ದೌರ್ಜನ್ಯ ಪ್ರಕರಣಗಳ ತಡೆಯಲು ಗೃಹ ಸಚಿವರು ವಿಫಲ: ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork |  
Published : Aug 28, 2026, 03:30 AM IST
27ಕೆಪಿಎಲ್ಎನ್ಜಿ01 :  | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತರ ಕೊಲೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಗೃಹ ಸಚಿವರ ಅಸಮರ್ಥ ಆಡಳಿತಕ್ಕೆ ಕೈಗನ್ನಡಿಯಾಗಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಪಾಧಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತರ ಕೊಲೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಗೃಹ ಸಚಿವರ ಅಸಮರ್ಥ ಆಡಳಿತಕ್ಕೆ ಕೈಗನ್ನಡಿಯಾಗಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಪಾಧಿಸಿದರು.

ಇತ್ತೀಚೆಗೆ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ದಲಿತ ಮಹಿಳೆ ಕಟ್ಟಿಗೆ ತರಲು ಹೋದಾಗ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು, ಘಟನೆ ಕುರಿತು ಛಲವಾದಿ ನಾರಾಯಣಸ್ವಾಮಿ ಮೃತ ಮಹಿಳೆ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಮೂರು ಜನ ದಲಿತರ ಮೇಲೆ ಕೊಲೆ, ಅತ್ಯಾಚಾರದಂತಹ ಬೀಕರ ಘಟನೆಗಳು ಜರುಗಿವೆ. ಆದರೂ ಸರ್ಕಾರದ ಒಬ್ಬರೇ ಒಬ್ಬ ಪ್ರತಿನಿಧಿ ಘಟನೆ ಖಂಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಇನ್ನೂ ಗೃಹ ಸಚಿವ ಪ್ರಿಯಾಂಕ ಖರ್ಗೆಯವರು ದಲಿತರ ಮೇಲೆ ನಡೆಯುತ್ತಿರುವ ಕೃತ್ಯಗಳ ನಿಯಂತ್ರಣ ಮಾಡಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲು ವಿಫಲರಾಗಿದ್ದಾರೆ. ದಲಿತರ ರಕ್ಷಣೆ ಮಾಡಬೇಕಾದ ಖರ್ಗೆಯವರು ಆರ್‌ಎಸ್‌ಎಸ್‌ನ ಜಪ ಮಾಡುತ್ತಿದ್ದಾರೆ. ಖರ್ಗೆಯವರಿಗೆ ಗೃಹ ಖಾತೆ ಬದಲು ಆರ್‌ಎಸ್‌ಎಸ್‌ ಕಾವಲು ಖಾತೆ ನೀಡಬೇಕೆಂದು ವ್ಯಂಗ್ಯವಾಡಿದರು.

ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ನೌಕರಿ ನೀಡಬೇಕು, ನಗದು ಪರಿಹಾರ ಹಾಗೂ ಜಮೀನು ಮಂಜೂರು ಮಾಡಿ ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು.

ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಎಚ್ಚರಿಕೆ ವಹಿಸಬೇಕು ಮತ್ತು ಗೃಹ ಖಾತೆಯನ್ನು ಅನುಭವಿ ಶಾಸಕರಿಗೆ ನೀಡಿ ಖರ್ಗೆರವರನ್ನು ಗೃಹ ಖಾತೆಯಿಂದ ಬದಲಾಯಿಸಲು ಸಿಎಂ ಮುಂದಾಗಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ವ್ಯಾಪಕ ಬರಗಾಲ ಆವರಿಸಿದೆ, ಪರಿಹಾರ ನೀಡಲು ಸರ್ಕಾರದ ಬಳಿ ಹಣ ಇಲ್ಲದೇ ಇರುವುದರಿಂದ ಕೇವಲ 150 ತಾಲೂಕಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದೆ. ಹಣವಿಲ್ಲ ಎಂಬುವುದು ಬಟಾ ಬಯಲಾಗಿದೆ ಎಂದರು.

ಸಚಿವ ನಾಗೇಂದ್ರರವರು ಪರಿಶಿಷ್ಟ ಪಂಗಡದ ನಿಗಮದ 187 ಕೋಟಿ ರು. ಅನುದಾನ ನುಂಗಿದ್ದಾರೆ, ಈ ಭ್ರಷ್ಟಚಾರದ ಹಣವು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಆಂದ್ರಪ್ರದೇಶದ ಚುನಾವಣೆಯಲ್ಲಿ ಬಳಕೆಯಾಗಿದೆ. ದಲಿತರ ಅಭಿವೃದ್ಧಿಗೆ ಮೀಸಲಾದ ಅನುದಾನ ದುರ್ಬಳಕೆ ಮಾಡಿಕೊಂಡ ಸಚಿವರು ಹಾಗೂ ಕಾಂಗ್ರೆಸ್ ಪಕ್ಷ ದೇಶದ ಪವಿತ್ರ ಸಂವಿಧಾನ ಹಿಡಿದುಕೊಂಡು ದಲಿತರು ಎಂದು ಹೇಳುತ್ತಿರುವುದು ನಾಚಿಗೇಡಿನ ಸಂಗತಿ ಎಂದರು.

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಪಕ್ಷದ ಭ್ರಷ್ಟಚಾರದ ಬಗ್ಗೆ ಜನರ, ಸದನದ ಮುಂದೆ ಮಂಡಿಸಲಾಗುವುದೆಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ತಾಲೂಕು ಅಧ್ಯಕ್ಷ ನಾಗಭೂಷಣ, ಮುಖಂಡರಾದ ರವೀಂದ್ರ ಜಲ್ದಾರ, ಆರ್.ರುದ್ರಯ್ಯ, ಜಗನಾಥ ಕುಲಕರ್ಣಿ ಇದ್ದರು.

ಕವಿತಾಳ ಹೆದ್ದಾರಿ ಸಮಸ್ಯೆ ಕುರಿತು ಮನವಿ

ಕವಿತಾಳ: ರಾಯಚೂರಿನಿಂದ ಲಿಂಗಸುಗೂರಿಗೆ ತೆರಳುತ್ತಿದ್ದ ಛಲವಾದಿ ನಾರಾಯಣಸ್ವಾಮಿ ಅವರನ್ನು ಸಮೀಪದ ಹಿರೇಹಣಗಿ ಗ್ರಾಮದ ಬಳಿ ರೈತರು ತಡೆದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.

ಬೆಳಗಾವಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಹಿರೇಹಣಗಿ ಗ್ರಾಮದ ಹತ್ತಿರ ನಡೆದಿದೆ, ಈ ರಸ್ತೆಯಲ್ಲಿ ಬಾಕ್ಸ್ ಕಲ್ವರ್ಟ್ ನಿರ್ಮಿಸಲಾಗುತ್ತಿದೆ. ಅದರಿಂದ ಹಲವು ರೈತರಿಗೆ ಜಮೀನುಗಳಿಗೆ ಭೂಮಿಗೆ ತೆರಳಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಎತ್ತಿನ ಬಂಡಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಕನಿಷ್ಠ 12 ಅಡಿ ಎತ್ತರದ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರಾದ ಅದನಗೌಡ, ಮಾಳಪ್ಪ ಹಣಗಿ, ಶಿವಪ್ಪ ಮಿಲ್ಟ್ರಿ, ಶಿವಪ್ಪ ಪೂಜಾರಿ, ಮಲ್ಲಯ್ಯ ತೆಲಾಗರು, ಪಂಪಣ್ಣ ಮೂಲಿಮನಿ, ಶಿವು ಕಾವಲಿ, ಅರುಣ್ ಕಾವಲಿ, ಲಿಂಗಣ್ಣ ಕಟ್ಟಕರ್ ಅವರು ಗಮನಕ್ಕೆ ತಂದರು.

ರೈತರಿಂದ ಮನವಿ ಸ್ವೀಕರಿಸಿ, ಈ ಕುರಿತು ತಕ್ಷಣವೇ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಾತನಾಡಿ, ರೈತರ ಜಮೀನುಗಳಿಗೆ ಸುಲಭವಾಗಿ ತೆರಳಲು ಸೂಕ್ತ ಸೇತುವೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧಿ ಮಾರ್ಗ ಬಿಟ್ಟು, ಭಗತ್ ಮಾದರಿ ಹೋರಾಟದ ಎಚ್ಚರಿಕೆ
ಭದ್ರಾ ಮೇಲ್ದಂಡೆ ನೀರು ಆದೇಶ ಹಿಂಪಡೆಗೆ ತಾಕೀತು