ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:
ಮಠಗಳ ದಾಸೋಹ ಹಸಿವು ನೀಗಿಸಿದರೆ, ಅದರ ಶೈಕ್ಷಣಿಕ ಕೇಂದ್ರಗಳು ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯ ರೂಪಿಸುತ್ತಿರುವುದು ಶ್ಲಾಘನೀಯ ಎಂದು ಗುಳೇದಗುಡ್ಡದ ನಿವೃತ್ತ ಪ್ರಾಧ್ಯಾಪಕ ಎಂ.ಪಿ.ನೀಲಕಂಠಮಠ ಹೇಳಿದರು.ಪಟ್ಟಣದ ಈರಕಾರ ಮುತ್ಯಾ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಸನ್ಮಾನ ಸಮಾರಂಭದಲ್ಲಿ ದಾಸೋಹ ಮತ್ತು ಶೈಕ್ಷಣಿಕ ಕ್ರಾಂತಿಯಲ್ಲಿ ಮಠಗಳು ಕುರಿತು ಮಾತನಾಡಿದರು. ೧೮೫೬ ರಲ್ಲಿ ಚಿತ್ರದುರ್ಗದ ಜಗದ್ಗುರುಗಳು, ಡೆಪ್ಯೂಟಿ ಚನ್ನಬಸಪ್ಪನವರು ಮೊದಲ ಘಟದಲ್ಲಿ ದಾಸೋಹ ಆರಂಭ ಮಾಡುವ ಜೊತೆಗೆ ಅಕ್ಷರ ದಾಸೋಹ ಆರಂಭಿಸಿದರು. ದ್ವಿತೀಯ ಘಟದಲ್ಲಿ ಧಾರವಾಡದ ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಮೂರನೇ ಘಟಕದಲ್ಲಿ ಬಂಥನಾಳ ಶ್ರೀಗಳು, ಬಾಗಲಕೋಟದಲ್ಲಿ ಗುರುಬಸವ ಸ್ವಾಮೀಜಿ, ಸುತ್ತೂರು, ತುಮಕೂರು, ಭಾಲ್ಕಿ, ಗುಳೇದಗುಡ್ಡದ ಗುರುಸಿದ್ದೇಶ್ವರರು, ಧಾರವಾಡದ ಮುರಘಾಮಠ, ಹುಬ್ಬಳ್ಳಿಯ ಮೂರುಸಾವಿರ ಮಠ, ಗದಗದ ತೋಂಟದಾರ್ಯ ಮಠ ಸೇರಿದಂತೆ ಅನೇಕ ಮಠಗಳು ಕೈಂಕರ್ಯ ಮಾಡುತ್ತಿವೆ ಎಂದರು.ಮಹಾಸಭಾದ ಜಿಲ್ಲಾಧ್ಯಕ್ಷ ವ್ಹಿ.ಸಿ.ನಾಗಠಾಣ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ವೀರಶೈವ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಅನ್ನುವ ರೂಢಿಯಿದೆ. ಇವೆರಡೂ ಒಂದೇ. ಹಿಂದೆ ಸಿದ್ದರಾಮಯ್ಯನವರ ಬೆಂಬಲದೊಂದಿಗೆ ಎಂ.ಬಿ.ಪಾಟೀಲರು, ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ ಇವರೆಲ್ಲರೂ ಸೇರಿ ಲಿಂಗಾಯತ ಹೋರಾಟ ಆರಂಭಿಸಿ ಗೊಂದಲ ಸೃಷ್ಟಿಸಿದರು. ವಿಜಯಪುರದಲ್ಲಿನ ವೀರಶೈವ ಲಿಂಗಾಯತ ಭವನದಲ್ಲಿ ಸಮಾಜದ ಬಡಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಲಿಂಗಾಯತ ಎಂದು ಕಟ್ಟುನಿಟ್ಟಾಗಿ ಹೇಳುವವರು ತಮ್ಮ ಮನೆಗಳಲ್ಲಿನ ಜಗಲಿಗಳ ಮೇಲೆ ಕೇವಲ ಲಿಂಗವೊಂದನ್ನೇ ಇರಿಸಿ ಪೂಜೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಉದ್ಘಾಟಿಸಿ ಮಾತನಾಡಿದರು, ಹಾನಗಲ್ ಕುಮಾರಸ್ವಾಮೀಜಿಯವರು ಮಹಾಸಭಾ ಹುಟ್ಟು ಹಾಕಿದರು. ಇಂದು ಲಿಂಗಾಯತ, ವೀರಶೈವ ಬೇರೆ ಬೇರೆ ಎಂದು ಹೇಳುತ್ತಿರುವದು ಸರಿಯಲ್ಲ ಎಂದು ಹೇಳಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಸಾಹಿತಿ ಸಹದೇವ ಗುಡದಿನ್ನಿ ಮಾತನಾಡಿದರು.ಮಹಾಸಭಾದ ನಿರ್ದೇಶಕ ಬಿ.ಎಸ್.ಬಿರಾದಾರ, ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ಸಂಗಮ ಮಾತನಾಡಿದರು. ಶಿವು ಹೆರಕಲ್ ಪ್ರಾರ್ಥಿಸಿದರು. ಶಶಿ ಪಾಟೀಲ ಸ್ವಾಗತಿಸಿದರು. ಪ್ರಭಾಕರ ಖೇಡದ ನಿರೂಪಿಸಿದರು. ಶ್ರೀಶೈಲ ಶಿರಗುಪ್ಪಿ ವಂದಿಸಿದರು.
ಈ ವೇಳೆ ವಿದ್ಯಾರ್ಥಿಗಳಿಂದ ವಚನ ನೃತ್ಯ ಜರುಗಿತು. ಮಹಾಸಭಾದ ಇಂಡಿ ತಾಲೂಕಿನ ಅಧ್ಯಕ್ಷ ಪ್ರಭುಲಿಂಗ ಕತ್ತಿ, ಮುದ್ದೇಬಿಹಾಳದ ವೆಂಕನಗೌಡ ಪಾಟೀಲ, ಸಿಂದಗಿಯ ಅಶೋಕ ವಾರದ, ವಿಜಯಪುರದ ಬಸವರಾಜ ಇಟ್ಟಂಗಿ, ಬಸವನಬಾಗೇವಾಡಿ ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.