ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದಲ್ಲಿ ಭೀಕರ ಬರಗಾಲ ಕಾಡುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ರೈತರ ಬದುಕು ಚಿಂತಾಜನಕವಾಗಿದೆ. ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದ ಕಾರಣ ರೈತರ ಬದುಕು ಬೀದಿ ಪಾಲಾಗಿ ಜೀವನ ನಡೆಸಲು ಹರಸಾಹಸ ಪಡುತ್ತಿದ್ದರೂ ಸರ್ಕಾರಗಳು ಲೋಕಾಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಕಿಡಿಕಾರಿದ್ದಾರೆ.ಈಗಾಗಲೇ ಎಲ್ಲಾ ಕೆರೆ ಕಟ್ಟೆಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿ ಹೋಗಿದ್ದು, ಬೆಳೆದು ನಿಂತಿರುವ ಬೆಳೆಗಳು ನೀರಿಲ್ಲದೆ ಒಣಗಿ ಹಾಳಾಗಿವೆ. ಕೃಷಿ ಪಂಪ್ ಸೆಟ್ ನಂಬಿ ಬೆಳೆ ಬೆಳೆದು ಬದುಕುತ್ತಿದ್ದ ರೈತರು ಬೋರ್ ವೆಲ್ ಗಳಲ್ಲಿ ನೀರು ನಿಂತು ಹೋದ ಕಾರಣ ಬೆಳೆಗಳು ಒಣಗಿ ನೆಲ ಕಚ್ಚಿದ್ದು, ಅವರ ಬದುಕು ಕೂಡಾ ದುಸ್ತರವಾಗಿದೆ. ಗ್ರಾಮೀಣ ಭಾಗದಲ್ಲಿ ಜನ - ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಕಾಡುತ್ತಿದ್ದು, ಕೊರತೆ ನೀಗಿಸಲು ಸರ್ಕಾರಗಳು ಕೈ ಚೆಲ್ಲಿ ಕುಳಿತು ಚುನಾವಣೆಯ ತಮ್ಮ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದು, ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವೇ ಬರಗಾಲ ಘೋಷಣೆ ಮಾಡಿ, ರೈತರಿಗೆ ಬರ ಪರಿಹಾರ ಘೋಷಣೆ ಮಾಡಿ ಸಮರ್ಪಕವಾಗಿ ನೀಡಲು ವಿಫಲವಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದು, ರೈತರು ಮೂಕ ಪ್ರೇಕ್ಷಕರಾಗಿ ಭಕ ಪಕ್ಷಿಗಳಂತೆ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಬ್ಯಾಂಕ್ ಗಳಲ್ಲಿ ರೈತರು ಕೃಷಿ ಚಟುವಟಿಕೆಗೆ ಸಾಲ ಮಾಡಿದ್ದು ಭೀಕರ ಬರಗಾಲದ ಪರಿಣಾಮ ಸಾಲ ಕಟ್ಟಲು ಸಾಧ್ಯವಾಗದ ಸಂದರ್ಭದಲ್ಲಿ ಬ್ಯಾಂಕ್ ಗಳು ರೈತರಿಗೆ ಸಿಬಿಲ್ ಸ್ಕೋರ್ ನೆಪ ಹೇಳಿ ನೊಟೀಸ್ ಜಾರಿ ಮಾಡಿ ಕೋರ್ಟ್ ಗಳಲ್ಲಿ ಧಾವೆ ಹೂಡಿ ರೈತರ ಮಾನ ಹರಾಜು ಹಾಕುತ್ತಿದ್ದಾರೆ. ತಕ್ಷಣವೇ ಇದು ನಿಲ್ಲಬೇಕು ಎಂದು ಅವರು ಆಗ್ರಹಿದ್ದಾರೆ.ಕೃಷಿ ಪಂಪ್ ಸೆಟ್ ರೈತರಿಗೆ ಹಗಲು ವೇಳೆ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ದೇಶಕ್ಕಾಗಿ ಅನ್ನ ಬೆಳೆಯಲು ಮಾಡಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ತುರ್ತಾಗಿ ರೈತರ ರಕ್ಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.