ಚಿಕ್ಕಮಗಳೂರು : ಆರ್ಸಿಬಿ ಕ್ರಿಕೆಟ್ ಅಭಿಮಾನಿಗಳ ಸಾವಿಗೆ ಕಾರಣರಾದ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಕ್ಷದ ಕಾರ್ಯಾಲಯದಿಂದ ಸಿಎಂ ಮತ್ತು ಡಿಸಿಎಂ ವಿರುದ್ಧ ಧಿಕ್ಕಾರ ಹಾಕುತ್ತಾ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಸಾವಿಗೀಡಾದ ಕ್ರೀಡಾಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕರ್ತರು ಒಂದು ನಿಮಿಷ ಮೌನಾಚರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ , ಆರ್ಸಿಬಿ ವಿಜಯೋತ್ಸವದಲ್ಲಿ ರಾಜ್ಯ ಸರ್ಕಾರ ಸೂಕ್ತ ಬಂದೋಬಸ್ತ್ ಮಾಡದೇ ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿರುವ ಪರಿಣಾಮ 11 ಮಂದಿ ಕ್ರೀಡಾಭಿಮಾನಿ ಗಳು ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು ಆ ಕುಟುಂಬಗಳು ನೋವಿನ ಸಾಗರದಲ್ಲಿ ಮುಳುಗಲು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಕುಂಭ ಮೇಳದ ಬಗ್ಗೆ ಟೀಕಿಸುವ ಮುಖ್ಯಮಂತ್ರಿಗಳು ರಾಜಧಾನಿಯಲ್ಲಿ ಗುಪ್ತಚರ ಮಾಹಿತಿಗಳಿದ್ದರೂ ಸಮಾರಂಭ ನಡೆಸಿದ್ದಾರೆ. ಈ ಪ್ರಕರಣದಿಂದ ನುಣುಚಿಕೊಳ್ಳಲು ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಹೊಣೆಯಾಗಿಸಲು ಮುಂದಾಗಿರುವುದು ನಾಚಿಕೇಡಿನ ಸಂಗತಿ ಎಂದರು.ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೊಟ್ಯಾನ್ ಮಾತನಾಡಿ, ಕ್ರೀಡಾಭಿಮಾನಿಗಳ ಸಾವು ಮುಚ್ಚಿ ಹಾಕಲು ಸಿಬಿಐ, ನ್ಯಾಯಾಧೀಶರ ತನಿಖೆಗೆ ಒಳಪಡಿಸುತ್ತೇವೆಂಬ ಬೂಟಾಟಿಕೆ ಮಾಡಿ ಕೊಂಡಿರುವ ರಾಜ್ಯ ಸರ್ಕಾರ ಕೊನೆಯದಾಗಿ ಯಾವುದೇ ದಾರಿ ತೋಚದೆ ನೇರವಾಗಿ ರಾಜ್ಯದ ನಿಷ್ಟಾವಂತ ಪೊಲೀಸ್ ಅಧಿಕಾರಿಗಳನ್ನು ಹೊಣೆಯಾಗಿಸಿ ಕೈ ತೊಳೆದುಕೊಳ್ಳುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರ ಪ್ರಧಾನ ಕಾರ್ಯದರ್ಶಿ ಬಸವರಾಜ್, ಕೌಶಿಕ್, ಜಿಪಂ ಮಾಜಿ ಉಪಾಧ್ಯಕ್ಷ ಸೋಮಶೇಖರ್, ಮುಖಂಡರಾದ ಕೋಟೆ ರಂಗನಾಥ್, ದಿನೇಶ್, ಈಶ್ವರಹಳ್ಳಿ ಮಹೇಶ್, ನೆಟ್ಟೆಕೆರೆಹಳ್ಳಿ ಜಯಣ್ಣ, ಸಚಿನ್ಗೌಡ, ಕೆ.ಸಿ.ನಿಶಾಂತ್, ಕೋಟೆ ಪ್ರದೀಪ್, ಸತೀಶ್, ರೇವನಾಥ್, ಜೀವನ್, ಪವಿತ್ರ, ಬೆನಡಿಕ್ಟ್ ಜೇಮ್ಸ್, ಸಂಗೀತ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತನ್ನ ತಪ್ಪನ್ನು ಅಧಿಕಾರಿಗಳ ಮೇಲೆ ಹೊರಿಸಿದ ಸರ್ಕಾರ: ಕೋಟಾ ಚಿಕ್ಕಮಗಳೂರು: ಆರ್ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ತನ್ನ ತಪ್ಪನ್ನು ಅಧಿಕಾರಿಗಳ ಮೇಲೆ ಹೊರಿಸುವ ಕೆಲಸ ಮಾಡಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ತಾನು ಹೊಣೆ ಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸ ಮಾಡಬಾರದು ಎಂದು ಹೇಳಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ನಾನು ಬಲ್ಲೆ. ಅವರು ಶಿಸ್ತಿನ ಒಳ್ಳೆಯ ಅಧಿಕಾರಿ. ಅವರನ್ನೂ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಪಡಿಸಿರುವುದು ಸರಿಯಲ್ಲ. ಸರ್ಕಾರ ತಾನು ಮಾಡಿದ ತಪ್ಪನ್ನು ಅವರ ಮೇಲೆ ಹೊರಿಸಿ ನಾವು ಮಾಡಿದ್ದೇ ಸರಿ ಎಂದು ಹೇಳಿದರೆ ಅವರಿಗೆ ತಿಳುವಳಿಕೆ ಹೇಳುವುದು ಯಾರು ಎಂದು ಪ್ರಶ್ನಿಸಿದರು.
ಕಾರ್ಯಕ್ರಮಕ್ಕೆ ಸರ್ಕಾರದ ಕಡೆಯಿಂದ ಪೂರ್ವ ತಯಾರಿ ಇರಲಿಲ್ಲ. ಪೊಲೀಸ್ ಗುಪ್ತಚರ ಇಲಾಖೆ ಸಹ ಈ ಬಗ್ಗೆ ಎಚ್ಚರಿಸಿತ್ತು. ಅದನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮ 11 ಮಂದಿ ಅಮಾಯಕರು ಸಾವಿಗೀಡಾದರು. ಆದರೂ ಮುಖ್ಯಮಂತ್ರಿಯಾಗಲಿ, ಉಪ ಮುಖ್ಯಮಂತ್ರಿಯಾಗಲಿ ವಿಷಾದವನ್ನೂ ಸಹ ವ್ಯಕ್ತಪಡಿಸಿಲ್ಲ. ಅಲ್ಲದೆ ಅಧಿಕಾರಿಗಳ ಮೇಲೆ ತಪ್ಪು ಹೊರಿಸಿರುವುದರಲ್ಲಿ ಅರ್ಥವೂ ಇಲ್ಲ ಎಂದರು.