ಬೇಬಿ ಕೇರ್ನಲ್ಲಿ ಇದ್ದ ಮಕ್ಕಳೊಂದಿಗೆ ಸಿಬ್ಬಂದಿ ನಡೆದುಕೊಳ್ಳುತ್ತಿದ್ದ ರೀತಿಯಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಮಕ್ಕಳು ತಮ್ಮ ಮನೆಗೆ ಬಂದ್ದಾಗಲೂ ಬಾತ್ ರೂಮ್ ಒಳಗೆ ಹೋಗಲು ಹಾಗೂ ವಾಷಿಂಗ್ ಮಷೀನ್ ನೋಡಿದ ಕೂಡಲೇ ಹೆದರಿ ಅಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೇಬಿ ಕೇರ್ನಲ್ಲಿ ಇದ್ದ ಮಕ್ಕಳೊಂದಿಗೆ ಸಿಬ್ಬಂದಿ ನಡೆದುಕೊಳ್ಳುತ್ತಿದ್ದ ರೀತಿಯಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಮಕ್ಕಳು ತಮ್ಮ ಮನೆಗೆ ಬಂದ್ದಾಗಲೂ ಬಾತ್ ರೂಮ್ ಒಳಗೆ ಹೋಗಲು ಹಾಗೂ ವಾಷಿಂಗ್ ಮಷೀನ್ ನೋಡಿದ ಕೂಡಲೇ ಹೆದರಿ ಅಳುತ್ತಿದ್ದಾರೆ. ಮಕ್ಕಳು ಬಾತ್ ರೂಮ್ ನೋಡಿದಾಗ ಮತ್ತು ವಾಷಿಂಗ್ ಮಷೀನ್ ನೋಡಿದರೆ ಏಕೆ ಆ ರೀತಿ ಬೆಚ್ಚಿ ಬೀಳುತ್ತಿದ್ದರು ಎಂಬುದು ತಮಗೆ ಈಗ ಗೊತ್ತಾಗುತ್ತಿದೆ ಎಂದು ಪಾಲಕರು ಹೇಳಿದ್ದಾರೆ.ಈ ನಡುವೆ ಖಾಸಗಿ ಡೇ ಕೇರ್ನಲ್ಲಿ ಪುಟ್ಟ ಮಕ್ಕಳ ಮೇಲೆ ಕೌರ್ಯ ಮೆರೆದಿದ್ದ ಪ್ರಕರಣದ ಸಂಬಂಧ ಎಚ್ಎಎಲ್ ಠಾಣೆ ಪೊಲೀಸರು ಮತ್ತೊಬ್ಬ ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಕೋಲಾರದ ಜಿಲ್ಲೆಯ ಬಂಗಾರಪೇಟೆಯ ನಿವಾಸಿ ಸುಜಾತ (45) ಬಂಧಿತರು. ಪ್ರಕರಣ ಬೆಳಕಿಗೆ ಬರುತ್ತಿದಂತೆ ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಕಾರ್ಯಾಚರಣೆ ನಡೆಸಿ ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಸಂಬಂಧ ಶುಕ್ರವಾರ ಕೋಲಾರ ಮೂಲದ ವಿಜಯಲಕ್ಷ್ಮಿ ಎಂಬುವರನ್ನು ಬಂಧಿಸಲಾಗಿತ್ತು. ಕೌರ್ಯದ ವಿಡಿಯೋ ವೈರಲ್ ಆಗುತ್ತಿದಂತೆ ಪೊಲೀಸರು ಮಂಜುಳ, ವಿಜಯಲಕ್ಷ್ಮಿ, ಭವಾನಿ, ಸಿಂಧು ಮತ್ತು ಬಿಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.
ಬೇಬಿ ಕೇರ್ನಲ್ಲಿ ಮಕ್ಕಳ ಹಠ ಮಾಡಿದಾಗ ಸಿಬ್ಬಂದಿಗಳು ಮಕ್ಕಳನ್ನು ವಾಷಿಂಗ್ ಮಷೀನ್ಗೆ ಹಾಕಿ ಹೆದರಿಸುವುದು, ಬಾತ್ ರೂಮ್ನಲ್ಲಿ ಕೂಡಿ ಹಾಕಿ ಬೆದರಿಸುವುದು ಹಾಗೂ ಶೌಚಾಲಯದ ಜೆಟ್ ಸ್ಪ್ರೇ ಪೈಪ್ ಅನ್ನು ಬಾಯಿಗೆ ತುರುಕಿ ನೀರು ಬಿಡುವುದು ಸೇರಿದಂತೆ ಇನ್ನಿತರ ಕೌರ್ಯವನ್ನು ಕಂದಮ್ಮಗಳ ಮೇಲೆ ಮರೆಯುತ್ತಿರುವ ದೃಶ್ಯಗಳು ಈಗಾಗಲೇ ಬಹಿರಂಗವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.ಹಲ್ಲೆ ವೀಡಿಯೊ ರೆಕಾರ್ಡ್ ಮಾಡಿದ್ದೆ ಸುಜಾತ:
ಮಕ್ಕಳ ಮೇಲಿನ ಹಲ್ಲೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದೇ ಇದೇ ಸುಜಾತ ಎನ್ನಲಾಗಿದೆ. ಈ ಹಿಂದೆ ಇದೇ ಡೇ ಕೇರ್ನಲ್ಲಿ ಈಕೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಮಕ್ಕಳ ಮೇಲಿನ ಹಲ್ಲೆಯ ವಿಡಿಯೊವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಟ್ಟಿದ್ದಳು. ಕೆಲ ದಿನಗಳ ಹಿಂದೆ ಸುಜಾತಳನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರ ಸಿಟ್ಟಿಗೆ ವಿಡಿಯೊವನ್ನು ವೈರಲ್ ಮಾಡಿದ್ದಳು. ಈ ವಿಡಿಯೊ ಹರಿಬಿಟ್ಟ ಹಿನ್ನೆಲೆಯಲ್ಲಿ ಸುಜಾತಳ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.