ಲಕ್ಷ್ಮೇಶ್ವರ:
ಪಟ್ಟಣದ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ವರ್ತಕರ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಗಣಪತಿ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜುಲೈ ೨೬, ೨೭ ಮತ್ತು ೨೮ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ಗಣಪತಿ ಭಾವಚಿತ್ರ ಸೇರಿ ಈಶ್ವರ, ನಂದಿ, ಮಾರುತಿ ಹಾಗೂ ನಾಗದೇವರ ಶಿಲಾ ಮೂರ್ತಿಗಳ ಭವ್ಯ ಮೆರವಣಿಗೆ ಜರುಗಿತು.ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಮೆರವಣಿಗೆ ಆದಯ್ಯ ವರ್ತುಲ, ಗದಗ ನಾಕಾ, ಹೊಸ ಬಸ್ ನಿಲ್ದಾಣ, ಶಿಗ್ಲಿ ಕ್ರಾಸ್, ಪುರಸಭೆ, ಬಜಾರ, ಹಾವಳಿ ಹನುಮಂತ ದೇವಸ್ಥಾನ, ವಿದ್ಯಾರಣ್ಯ ವರ್ತುಲ, ಪರ್ವತ ಮಲ್ಲಯ್ಯನ ದೇವಸ್ಥಾನದ ಮೂಲಕ ಸಂಚರಿಸಿ ಎಪಿಎಂಸಿ ಪ್ರಾಂಗಣ ತಲುಪಿತು.ಮೆರವಣಿಗೆಯ ರಂಗು ಹೆಚ್ಚಿದ ಕಲಾ ತಂಡಗಳು - ಗಣಪತಿಯ ಸೇರಿದಂತೆ ವಿವಿಧ ದೇವರ ಮೂರ್ತಿಗಳ ಮೆರವಣಿಗೆಗೆ ದಕ್ಷಿಣ ಕನ್ನಡದ ಚಂಡಮದ್ದಳೆ, ಬೊಂಬೆ ಕುಣಿತ, ಲಕ್ಷ್ಮೇಶ್ವರದ ಪ್ರಸಿದ್ಧ ಜಾನಪದ ನೃತ್ಯಗಳಲ್ಲಿ ಪ್ರಮುಖವಾಗಿರುವ ಕುದುರೆ ಕಾರರ ಕುಣಿತ, ನಂದಿಕೋಲು ಕುಣಿತ ಸೇರಿ ಮತ್ತಿತರ ಕಲಾತಂಡಗಳು ಮೆರವಣಿಗೆಯ ರಂಗನ್ನು ಹೆಚ್ಚಿಸುವಲ್ಲಿ ಯಶಸ್ವಿ ಆದವು. ಅದರಂತೆ ನೂರಾರು ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು ಮೆರವಣಿಗೆಗೆ ಕಳೆ ನೀಡಿದವು. ಮೆರವಣಿಗೆಗೆ ಅಡ್ಡಿಯಾದ ಮಳೆರಾಯ- ತಾಲೂಕಿನಾದ್ಯಂತ ಬೆಳಗ್ಗೆಯಿಂದಲೇ ಜಿಟಿಜಿಟಿ ಸುರಿಯುತ್ತಿದ್ದ ಮಳೆ ಮೆರವಣಿಗೆಗೆ ಅಡ್ಡಿ ಉಂಟು ಮಾಡಿತು. ಮಳೆಯಲ್ಲಿಯೇ ಎಪಿಎಂಸಿ ವರ್ತಕರು ಮೂರ್ತಿಗಳ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಎಪಿಎಂಸಿ ವರ್ತಕರ ಸಂಘದ ಸದಸ್ಯರು ಉತ್ಸಾಹದಿಂದ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್, ಸಂಗಪ್ಪ ಹನುಮಸಾಗರ, ಸಿದ್ದನಗೌಡ ಬಳ್ಳೊಳ್ಳಿ, ಬಸವೇಶ ಮಹಾಂತಶೆಟ್ಟರ, ಸುಭಾಷ ಓದುನವರ, ತೋಂಟೇಶ ಮಾನ್ವಿ, ಕುಬೇರಪ್ಪ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ಶಿವಯೋಗಿ ಗಡ್ಡದೇವರಮಠ, ಸಂತೋಷ ಬಾಳಿಕಾಯಿ, ಬಸಣ್ಣ ಹೊಳಲಾಪೂರ, ರಾಜು ಕೊಟಗಿ, ವಿಜಯ ಬೂದಿಹಾಳ, ಸೋಮೇಶ ಉಪನಾಳ, ರಾಘವೇಂದ್ರ ಸದಾವರ್ತಿ, ಗುರುರಾಜ ಪಾಟೀಲ ಕುಲಕರ್ಣಿ, ಸುರೇಶ ರಾಚನಾಯ್ಕರ್, ಎಸ್.ಪಿ.ಪಾಟೀಲ, ಉಪಾಧ್ಯಕ್ಷ ಫಿರ್ದೋಷ್ ಆಡೂರ, ರಾಮಣ್ಣ ಗಡದವರ, ನಿಂಗಪ್ಪ ಬನ್ನಿ, ಕಲ್ಲಪ್ಪ ಹಡಪದ, ವಿಜಯ ಬೂದಿಹಾಳ ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.