ಡೇವಿಡ್ ಡಿಸೋಜ ಕೊಲೆ: ಸುಪಾರಿ ಕೊಲೆಗಾರರ ಬಂಧನ

KannadaprabhaNewsNetwork |  
Published : Aug 09, 2026, 02:45 AM IST
ಹಾವೇರಿ ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪ ಎನ್. ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾಪು ತಾಲೂಕಿನ ಮುದರಂಗಡಿ ಪೇಟೆಯಲ್ಲಿ ಶುಕ್ರವಾರ ಮಧ್ಯಾಹ್ನ ಮಾಜಿ ರೌಡಿ ಶೀಟರ್‌ ಡೇವಿಡ್‌ ಡಿಸೋಜನನ್ನು ಕೊಲೆಗೈದ ಹೊರ ರಾಜ್ಯದ ವೃತ್ತಿಪರ ಸುಪಾರಿ ಕೊಲೆಗಾರರನ್ನು ಘಟನೆ ನಡೆದ ಏಳು ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಉಡುಪಿ: ಕಾಪು ತಾಲೂಕಿನ ಮುದರಂಗಡಿ ಪೇಟೆಯಲ್ಲಿ ಶುಕ್ರವಾರ ಮಧ್ಯಾಹ್ನ ಮಾಜಿ ರೌಡಿ ಶೀಟರ್‌ ಡೇವಿಡ್‌ ಡಿಸೋಜನನ್ನು ಕೊಲೆಗೈದ ಹೊರ ರಾಜ್ಯದ ವೃತ್ತಿಪರ ಸುಪಾರಿ ಕೊಲೆಗಾರರನ್ನು ಘಟನೆ ನಡೆದ ಏಳು ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಆರೋಪಿಯಲ್ಲೊಬ್ಬ ಪೊಲೀಸ್ ಅಧಿಕಾರಿ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲೆತ್ನಿಸಿದ್ದು, ತಕ್ಷಣ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ, ಪೊಲೀಸ್ ಅಧಿಕಾರಿಯ ಕೈಗೂ ಗಾಯಗಳಾಗಿವೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಾಡಿಗೆ ಕೊಲೆಗಾರರನ್ನು ಉತ್ತರ ಪ್ರದೇಶದ ರಾಜು (42), ಉತ್ತರಾಖಂಡದ ಅಜಯ್‌ ರಸ್ತೋಗಿ ಯಾನೆ ಅನ್ಮೋಲ್‌ (23) ಹಾಗೂ ಬಿಹಾರದ ಜಿಯಾವುಲ್‌ ವಜೂಲ್‌ ಶೇಖ್‌ ಯಾನೆ ದೀಪಕ್‌ (38) ಎಂದು ಗುರುತಿಸಲಾಗಿದೆ.

ಕೊಲೆ ಮಾಡಿದ ನಂತರ ಈ ಮೂವರು ಬಸ್‌ನಲ್ಲಿ ಉಡುಪಿಯಿಂದ ಭಟ್ಕಳಕ್ಕೆ ತೆರಳುತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕುಮಟಾ ಮತ್ತು ಭಟ್ಕಳ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಿದ್ದಾರೆ.

ಆ. 7ರಂದು ಮಧ್ಯಾಹ್ನ ಸುಮಾರು 3.45ರ ವೇಳೆಗೆ ಮುದುರಂಗಡಿಯಲ್ಲಿನ ತನ್ನ ಕಚೇರಿಯಿಂದ ತೆರಳಲು ಕಾರು ಹತ್ತುತ್ತಿದ್ದ ಡೇವಿಡ್‌ನನ್ನು ಹಿಂದಿನಿಂದ ಬಂದ ಆಗಂತುಕ 9 ಎಂಎಂ ಪಿಸ್ತೂಲ್‌ನಿಂದ ತಲೆ ಹಾಗೂ ಎದೆಗೆ ಗುಂಡು ಹಾರಿಸಿ, ಇನ್ನೊಬ್ಬನ ಜೊತೆ ಬೈಕ್‌ನಲ್ಲಿ ಪರಾರಿಯಾಗಿದ್ದರು. ಘಟನಾ ಸ್ಥಳದ ಸಿಸಿ ಕ್ಯಾಮೆರಾದಲ್ಲಿ ಕೊಲೆಯ ದೃಶ್ಯ ಸ್ಪಷ್ಟವಾಗಿ ದಾಖಲಾಗಿದ್ದು, ಇದರ ಆಧಾರದಲ್ಲಿ ಪೊಲೀಸರು 3 ತಂಡಗಳಲ್ಲಿ ಕಾರ್ಯಾಚರಣೆಗಿಳಿದಿದ್ದರು. ಆರೋಪಿಗಳ‍ು ಉಡುಪಿಯಿಂದ ಭಟ್ಕಳಕ್ಕೆ ತೆರಳುವ ಬಸ್‌ಗೆ ಹತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರ ಈ ಸಾಧನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಪು ಎಸ್‌ಐ ತೇಜಸ್ವಿ ಅವರ ತಂಡವು ಬೈಂದೂರು ತಾಲೂಕಿನ ಒತ್ತಿನೆಣೆಯಲ್ಲಿ ಮಧ್ಯರಾತ್ರಿ ಬಸ್ಸೊಂದನ್ನು ತಡೆದು ಶೋಧ ನಡೆಸಿದಾಗ ಮುಖವನ್ನು ಶಾಲ್‌ನಿಂದ ಮುಚ್ಚಿಕೊಂಡು ಕುಳಿತಿದ್ದ ಆರೋಪಿಗಳು ಪತ್ತೆಯಾಗಿದ್ದಾರೆ.

ತಾವು ಪೊಲೀಸರ ಬಲೆಗೆ ಬಿದ್ದ ಅರಿವಾಗುತ್ತಿದ್ದಂತೆ ಆರೋಪಿಗಳು ಬಸ್‌ನಿಂದ ಪರಾರಿಯಾಗಲೆತ್ನಿಸಿದರು. ಆಗ ಪೊಲೀಸರು ಅವರನ್ನು ಬೆನ್ನಟ್ಟಿದರು. ಆರೋಪಿ ರಾಜು ಎಂಬಾತ ಕಾಪು ಎಸ್‌ಐ ತೇಜಸ್ವಿ ಅವರನ್ನು ದೂಡಿ ಹಾಕಿ, ಅವರ ಮೇಲೆ ತನ್ನಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ, ಕೂಡಲೇ ಎಸ್‌ಐ ಅವರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬೀಳಿಸಿ ಬಂಧಿಸಿದರು. ಆತನಿಂದ ಪಿಸ್ತೂಲ್‌ನ್ನು ವಶಕ್ಕೆ ಪಡೆಯಲಾಗಿದೆ. ತಪ್ಪಿಸಿಕೊಂಡು ಬೇರೆ ಬಸ್‌ಗಳಲ್ಲಿ ಪರಾರಿಯಾಗುತ್ತಿದ್ದ ಇನ್ನಿಬ್ಬರು ಆರೋಪಿಗಳಲ್ಲಿ ಅಜಯ್ ರಸ್ತೋಗಿಯನ್ನು ಕುಮಟಾದಲ್ಲಿ ಹಾಗೂ ಜಿಯಾಹುಲ್ ವಜೂಲ್ ಶೇಖ್ ನನ್ನು ಭಟ್ಕಳದಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ ಶನಿವಾರ ಮುಂಜಾನೆ ಬಂಧಿಸಲಾಗಿದೆ. ಗಾಯಗೊಂಡ ಆರೋಪಿ ರಾಜುವನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್‌ಐ ತೇಜಸ್ವಿ ಅವರ ಕೈಗೂ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಕೊಲೆ ಮಾಡಿ ಪರಾರಿಯಾಗಲು ಬಳಸಿದ ಬೈಕ್‌ ಕಾಪು ಸಮೀಪದ ಎರ್ಮಾಳ್‌ನಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕ ಅಝ್‌ಮತ್‌ ಆಲಿ, ಡಿಎಸ್ಬಿ ವಿಭಾಗದ ನಿರೀಕ್ಷಕ ಹರೀಶ್‌, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್‌, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್‌ ಕಾಯ್ಕಿಣಿ, ಬೈಂದೂರು ಎಸ್ಐ ಮಹೇಶ್‌, ಕಾಪು ಎಸ್ಐ ತೇಜಸ್ವಿ, ಶಿರ್ವ ನಿರೀಕ್ಷಕ ಮಂಜುನಾಥ ಮರಬದ, ಕೊಲ್ಲೂರು ಎಸ್ಐ ವಿನಯ್‌, ಕಾರ್ಕಳ ಗ್ರಾಮಾಂತರ ಎಸ್ಐ ಪ್ರಸನ್ನ ಎಂ.ಎಸ್.‌, ಪಡುಬಿದ್ರಿ ಎಸ್ಐ ಶಕ್ತಿವೇಲು ಹಾಗೂ ಅನಿಲ್‌, ಶಿರ್ವ ಎಸ್ಐ ಲೋಹಿತ್‌ ಕುಮಾರ್‌, ಪ್ರೊಬೆಷನರಿ ಎಸ್ಐ ಶಿಫಾಝ್‌ ಹಾಗೂ ಸಿಬ್ಬಂದಿಗಳು, ಭಟ್ಕಳ ಹಾಗೂ ಕುಮಟಾ ಪೊಲೀಸರು, ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು, ಶ್ವಾನದಳ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸಿದ್ದರು.

ಹಣಕಾಸಿನ ವೈಮನಸ್ಸು: ಕೊಲೆಯಾದ ಕಾಂಗ್ರೆಸ್ ನಾಯಕ, ಮಾಜಿ ಗ್ರಾಪಂ ಅಧ್ಯಕ್ಷ ಡೇವಿಡ್‌ ಡಿಸೋಜ ಮೇಲೆ ಈ ಹಿಂದೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಬಸ್‌ ಮಾಲೀಕ, ಗುತ್ತಿಗೆದಾರನಾಗಿದ್ದ ಆತ ಹೊರ ರಾಜ್ಯದ ಕಂಪನಿಯೊಂದರ ಕಾಮಗಾರಿಯನ್ನು ನಿರ್ವಹಿಸುತಿದ್ದ. ಈ ನಡುವೆ ಕಂಪನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದು, ಇದೇ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ಸುಪಾರಿ ನೀಡಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಸುಪಾರಿ ನೀಡಿದವರು, ಕೃತ್ಯಕ್ಕೆ ಸಹಕರಿಸಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ: ರಾಘವೇಶ್ವರ ಶ್ರೀ
ಅನಾಹುತ ಸಂಭವಿಸಿದಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್: ಸುನಿಲ್ ಕುಮಾರ್