥ ದಾಸರು ಮತ್ತು ಪ್ರಸನ್ನ ವೆಂಕಟ ದಾಸರು ಎರಡು ಚಲನಚಿತ್ರಗಳು ನಿರ್ಮಾಣವಾಗಿದ್ದು ಭಕ್ತರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ದಾಸವರೇಣ್ಯ ಶ್ರೀ ವಿಜಯದಾರು ಏ. 19 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಶರಣ ಸಾಹಿತ್ಯದ ಪ್ರತೀಕವಾಗಿರುವ "ಮೋಳಿಗೆ ಮಾರಯ್ಯ " ಚಲನ ಚಿತ್ರ ಕೂಡ ಇದೆ ತಂಡದಿಂದ ನಿರ್ಮಿಸಲಾಗುತ್ತಿದೆ. ಈಗಾಗಲೆ ಚಿತ್ರಿಕರಣಕ್ಕೆ ಸಿದ್ದತೆ ನಡೆಯುತ್ತಿದೆ. ವಚನ ಮತ್ತು ದಾಸ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಉದ್ದೇಶ ಹೋಂದಲಾಗಿದೆ ಎಂದು ಅವರು ಹೇಳಿದರು.
ಪ್ರಮುಖರಾದ ಪಂ.ಗೋಪಾಲಾಚಾರ್ಯ ಅಕಮಂಚಿ, ರವಿ ಲಾತೂರಕರ್, ವ್ಯಾಸರಾಜ ಸಂತೆಕೆಲ್ಲೂರ, ರಾಮರಾವ ಗಣೇಕರ್,ಗುಂಡಾಚಾರ್ಯ ನರಬೋಳ, ಶಿರವಾಳ ರಾಘಣ್ಣ ಸುದ್ದಿ ಗೋಷ್ಠಿಯಲ್ಲಿದ್ದರು.