ಕನ್ನಡಪ್ರಭ ವಾರ್ತೆ ಕೊಲ್ಹಾರ
ಬೇಡಿಕೆ ಈಡೇರಿಸುವುದಾಗಿ ಜಿಲ್ಲಾಧಿಕಾರಿಗಳು 30 ದಿನಗಳ ಕಾಲಾವಧಿ ಪಡೆದ ಹಿನ್ನೆಲೆ ಸಂತ್ರಸ್ತರು ಧರಣಿ ಹಿಂಪಡೆದರು. ಜಿಲ್ಲಾಧಿಕಾರಿ ಡಾ.ಆನಂದ.ಕೆ ಈಚೆಗೆ ವಿಜಯಪುರದಲ್ಲಿ ಭೂ ಸಂತ್ರಸ್ತ ರೈತರು ಹಾಗೂ ಧಾರವಾಡ ಕೆಐಡಿಬಿ ಎಸ್ಎಲ್ಒ ಡಾ.ಕವಿತಾ ಯೋಗಪ್ಪನವರ ಜೊತೆ ಸಭೆ ನಡೆಸಿ ಚರ್ಚಿಸಿ, ಬೇಡಿಕೆಗಳನ್ನು ಈಡೇರಿಸಲು 30 ದಿನಗಳ ಕಾಲಾವಕಾಶ ತೆಗೆದುಕೊಂಡ ಹಿನ್ನೆಲೆ ಸೋಮವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮರವರು ಧರಣಿ ನಿರತ ಭೂ ಸಂತ್ರಸ್ತ ರೈತರ ಹೋರಾಟದ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪ್ರಯುಕ್ತ ಭೂ ಸಂತ್ರಸ್ತ ರೈತರು ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.
ಮುಳವಾಡ ಭೂ ಹಿತರಕ್ಷಣಾ ನಿರಾಶ್ರೀತರ ರೈತ ಸಂಘದ ಉಪಾಧ್ಯಕ್ಷ ಬಸವರಾಜ ಬೀಳಗಿ ಮಾತನಾಡಿ, ಮುಳವಾಡ ಗ್ರಾಮದಲ್ಲಿ ಕೆಐಡಿಬಿ ಧಾರವಾಡ ಲಕ್ಕಮ್ಮನಹಳ್ಳಿಯವರು ಮುಳವಾಡ ಗ್ರಾಮದ ರೈತರ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಂಡ ಒಟ್ಟು 3230.3 ಎಕರೆಗೆ ಯಾವುದೇ ಅವಾರ್ಡ್ ಮಾಡದೇ ಒಂದೇ ಕಂತಿನಲ್ಲಿ ಪರಿಹಾರ ವಿತರಿಸದೆ ಹಂತ ಹಂತವಾಗಿ ವಿತರಿಸಿದ್ದು ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸದೆ ರೈತರಿಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿದ ಹಿನ್ನೆಲೆಯಲ್ಲಿ ನಾವು ಹೋರಾಟವನ್ನು ಹಮ್ಮಿಕೊಂಡಿದ್ದೇವು. ಜಿಲ್ಲಾಧಿಕಾರಿಗಳು ನಮ್ಮ ಜೊತೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸಲು 30 ದಿನಗಳ ಕಾಲಾವಕಾಶ ಪಡೆದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಹಿಂಪಡೆದಿದ್ದೆವೆ. ಒಂದು ವೇಳೆ 30 ದಿನಗಳೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಮೀನು ಕಳೆದುಕೊಂಡ ರೈತರೆಲ್ಲರೂ ಸೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ತಹಸೀಲ್ದಾರ್ ಸಂತೋಷ ಮ್ಯಾಗೇರಿ, ಪ್ರಭಾರಿ ತಹಸೀಲ್ದಾರ್ ಎಸ್.ಎಚ್ ಅರಕೇರಿ, ತಾಪಂ ಇಒ ಸುನೀಲ ಮದ್ದೀನ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಭೂ ಹಿತರಕ್ಷಣಾ ನಿರಾಶ್ರೀತರ ರೈತ ಸಂಘದ ಅಧ್ಯಕ್ಷ ಶಿವಾನಂದ ಕೆಂಗಲಗುತ್ತಿ, ಕರವೇ ಅಧ್ಯಕ್ಷ ರವಿ ಗೊಳಸಂಗಿ, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಮುಳವಾಡ, ಮಲಘಾಣ ಹಾಗೂ ಕಲಗುರ್ಕಿ ಗ್ರಾಮದ ನೂರಾರು ರೈತರು ಇದ್ದರು.
ಧರಣಿ ನಿರತರ ಬೇಡಿಕೆಗಳು:1) ಕೋರ್ಟ್ ಆದೇಶದ ಪ್ರಕಾರ 1 ಎಕರೆ ನೀರಾವರಿ ಜಮೀನಿಗೆ ₹24 ಲಕ್ಷ, ಖುಷ್ಕಿ ₹20 ಲಕ್ಷ ಪರಿಹಾರ2) ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ವಿತರಣೆ
3) ನೋಂದಣಿ ರಿಯಾಯತಿ ಪ್ರಮಾಣ ಪತ್ರ ವಿತರಣೆ4) ಜಮೀನುಗಳಲ್ಲಿರುವ ಗಿಡ-ಮರ, ಭಾವಿ, ಕೊಳವೆ ಬಾವಿಗೆ ಜೆಎಂಸಿ ಪ್ರಕಾರ ಶೇ.18 ಬಡ್ಡಿ ಸೇರಿಸಿ ಪರಿಹಾರ
5) ತೋಟದ ವಸ್ತಿ ಮನೆಗಳಿಗೆ ಕರ್ನಾಟಕ ಗೃಹ ಮಂಡಳಿಯಲ್ಲಿ ಜಾಗೆ6) ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಸರ್ಕಾರಿ ನೌಕರಿ
8) ಅ ಖರಾಬ ಜಮೀನಿಗೆ ಒಪ್ಪಿಗೆ ಪ್ರಕಾರ ಒಂದು ಎಕರೆ ನೀರಾವರಿಗೆ ₹9.5 ಲಕ್ಷ, ಖುಷ್ಕಿ ಜಮೀನಿಗೆ ₹7.5 ಲಕ್ಷದಂತೆ ಮತ್ತು ಶೇ.18 ಬಡ್ಡಿ ಸೇರಿಸಿ ಪರಿಹಾರ