ಕನ್ನಡಪ್ರಭ ವಾರ್ತೆ, ತುಮಕೂರುಸಂವಿಧಾನ, ಪ್ರಜಾಸತ್ತೆ ಮತ್ತು ಬಹುತ್ವ ಇವುಗಳ ಉಳವಿಗಾಗಿ ಬಿಜೆಪಿಯನ್ನು ಸೋಲಿಸಿ, ದೇಶ ಉಳಿಸಿ ಆಂದೋಲನವನ್ನು ಸಿಪಿಐ ರಾಷ್ಟ್ರದಾದ್ಯಂತ ಹಮ್ಮಿಕೊಂಡಿದ್ದು,ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರಾಜಕೀಯ ಸಮಾವೇಶಗಳನ್ನು ಹಮ್ಮಿಕೊಂಡಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.ನಗರದ ಟೌನ್ಹಾಲ್ ಮುಂಭಾಗದಲ್ಲಿ ಸಿಪಿಐ ಪಕ್ಷದ ರಾಜಕೀಯ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಹಾಗೂ ಏತಕಾಗಿ ಬಿಜೆಪಿ ಸೋಲಿಸಬೇಕು ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.ಸ್ವಾತಂತ್ರ ಭಾರತದಲ್ಲಿ 2024ರ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದಾಗಿದ್ದು, ಈ ದೇಶದ ಸಂವಿಧಾನ,ಪ್ರಜಾಸತ್ತೆ ಮತ್ತು ಬಹುತ್ವದ ಭಾರತವನ್ನು ಉಳಿಸುವ ನಿಟ್ಟಿನಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದರು.ದೇಶದಲ್ಲಿ ಪ್ರಜಾಸತ್ತತೆ ಎಂಬುದು ನಾಶವಾಗಿದೆ. ಇದಕ್ಕೆ 17ನೇ ಲೋಕಸಭೆಯ ಕೊನೆಯ ಅಧಿವೇಶನವೇ ಸಾಕ್ಷಿ, ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ಸುಮಾರು 200ಕ್ಕೂ ಹೆಚ್ಚು ಸಂಸದರನ್ನು ಅಮಾನತ್ತಿನಲ್ಲಿಟ್ಟು, ದೇಶಕ್ಕೆ ಅಪಾಯಕಾರಿಯಾಗಿರುವ ನೂರಾರು ಕಾಯ್ದೆಗಳನ್ನು ಪಾರ್ಲಿಮೆಂಟ್ನಲ್ಲಿ ಚರ್ಚೆ ಇಲ್ಲದೆ ಪಾಸು ಮಾಡಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದವರನ್ನು ಐಟಿ,ಇಡಿ,ಸಿಬಿಐ ಮೂಲಕ ಜೈಲಿಗೆ ಕಳುಹಿಸಿ, ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ. ಇದಕ್ಕೆ ದೆಹಲಿ ಸಿ.ಎಂ.ಕೇಜ್ರಿವಾಲ್,ಹಾಗೂ ಹೇಮಂತ ಸೂರೇನ್ ಪ್ರಕರಣ ತಾಜಾ ಉದಾಹರಣೆ. ಈ ದೇಶದಲ್ಲಿ ಪ್ರಜಾಸತ್ತತೆ ಉಳಿಯಬೇಕಾದರೆ ಬಿಜೆಪಿ ಸೋಲಬೇಕಿದೆ ಎಂದು ಸಾತಿ ಸುಂದರೇಶ್ ನುಡಿದರು.ತುಮಕೂರು ಲೋಕಸಭಾ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಈ ದೇಶಕ್ಕೆ ಶ್ರೀಮಂತ, ಹಣ ಬಲ, ತೋಳ್ಬಲ ಇರುವ ಸಂಸದರಿಗಿಂತ, ಬಡವರು, ದೀನದಲಿತರು, ಕಾರ್ಮಿಕರು, ರೈತರು, ಆರ್ಥಿಕ ಸಂಕಷ್ಟದಲ್ಲಿರುವ ಜನರ ಕಷ್ಟ ಸುಖಃಗಳನ್ನು ಅರ್ಥ ಮಾಡಿಕೊಂಡು,ಅವರ ಪರವಾಗಿ ಸಂಸತ್ತಿನಲ್ಲಿ ದ್ವನಿ ಎತ್ತುವ ಸಂಸದರ ಅಗತ್ಯವಿದೆ.