ಸರ್ಕಾರದ ನೀತಿಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಡಾ.ಸುಧಾಕರ್
ಸರ್ಕಾರದ ನೀತಿಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಡಾ.ಸುಧಾಕರ್ ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಇನ್ನು 15 ದಿನಗಳೊಳಗೆ ರೈತರ ಪಂಪ್ಸೆಟ್ಗೆ ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಕಾಂಗ್ರೆಸ್ ಸರ್ಕಾರ ಕ್ರಮ ವಹಿಸದಿದ್ದರೆ, ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಹಾಗೂ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡದಿದ್ದರೆ ವಿಧಾನಸೌಧ ಚಲೋ ಪಾದಯಾತ್ರೆ ಮಾಡಲಾಗುವುದು ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು. ಬುಧವಾರ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ, ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರತಿದಿನ4.5ಲಕ್ಷ ಲೀ. ಹಾಲು ಚಿಕ್ಕಬಳ್ಳಾಪುರದ ರೈತರು ಪ್ರತಿ ದಿನ ನಾಲ್ಕೂವರೆ ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಅದಕ್ಕಾಗಿ ಹಾಲು ಒಕ್ಕೂಟ ರೂಪಿಸಲಾಗಿತ್ತು. ಆದರೆ ಕಾಂಗ್ರೆಸ್ ತಮ್ಮ ಮೇಲಿನ ದ್ವೇಷದಿಂದ ಒಕ್ಕೂಟ ರದ್ದುಪಡಿಸಿದೆ. ಹಾಲು ಒಕ್ಕೂಟ ಬೇರೆ ಜಿಲ್ಲೆಗೆ ಸೇರಿದ್ದರೂ ಇವರು ಪ್ರತಿಭಟಿಸಿಲ್ಲ. ಸ್ವಾಭಿಮಾನ ಇರುವ ಯಾವುದೇ ಪ್ರತಿನಿಧಿ ಹೀಗಾಗಲು ಬಿಡುತ್ತಿರಲಿಲ್ಲ ಎಂದರು. ಹೇಗಾದರೂ ಅಧಿಕಾರ ಪಡೆಯಬೇಕೆಂಬ ಹಠದಿಂದ ವಾಮಮಾರ್ಗದಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಶಾಪಗ್ರಸ್ತವಾಗಿರುವ ಸರ್ಕಾರಕ್ಕೆ ಭವಿಷ್ಯವಿಲ್ಲ. ನಾವು ಹೋಬಳಿಗೊಂದು ಆಸ್ಪತ್ರೆ ನಿರ್ಮಿಸಿದರೆ ಈ ಸರ್ಕಾರ ಪಂಚಾಯಿತಿಗೊಂದು ಮದ್ಯದಂಗಡಿ ನಿರ್ಮಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನತೆಯೇ ಬಿಗ್ಬಾಸ್: ನನಗೆ ಚಿಕ್ಕಬಳ್ಳಾಪುರದ ಜನತೆಯೇ ಬಿಗ್ಬಾಸ್. ಅನಾಥ ಎಂದು ಹೇಳಿಕೊಂಡೇ ಲಾಟರಿ ಶಾಸಕರಾಗಿ, ಜನರನ್ನು ಅನಾಥರನ್ನಾಗಿ ಮಾಡಿ ಬಿಗ್ಬಾಸ್ಗೆ ಹೋದವರಿಗೆ ನಾಚಿಕೆಯೇ ಇಲ್ಲ. ಸತ್ಯವೇ ಹೇಳದವರನ್ನು ಇಲ್ಲಿನ ಜನರು ಶಾಸಕರನ್ನಾಗಿ ಮಾಡಿದ್ದಾರೆ. ನಾನು ಜನರ ಹೃದಯದಲ್ಲಿ ಇರಲು ಬಂದಿದ್ದೇನೆಯೇ ಹೊರತು, ಪರಿಶ್ರಮ ಎಂದು ಇಪ್ಪತ್ತು, ಮೂವತ್ತು ಕಾಲೇಜು ಮಾಡಿಕೊಳ್ಳಲು ಬಂದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೆಸರೇಳದೇ ಟೀಕಿಸಿದರು. ನನ್ನ ತಾಯಿಯ ಹೆಸರಿನಲ್ಲಿ 15 ವರ್ಷದಿಂದ ಕಾಲೇಜು ನಡೆಸಿ ಶಿಕ್ಷಣ ನೀಡುತ್ತಿದ್ದೇನೆ. ರಾಜಕಾರಣಕ್ಕೆ ಬರುವ ಮುನ್ನವೇ ಈ ಕ್ಷೇತ್ರದ 15 ಸಾವಿರ ವಿದ್ಯಾರ್ಥಿಗಳಿಗೆ ಐದು ವರ್ಷ ಉಚಿತ ಬಸ್ಪಾಸ್ ನೀಡಿದ್ದೇನೆ ಎಂದರು. ಮೆರವಣಿಗೆಯಲ್ಲಿ ಮಾಜಿ ಸಿಎಂ ಭಾಗಿ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ಹಾಗೂ ಸಂಸದ ವಿ.ಮುನಿಸ್ವಾಮಿ ಅವರುಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಜೊತೆ ಎತ್ತಿನಗಾಡಿಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಕೋಲಾರ ಸಂಸದ ಎಸ್. ಮುನಿಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವಮೂರ್ತಿ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ. ವಿ. ನಾಗರಾಜ್, ಜಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಮರಳ ಕುಂಟೆ ಕೃಷ್ಣ ಮೂರ್ತಿ, ಮಾಜಿ ಶಾಸಕ ಎಂ. ರಾಜಣ್ಣ, ಸೀಕಲ್ ರಾಮಚಂದ್ರಗೌಡ, ನಗರಸಭೆಯ ಮಾಜಿ ಅಧ್ಯಕ್ಷರಾದ ಆನಂದಬಾಬುರೆಡ್ಡಿ, ಲೀಲಾವತಿ ಶ್ರೀನಿವಾಸ್, ನಗರಸಭೆ ಸದಸ್ಯರಾದ ಸುಭ್ರಮಣ್ಯಾಚಾರಿ, ಮತ್ತಿತರರ ಮುಖಂಡರು ಇದ್ದರು. .............................................................................................................................................. ಸಿಕೆಬಿ- 4 ವಿದ್ಯುತ್ ಕಡಿತ ವಿರೋಧಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.