ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಈ ಮಧ್ಯೆ, ಜಿಲ್ಲಾಧಿಕಾರಿ ಜಿ.ಪ್ರಭು ಅವರು ಶನಿವಾರ ಬೆಳಿಗ್ಗೆ ಸತ್ಯಾಗ್ರಹ ನಿರತರೊಂದಿಗೆ ಮಾತುಕತೆ ನಡೆಸಿ ಎರಡು ವಾರದಲ್ಲಿ ಸರ್ಕಾರದೊಂದಿಗೆ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಮೇಲೆ ಉಪವಾಸ ಸತ್ಯಾಗ್ರಹ ಹಿಂಪಡೆದು, ಅಹೋರಾತ್ರಿ ಧರಣಿ ಮುಂದುವರಿಸಿದರು.
ಇದೇ ಹೋಬಳಿಯ 13 ಹಳ್ಳಿಗಳ ರೈತರು ಜಮೀನು ಸ್ವಾಧೀನ ವಿರೋಧಿಸಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ರೈತ ಸಂಘದ ನಾಯಕತ್ವದಲ್ಲಿ ಧರಣಿ ಪ್ರಾರಂಭಿಸಿದ ಒಂದು ವಾರಕ್ಕೆ ಇದಕ್ಕೆ ವಿರುದ್ಧವಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ನಾವು ಭೂಮಿ ಕೊಡಲು ಸಿದ್ಧ. ನಮಗೆ ಹೆಚ್ವಿನ ದರ ನೀಡಿ ಎಂದು ಒತ್ತಾಯಿಸಿ ಧರಣಿ ಆರಂಭಿಸಿತ್ತು. ಜಿಲ್ಲಾಧಿಕಾರಿ ಜಿ.ಪ್ರಭು ಶನಿವಾರ ಧರಣಿ ಸ್ಥಳಕ್ಕೆ ಆಗಮಿಸಿ ನಿಮ್ಮ ಬೇಡಿಕೆ ಪರಿಗಣನೆಗೂ ಅವಕಾಶ ನೀಡುತ್ತೇವೆ, ಜಮೀನು ವಶಕ್ಕೆ ಪಡೆಯಲು ಎರಡು ವಾರಗಳೊಳಗೆ ಕೆಐಎಡಿಬಿ ಅಧಿಕಾರಿಗಳೊಂದಿಗೆ ಮಾತನಾಡಿ, ದಿನ ನಿಗದಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು. ಆ ಬಳಿಕ ಉಪವಾಸ ನಿರತ ರೈತರು ಸತ್ಯಾಗ್ರಹ ಅಂತ್ಯಗೊಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಮುಖಂಡ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾಧಿಕಾರಿ ಭರವಸೆ ಮೇಲೆ ನಾವು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಎಂದಿನಂತೆ ಅನಿರ್ದಿಷ್ಟ ಧರಣಿ ಮುಂದುವರಿಸುತ್ತೇವೆ. ಎರಡು ವಾರದಲ್ಲಿ ಕೆಐಎಡಿಬಿ ಅಧಿಕಾರಿಗಳೊಂದಿಗೆ ನಿಗದಿಯಾಗುವ ಸಭೆಯಲ್ಲಿ ಏನು ತೀರ್ಮಾನವಾಗುತ್ತೋ ಆನಂತರ ನಮ್ಮ ಹೋರಾಟದ ಸ್ವರೂಪದ ಬಗ್ಗೆ ತಿಳಿಸುತ್ತೇವೆ ಎಂದರು.