ಹಾವೇರಿ: 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಅನುಷ್ಠಾನಗೊಳಿಸಲು ಜಿಲ್ಲೆಯ ಎಂಟು ತಾಲೂಕುಗಳಲ್ಲಿ ನಾಲ್ಕು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.ಈ ಯೋಜನೆಯಡಿ ಬೆಳೆವಾರು ಅಂತಿಮ ದಿನಾಂಕದೊಳಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿಕೊಳ್ಳಲು ವಿನಂತಿಸಿದ್ದಾರೆ. ಬೆಳೆಗಳ ವಿವರ: ಮುಂಗಾರು ಹಂಗಾಮಿನ ಶೇಂಗಾ(ಮಳೆ ಆಶ್ರಿತ), ಭತ್ತ(ಮಳೆ ಆಶ್ರಿತ), ಭತ್ತ(ನೀರಾವರಿ), ಮುಸುಕಿನ ಜೋಳ(ಮಳೆ ಆಶ್ರಿತ) ಬೆಳೆಗಳಿಗೆ ಜು. 31ರೊಳಗಾಗಿ ಹಾಗೂ ಈರುಳ್ಳಿ(ನೀರಾವರಿ), ಈರುಳ್ಳಿ(ಮಳೆ ಆಶ್ರಿತ), ಎಲೆಕೋಸು- ಎನ್ಎಸ್ಗಳಿಗೆ ಜು. 15ರೊಳಗಾಗಿ ವಿಮಾ ಕಂತು ತುಂಬಬೇಕು.ಉದ್ದು(ಮಳೆ ಆಶ್ರಿತ), ಹತ್ತಿ(ನೀರಾವರಿ), ಹತ್ತಿ (ಮಳೆ ಆಶ್ರಿತ), ಅಲಸಂದೆ(ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಶೇಂಗಾ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಮುಸುಕಿನ ಜೋಳ(ನೀರಾವರಿ), ಭತ್ತ(ನೀರಾವರಿ), ಭತ್ತ(ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ರಾಗಿ(ಮಳೆ ಆಶ್ರಿತ), ಕೆಂಪು ಮೆಣಸಿನಕಾಯಿ(ನೀರಾವರಿ), ಕೆಂಪು ಮೆಣಸಿನಕಾಯಿ(ಮಳೆ ಆಶ್ರಿತ), ಸಾವೆ(ಮಳೆ ಆಶ್ರಿತ), ಜೋಳ(ನೀರಾವರಿ), ಜೋಳ(ಮಳೆ ಆಶ್ರಿತ), ಸೋಯಾ ಅವರೆ(ಮಳೆ ಆಶ್ರಿತ) ಮತ್ತು ಟೊಮೇಟೊ- ಎನ್ಎಸ್ ಬೆಳೆಗಳಿಗೆ ಜು. 31 ಹಾಗೂ ಸೂರ್ಯಕಾಂತಿ(ಮಳೆ ಆಶ್ರಿತ) ಬೆಳೆಗಳಿಗೆ ಆ. 16ರೊಳಗಾಗಿ ವಿಮಾ ಕಂತು ತುಂಬಬೇಕು. ಬೆಳೆಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಕಂದಾಯ ರಶೀದಿ, ಖಾತೆ ಪುಸ್ತಕ, ಪಾಸ್ ಪುಸ್ತಕ ಹಾಗೂ ಆಧಾರ ಕಾರ್ಡ್ ಸಂಖ್ಯೆ ನೀಡಿ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಬೇಕು. ರೈತರು ತಮ್ಮ ಅರ್ಜಿಯಲ್ಲಿ ಯಾವ ಬೆಳೆ, ಮಳೆ ಆಶ್ರಿತವೋ ಅಥವಾ ನಿರಾವರಿಯೋ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.ಜಿಲ್ಲೆಯ ರೈತರು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಬೆಳೆ ವಿಮೆಯನ್ನು ಪಡೆಯವುದರ ಮೂಲಕ ಸ್ಥಿರ ಆದಾಯವನ್ನು ಪಡೆಯಬಹುದು. ಆದ್ದರಿಂದ ಜಿಲ್ಲೆಯ ರೈತರು ಈ ಯೋಜನೆಯ ಲಾಭ ಪಡೆಯಲು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ, ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು, ಶುಲ್ಕರಹಿತ ಸಹಾಯವಾಣಿ 1800 425 0505 ಅಥವಾ ಸಮೀಪದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಬ್ಯಾಂಕ್ ಶಾಖೆಯವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.