ಕುಮಟಾ: ಇತ್ತೀಚೆಗೆ ನಿಧನರಾದ ರೈತ ಮುಖಂಡ, ಅಘನಾಶಿನಿ ನದಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಟಿ.ಪಿ. ಹೆಗಡೆ ಅವರ ಮುಂದಾಳತ್ವದಲ್ಲಿ ಆರಂಭಿಸಿದ ಅಘನಾಶಿನಿ ನದಿ ಉಳಿಸಿ ಹೋರಾಟವನ್ನು ದಿಟ್ಟವಾಗಿ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇತ್ತೀಚೆಗೆ ನಿಧನರಾದ ಟಿ.ಪಿ. ಹೆಗಡೆ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಅಘನಾಶಿನಿ ಹೋರಾಟ ಸಮಿತಿ ಅಧ್ಯಕ್ಷ ಗಣಪತಿ ಗೌಡ ಕಂದಳ್ಳಿ, ಡಾ. ಸುರೇಶ ಹೆಗಡೆ, ಸೂರಜ್ ನಾಯ್ಕ, ವಿನೋದ ಪ್ರಭು, ಡಾ. ಪ್ರಕಾಶ ಮೇಸ್ತ, ಜಿ.ಪಿ. ಭಟ್, ಜಿ.ವಿ. ಹೆಗಡೆ, ವಿಷ್ಣು ಶಾಸ್ತ್ರಿ, ಗಿರಿಯಾ ಗೌಡ, ವಿವೇಕ ಜಾಲಿಸತ್ಗಿ ಮುಂತಾದವರು ನುಡಿನಮನ ಸಲ್ಲಿಸಿದರು.
ಬಳಿಕ ಅಘನಾಶಿನಿ ನದಿಗೆ ಸಂಬಂಧಿಸಿದಂತೆ ಬಹುಗ್ರಾಮ ಯೋಜನೆಯ ಸಾಧಕ-ಬಾಧಕಗಳನ್ನು ಪುನರ್ವಿಮರ್ಶಿಸಲಾಯಿತು. ಹೋರಾಟ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸಮಿತಿಯ ಅಧ್ಯಕ್ಷ ಗಣಪತಿ ಗೌಡ ಪ್ರಕಟಿಸಿದರು.ಯೋಜಿತ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಘನಾಶಿನಿ ನದಿಗೆ ಕುತ್ತು ತರಲಿದೆ. ಜಲಮೂಲ ಸ್ಥಳ ಬದಲಾವಣೆಗೆ ಒತ್ತಾಯಿಸಿ ಈಗಾಗಲೇ ಅಘನಾಶಿನಿ ನದೀ ತೀರದ ಪ್ರದೇಶಕ್ಕೆ ವಿಜ್ಞಾನಿಗಳ ಭೇಟಿ ಆಗಿದೆ. ತಜ್ಞರು ವರದಿ ನೀಡಿದ್ದಾರೆ. ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಲಾಗಿದೆ. ಹಾಗೆಯೇ ಸಮಿತಿಯಿಂದ ಜಿಲ್ಲಾಧಿಕಾರಿ ಭೇಟಿ ಮಾಡಲಾಗಿದೆ. ಅಘನಾಶಿನಿ ರೈತರ ಸಮಾವೇಶ ನಡೆಸಲಾಗಿದೆ. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಸ್ವರ್ಣವಲ್ಲೀ ಸ್ವಾಮೀಜಿ ಅವರನ್ನು ಹೋರಾಟ ಸಮಿತಿ ಭೇಟಿ ಮಾಡಿದೆ. ಯೋಜನೆಯ ಕಾಮಗಾರಿ ನಿಲ್ಲಿಸಲು ಜಿಲ್ಲಾ ಸಚಿವರು ಸೂಚಿಸಿದ್ದಾರೆ.