ಋಣಭಾರದಿಂದ ಇ-ಆಸ್ತಿಗೆ ಮತ್ತಷ್ಟು ಸಂಕಷ್ಟ

KannadaprabhaNewsNetwork |  
Published : Jun 18, 2025, 11:49 PM IST
ರಬಕವಿ-ಬನಹಟ್ಟಿ ನಗರಸಭೆ | Kannada Prabha

ಸಾರಾಂಶ

ಬಿ ಖಾತೆಯಲ್ಲಿರುವವರಿಗೆ ಆಸ್ತಿ ಉತಾರ ಸೃಷ್ಟಿಯಾದಾಗಿನಿಂದ ಋಣಭಾರ (ಇಸಿ) ಕಡ್ಡಾಯವೆಂದು ಹೇಳಿರುವುದು ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ.

ಶಿವಾನಂದ ಪಿ. ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿರುವ ಇ-ಆಸ್ತಿ ನೋಂದಣಿಗೆ ಹಲವಾರು ಸಮಸ್ಯೆಗಳು ಎದುರಾಗಿ ನೋಂದಣಿ ಪ್ರಕ್ರಿಯೆಗೆ ತೊಡಕಾಗಿತ್ತು. ಇದನ್ನರಿತ ಇಲಾಖೆ ಎ ಮತ್ತು ಬಿ ಯೋಜನೆಯೆಂದು ರೂಪಿಸಿ ಬಿ ಖಾತೆಯಲ್ಲಿರುವವರಿಗೆ ಆಸ್ತಿ ಉತಾರ ಸೃಷ್ಟಿಯಾದಾಗಿನಿಂದ ಋಣಭಾರ (ಇಸಿ) ಕಡ್ಡಾಯವೆಂದು ಹೇಳಿರುವುದು ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ.

ಇಸಿಗಾಗಿ ಅಲೆದಾಟ:

ರಬಕವಿ-ಬನಹಟ್ಟಿ ತಾಲೂಕು ಕೇಂದ್ರವಾಗಿ ೨೦೧೪ರಂದು ನಿರ್ವಹಣೆ ಆರಂಭಿಸಿದಾಗಿನಿಂದ ಸುಲಭವಾಗಿ ಇಸಿ ದೊರೆಯುತ್ತದೆ. ಈ ಮೊದಲು ಜಮಖಂಡಿ ತಾಲೂಕು ಕೇಂದ್ರವಾಗಿದ್ದರಿಂದ ೨೦೦೦ ರಿಂದ ೨೦೧೩ರವರೆಗೂ ಆನ್‌ಲೈನ್ ಇಸಿ ದೊರೆಯುವುದು ಸುಲಭ. ೨೦೦೦ ಇಸ್ವಿಗೂ ಮುಂಚೆ ಕೈಬರಹ ದಾಖಲೆಗಳೇ ದೊರಕುತ್ತಿಲ್ಲ. ಇದಕ್ಕಾಗಿ ಎರಡು ತಿಂಗಳು ಅಲೆದರೂ ಮಾಹಿತಿ ದೊರಕದ ಕಾರಣ ನಿರಾಸೆಯಿಂದ ಮರಳುತ್ತಿದ್ದಾರೆ.

ಶೇ.೨೦ರಷ್ಟು ಮಾತ್ರ ಇ-ಆಸ್ತಿ:

ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿನ ಸುಮಾರು ೨೦ ಸಾವಿರ ಆಸ್ತಿಗಳ ಪೈಕಿ ಕೇವಲ ೪೦೦೦ದಷ್ಟು ಮಾತ್ರ ಇ-ಆಸ್ತಿಗೆ ಪರಿವರ್ತನೆ ಹೊಂದಿವೆ. ಅದರಲ್ಲಿ ಇತ್ತೀಚಿನ ೨೦ ವರ್ಷಗಳ ಹೊಸ ಕಟ್ಟಡಗಳ ಆಸ್ತಿದಾರರು ಸೂಕ್ತ ದಾಖಲೆ ಒದಗಿಸುತ್ತಿದ್ದು, ಅವರು ಇ-ಆಸ್ತಿ ದಾಖಲೀಕರಣಗೊಳಿಸಿದ್ದಾರೆ. ಅನಿವಾರ್ಯತೆ ಇರುವ ಕಾರಣ ಕೇವಲ ೫೦೦ ಆಸ್ತಿದಾರರು ಒಲ್ಲದ ಮನಸ್ಸಿನಿಂದ ಬಿ-ಖಾತೆ ನಿಯಮಕ್ಕೆ ಒಪ್ಪಿ ಉತಾರ ಮಾಡಿಕೊಂಡಿದ್ದಾಗಿದೆ. ಇನ್ನುಳಿದ ಶೇ.೮೦ರಷ್ಟು ಇ-ಆಸ್ತಿದಾರರು ನಗರದ ಹೃದಯ ಭಾಗದಲ್ಲಿದ್ದು, ಬಹಳಷ್ಟು ಹಳೆಯ ಆಸ್ತಿ ಆಗಿರುವುದರಿಂದ ಅವುಗಳಿಗೆ ಸಮರ್ಪಕ ದಾಖಲೆಗಳಿಲ್ಲದೆ ಪರದಾಡುತ್ತಿದ್ದಾರೆ.

ಒಟ್ಟಾರೆ ಇ-ಆಸ್ತಿಯು ಲೇಔಟ್‌ಗಳಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಮಾತ್ರ ಸೀಮಿತವಾಗಿದ್ದು, ಇನ್ನುಳಿದ ನೂರಾರು ವರ್ಷ ಹಿಂದಿನಿಂದ ಬದುಕು ನಿರ್ವಹಿಸುತ್ತಿರುವ ಮನೆಗಳಿಗೆ ಮಾರಕವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಜಮಖಂಡಿಯ ತಾಲೂಕಾಡಳಿತದಲ್ಲಿ ಲಿಖಿತ ಮಾಹಿತಿ ಒದಗಿಸಿದರೂ ಯಾವುದೇ ದಾಖಲಾತಿ ಒದಗಿಸುತ್ತಿಲ್ಲ. ರಬಕವಿ-ಬನಹಟ್ಟಿ ಭಾಗಗಳ ದಾಖಲಾತಿಗಳೇ ಇಲ್ಲವೆಂದು ಹೇಳಿ ಜನರನ್ನು ವಾಪಸ್ ಕಳಿಸುತ್ತಿದ್ದಾರೆ ಎಂದು ಸಹಕಾರಿ ಧುರೀಣ ಇರ್ಷಾದ್‌ ಮೋಮಿನ್ ಆರೋಪಿಸಿದ್ದಾರೆ.

ಇ-ಆಸ್ತಿಗಾಗಿ ಜನರಲ್ಲಿ ಗೊಂದಲ ಬೇಡ. ಎ ಮತ್ತು ಬಿ ಎಂದು ಯೋಜನೆ ರೂಪಿಸಿದೆ. ಸಮರ್ಪಕ ದಾಖಲೆಗಳನ್ನು ನಗರಸಭೆಗೆ ಒದಗಿಸಿದಲ್ಲಿ ಆನ್‌ಲೈನ್ ಉತಾರ ಸಿಗಲಿದೆ ಎಂದು ಪೌರಾಯುಕ್ತರಾದ ಜಗದೀಶ ಈಟಿ ತೀಳಿಸಿದ್ದಾರೆ.ಪೂರ್ವಜರ ಆಸ್ತಿಗಳಲ್ಲಿ ಡ-ಉತಾರ ಹೊರತುಪಡಿಸಿ ಮತ್ತ್ಯಾವ ದಾಖಲಾತಿಗಳು ದೊರಕದು. ಸರ್ಕಾರ ಮಾಡಿರುವ ಇ-ಆಸ್ತಿ ದಾಖಲೆಗಳು ಸರಳೀಕರಣವಾಗಲೇಬೇಕು ಎಂದು ಹೋರಾಟಗಾರ ಬಸವರಾಜ ಬೆಳಗಲಿ ಆಗ್ರಹಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಹಣದ ಆಮಿಷಕ್ಕೆ ಜನತೆ ರೋಷಿ ಹೋಗಿದ್ದಾರೆ. ತಕ್ಷಣ ಇ-ಆಸ್ತಿ ಬಗ್ಗೆ ಸರ್ಕಾರ ಗಮನಿಸಿ, ಮೊದಲಿನಂತೆ ಸುಲಭವಾಗಿ ಉತಾರ ದೊರಕುವಂತಾಗಬೇಕು ಎಂದು ಅಲ್ಪಸಂಖ್ಯಾತ ಘಟಕ ಮುಖಂಡ ಇರ್ಷಾದ ಮೋಮಿನ್ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ