ಕನ್ನಡಪ್ರಭ ವಾರ್ತೆ ರಾಯಚೂರು
ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿಗಳಾದ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿದರು.
ಸಪ್ತರಾತ್ರೋತ್ಸವದ ಮೊದಲ ದಿನದ ಮುಂಜಾನೆ ಶ್ರೀಮಠದಲ್ಲಿ ವಿಶೇಷ ಪೂಜಾ-ಪುನಸ್ಕಾರಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ ) ನಿಂದ ತರಲಾಗಿದ್ದ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ಶ್ರೀಗುರುರಾಯರಿಗೆ ಸಮರ್ಪಿಸುವ ಸಮಾರಂಭವು ಶ್ರೀಮಠದ ಸಂಪ್ರದಾಯದಂತೆ ನಡೆಯಿತು.ತಿರುಮಲ ತಿರುಪತಿಯಿಂದ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರ ನೇತೃತ್ವದಲ್ಲಿ ಆಗಮಿಸಿದ್ದ ಅಧಿಕಾರಿಗಳು, ವಿದ್ವಾಂಸರು ಹಾಗೂ ಪಂಡಿತರ ತಂಡವು ತಮ್ಮೊಡನೆ ತಂದ ಕಲಿಯುಗ ಪ್ರತ್ಯೇಕ್ಷ ದೈವ ಶ್ರೀವೆಂಕಟೇಶ್ವರ ದೇವರ ಶೇಷವಸ್ತ್ರಗಳನ್ನು ಶ್ರೀಮಠ ಪಂಡಿತರು, ಅಧಿಕಾರಿಗಳು ಮಠದ ಸಂಪ್ರದಾಯದಂತೆ ವಾದ್ಯ-ಮೇಳಗಳೊಂದಿಗೆ ಸ್ವಾಗತಿಸಿದರು.
ನಂತರ ಶ್ರೀಮಠದ ಪ್ರಾಕಾರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರು ಮಾತನಾಡಿ, ಅನಾದಿ ಕಾಲದಿಂದಲೂ ತಿರುಮಲ ತಿರುಪತಿ ದೇವಸ್ಥಾನಂ ಹಾಗೂ ಮಂತ್ರಾಲಯದ ಮಠದ ನಡುವೆ ಇರುವಂತಹ ಆಧ್ಯಾತ್ಮಿಕ ಅನುಬಂಧಕ್ಕೆ ಶೇಷವಸ್ತ್ರ ಸಮರ್ಪಣೆಯು ಪ್ರತ್ಯೇಕ ಮೆರುಗನ್ನು ನೀಡುವ ವಿಶಿಷ್ಟ ಸಂಪ್ರದಾಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿಟಿಡಿಯ ವಿದ್ವಾಂಸರಾದ ಅನಂತಾಚಾರ್ಯರು, ಗುರುರಾಜ ಆಚಾರ್ಯರು, ಶ್ರೀಮಠದ ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್, ಪಂಡಿತರು, ವಿದ್ವಾಂಸರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಭಕ್ತರು ಭಾಗವಹಿಸಿದ್ದರು.
ರಾಯಚೂರು: ತಿರುಮಲ-ತಿರುಪತಿಯ ಶ್ರೀವೆಂಕಟೇಶ್ವರ ದೇವರಿಗೆ ನವರಾತ್ರಿ ಸಮಯದಲ್ಲಿ ಆಚರಿಸುವ ಭ್ರಮ್ಮೋತ್ಸವ ಮಾದರಿಯಲ್ಲಿ ಶ್ರೀಗುರುಸಾರ್ವಭೌಮರ ಆರಾಧನಾ ಮಹೋತ್ಸವದಲ್ಲಿ ಸಪ್ತರಾತ್ರೋತ್ಸವನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದು ಪೀಠಾಧಿಪತಿಗಳಾದ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.