ದತ್ತ ಜಯಂತಿ ಉತ್ಸವ: ಮಾಲೆ ಧರಿಸಿದ ಭಕ್ತರು

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ದತ್ತಪೀಠದ ಆಸ್ತಿ ವಶಕ್ಕೆ ಪಡೆಯಬೇಕು: ಸಿ.ಟಿ. ರವಿದತ್ತ ಜಯಂತಿ ಉತ್ಸವ: ಮಾಲೆ ಧರಿಸಿದ ಭಕ್ತರುವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಆಶ್ರಯದಲ್ಲಿ ನಡೆಯಲಿರುವ ಉತ್ಸವ

- ಮಾಜಿ ಸಚಿವ ಸಿ.ಟಿ. ರವಿ ಸೇರಿ ಸಂಘ ಪರಿವಾರದ ಮುಖಂಡರಿಂದ ಮಾಲಾಧಾರಣೆ । ಡಿ.24 ರಿಂದ ಮೂರು ದಿನ ಉತ್ಸವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಆಶ್ರಯದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಸಂಘಪರಿವಾರದ ಮುಖಂಡರು ಭಾನುವಾರ ಜಿಲ್ಲೆಯಾದ್ಯಂತ ದತ್ತಮಾಲೆ ಧರಿಸಿದರು.

ಮಾಜಿ ಸಚಿವ ಸಿ.ಟಿ. ರವಿ, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಚಾಲಕ ರಘು ಸಕಲೇಶಪುರ ಸೇರಿದಂತೆ ವಿಶ್ವಹಿಂದೂ ಪರಿಷತ್, ಭಜರಂಗದಳ ಮುಖಂಡರು ಹಾಗೂ ಕಾರ್ಯಕರ್ತರು ಮಾಲೆಯನ್ನು ಧರಿಸಿದರು.

ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಅರ್ಚಕರಾದ ರಘುನಾಥ ಅವದಾನಿ, ರಾಘವೇಂದ್ರ, ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ಗಣಪತಿ, ದತ್ತಾತ್ರೇಯ ಹೋಮ ಹಾಗೂ ವಿಶೇಷ ಪೂಜೆ ನಂತರ ಜಿಲ್ಲೆಯ ಹಲವೆಡೆಯಿಂದ ಆಗಮಿಸಿದ ದತ್ತಭಕ್ತರು ದತ್ತಾತ್ರೇಯ ಸ್ತೋತ್ರ ಹಾಗೂ ಭಜನೆ ಮಾಡುತ್ತಾ ಕೇಸರಿ ಶಾಲು ಧರಿಸಿ ಮಾಲೆಧಾರಣೆ ಮಾಡಿದರು. ವಿಶ್ವಹಿಂದೂ ಪರಿಷತ್ ಮುಖಂಡರಾದ ಆರ್.ಡಿ. ಮಹೇಂದ್ರ, ರಂಗನಾಥ್, ಯೋಗೀಶ್‌ ರಾಜ್ ಅರಸ್, ಸಿ.ಡಿ. ಶಿವಕುಮಾರ್, ಶಶಾಂಕ್, ಶರತ್ ಸೇರಿದಂತೆ ಹಲವು ಮಂದಿ ದತ್ತಮಾಲೆಯನ್ನು ಧರಿಸಿದರು.

ಮಾಲೆ ಧರಿಸಿರುವ ಭಕ್ತರು ಡಿ.26ರವರೆಗೆ ಪ್ರತಿ ನಿತ್ಯ ಪೂಜೆ, ಭಜನೆ ಕೈಗೊಳ್ಳಲಿದ್ದಾರೆ. ಡಿ. 24 ರಿಂದ ಮೂರು ದಿನಗಳ ಕಾಲ ದತ್ತ ಜಯಂತಿ ಉತ್ಸವ ನಡೆಯಲಿದ್ದು, ಮೊದಲನೇ ದಿನ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ, ಡಿ. 25 ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ, ಡಿ. 26 ರಂದು ರಾಜ್ಯದ ವಿವಿಧೆಡೆಯಿಂದ ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಲಿದ್ದಾರೆ.

----- ಬಾಕ್ಸ್ ------

ದತ್ತಪೀಠದ ಆಸ್ತಿ ವಶಕ್ಕೆ ಪಡೆಯಬೇಕು: ಸಿ.ಟಿ. ರವಿ

ಚಿಕ್ಕಮಗಳೂರು: ಈ ಹಿಂದೆ ದತ್ತಾತ್ರೇಯ ಹೆಸರಿನಲ್ಲಿದ್ದ ಜಮೀನು ವಶಕ್ಕೆ ತೆಗೆದುಕೊಳ್ಳಬೇಕು, ಈ ಅಕ್ರಮದಲ್ಲಿರುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಪ್ರಭಾವಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠವೆ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ, ದರ್ಗಾ ಜಾಗರ ಹೋಬಳಿ ನಾಗೇನಹಳ್ಳಿ ಯಲ್ಲಿದೆ, ಸಮಾಧಿ ಅಲ್ಲೇ ಇದೆ. ಇದು, ದಾಖಲೆಯಲ್ಲಿದೆ. ಸಿವಿಲ್ ವ್ಯಾಜ್ಯವಾಗಿರು ವುದರಿಂದ ಇದನ್ನು ಮನಗಂಡು ಸರ್ಕಾರವೇ ಸಮಿತಿ ರಚನೆ ಮಾಡಿ ಇತ್ಯರ್ಥಪಡಿಸಬೇಕು ಎಂದು ಹೇಳಿದರು.

ಭೂ ಒಡೆತನದ ಹಕ್ಕು ಕಾಯ್ದೆ ಜಾರಿಗೆ ಬರುವ ಮೊದಲು 1861 ಎಕರೆ ಭೂಮಿ ದತ್ತಾತ್ರೇಯ ಹೆಸರಿನಲ್ಲಿತ್ತು. ಇದನ್ನು ನಾವು ಹೇಳತ್ತಿರೋದಲ್ಲ, ಕಂದಾಯ ಇಲಾಖೆಗಳ ದಾಖಲೆಗಳು ಹೇಳುತ್ತಿವೆ. ದತ್ತಪೀಠಕ್ಕೆ ಸೇರಿರುವ ಸ್ಥಿರ ಮತ್ತು ಚರ ಆಸ್ತಿ ಅಕ್ರಮವಾಗಿ ಪರಭಾರೆಯಾಗಿದೆ ಎಂದರು.

ಈ ಸಂಬಂಧ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಈ ಹಿಂದೆ ಪೂವಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಸಮಿತಿ ಮಾಡಿತ್ತು. ಆ ಸಮಿತಿ ಅಕ್ರಮ ನಡೆದಿರುವುದು ನಿಜ ಎಂದು ವರದಿ ನೀಡಿದೆ. ಚರ ಮತ್ತು ಸ್ಥಿರ ಆಸ್ತಿ ನಕಲಿ ದಾಖಲೆಗಳ ಮೂಲಕ ಪ್ರಭಾವಿಗಳು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಂದಾಯ ಇಲಾಖೆ ರಾಜ್ಯಮಟ್ಟದ ಅಧಿಕಾರಿಗಳು ತನಿಖೆ ನಡೆಸಲು ಈಗಾಗಲೇ ಸರ್ಕಾರ ಸೂಚನೆ ಕೊಟ್ಟಿದೆ. ಆ ಸಮಿತಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಬೇಕು ಮತ್ತು ದಾಖಲೆ ಪರಿಶೀಲಿಸಬೇಕು ಎಂದು ಹೇಳಿದರು.

ದತ್ತಪೀಠ ಆಂದೋಲನ ಭಕ್ತಿ ಮತ್ತು ಶಕ್ತಿಯ ಆಂದೋಲನ, ದತ್ತಮಾಲಾ ಧಾರಣೆ ಇಂದು ಆರಂಭವಾಗಿದೆ. ಡಿ. 26 ರಂದು ದತ್ತ ಜಯಂತಿ ದಿನ ದತ್ತಪಾದುಕೆಗಳ ದರ್ಶನದೊಂದಿಗೆ ಈ ವರ್ಷದ ದತ್ತ ಜಯಂತಿಗೆ ತೆರೆ ಬೀಳಲಿದೆ. ಸರ್ಕಾರಕ್ಕೆ ದತ್ತಾತ್ರೇಯ ಪೂಜಾ ಸಮಿತಿ, ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮೂಲಕ ವಿನಂತಿ ಮಾಡಿದ್ದೇವೆ. ದತ್ತಪೀಠಕ್ಕೆ ಬರುವ ಭಕ್ತರಿಗೆ ಅಗತ್ಯವಿರುವ ಮೂಲಭೂತ ಸವಲತ್ತು ಒದಗಿಸಿಕೊಡಬೇಕು, ದತ್ತ ಪಾದುಕೆಗಳ ದರ್ಶನ ಆಗುವ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ವಿನಂತಿ ಮಾಡಿದ್ದೇವೆ.

ಕಳೆದ ವರ್ಷ ಯಾವ ರೀತಿಯಲ್ಲಿ ಪದ್ಧತಿ ನಡೆದುಕೊಂಡು ಬಂದಿತ್ತೋ ಅದೆಲ್ಲವನ್ನು ಮುಂದುವರೆಸಲು ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇವೆಂದು ಜಿಲ್ಲಾಡಳಿತ ಹೇಳಿದೆ ಎಂದರು.

17 ಕೆಸಿಕೆಎಂ 1

ದತ್ತಜಯಂತಿ ಹಿನ್ನಲೆಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಹಾಗೂ ಸಂಘಪರಿವಾರದ ಮುಖಂಡರು ಮತ್ತು ಕಾರ್ಯಕರ್ತರು ಭಾನುವಾರ ಚಿಕ್ಕಮಗಳೂರಿನ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧರಿಸಿದರು.

Share this article