-ಪಾರ್ಕಿಂಗ್, ರಸ್ತೆ ಸಂಚಾರ ಸೇರಿದಂತೆ ಮೂಲಭೂತ ಸವಲತ್ತುಗಳ ಪರಿಶೀಲನೆ, ಡಿ. 24 ರಿಂದ 3 ದಿನ ದತ್ತ ಜಯಂತಿ ಉತ್ಸವ, ಪ್ರವಾಸಿಗರಿಗೆ ಗಿರಿ ಪ್ರದೇಶದಲ್ಲಿ ನಿರ್ಬಂಧಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಡಿ. 24 ರಿಂದ 3 ದಿನಗಳ ಕಾಲ ಆಯೋಜನೆ ಮಾಡಿರುವ ದತ್ತಜಯಂತಿ ಉತ್ಸವಕ್ಕೆ ಸಕಾಲ ಸಿದ್ಧತೆಗಳು ನಡೆಯುತ್ತಿವೆ. ಇತ್ತ ಜಿಲ್ಲಾಡಳಿತ ಮೂಲಭೂತ ಸವಲತ್ತು ಹಾಗೂ ಕಾನೂನು ಸುವ್ಯವಸ್ಥೆ ಗಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಹಾಗೂ ಇತರೆ ಅಧಿಕಾರಿಗಳು, ದತ್ತಪೀಠ ಸಂವರ್ಧನಾ ಸಮಿತಿಯವರು ಗುರುವಾರ ದತ್ತಪೀಠ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ದತ್ತಭಕ್ತರು ಆಗಮಿಸಲಿದ್ದಾರೆ. ದತ್ತ ಪೀಠಕ್ಕೆ ಹೋಗುವ ಮಾರ್ಗದಲ್ಲಿ ಲಾಂಗ್ ಚಸ್ಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಇಲ್ಲ, ಹಾಗಿದ್ದೂ ಭಕ್ತರು ಬಸ್ಸುಗಳಲ್ಲಿ ಬಂದರೆ ಆ ಬಸ್ಸುಗಳನ್ನು ಅಲ್ಲಂಪುರ ಬಳಿ ನಿಲ್ಲಿಸಲು ಮಾಡಿರುವ ಪಾರ್ಕಿಂಗ್ ಸ್ಥಳವನ್ನು ಪರಿಶೀಲನೆ ನಡೆಸಲಾಯಿತು.ನಂತರ ಹೊನ್ನಮ್ಮನಹಳ್ಳ, ದತ್ತಪೀಠದಲ್ಲಿರುವ ಬ್ಯಾರಿಕೇಡ್, ಗುಹೆಯ ಒಳ ಭಾಗ, ಗುಹೆಯಿಂದ ಹೊರಗೆ ಹೋಗುವ ಮಾರ್ಗ, ಹೋಮ ನಡೆಯುವ ಸ್ಥಳ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಯಿತು. ದತ್ತಪೀಠದಲ್ಲಿ ಉತ್ಸವದ ಸಂದರ್ಭದಲ್ಲಿ ವಿದ್ಯುತ್ ನಿಲುಗಡೆಯಾಗದಂತೆ ಮೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದರು.
ದತ್ತಪೀಠಕ್ಕೆ ಭೇಟಿ ನೀಡಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ದತ್ತ ಜಯಂತಿ ಸಂದರ್ಭ ದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 62 ಮಂದಿ ವಿಶೇಷ ಕಾರ್ಯನಿರ್ವಹಕ ದಂಡಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಇದರ ಜತೆಗೆ ಎಲ್ಲಲ್ಲಿ ಚೆಕ್ ಪೋಸ್ಟ್ ತೆರೆಯಬೇಕೆಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ------ ಬಾಕ್ಸ್ ---ಗಿರಿ ಪ್ರದೇಶದಲ್ಲಿ ಪ್ರವಾಸಿಗರಿಗೆ ನಿರ್ಬಂಧ
ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ ನಡೆಯುವ ಹಿನ್ನಲೆಯಲ್ಲಿ ಗಿರಿ ಪ್ರದೇಶದಲ್ಲಿ ಡಿ. 22 ರಿಂದ ಡಿ. 27 ರವರೆಗೆ ನಿರ್ಬಂಧ ಹೇರಲಾಗಿದೆ.ಡಿ. 24 ರಿಂದ ಡಿ. 26 ರವರೆಗೆ ದತ್ತಪೀಠದಲ್ಲಿ ದತ್ತ ಜಯಂತಿ ನಡೆಯುವ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ದತ್ತಪೀಠಕ್ಕೆ ತೆರಳುವ ಮಾರ್ಗ ಕಿರಿದಾಗಿದ್ದು, ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಾಗಿ ಅನಾನುಕೂಲವಾಗುವ ಸಂಭವ ಇದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶದಲ್ಲಿ ತಿಳಿಸಿದ್ದಾರೆ.
ಡಿ. 22 ರಿಂದ ಡಿ.27 ರವರೆಗೆ ಪ್ರವಾಸಿಗರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಐ.ಡಿ.ಪೀಠ, ಗಾಳಿ ಕೆರೆ ಮತ್ತು ಮಾಣಿಕ್ಯಧಾರಾ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳುವುದನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ. 14 ಕೆಸಿಕೆಎಂ 1ದತ್ತಜಯಂತಿ ಹಿನ್ನಲೆಯಲ್ಲಿ ದತ್ತಪೀಠಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.