ಬಡವರ ವಸತಿ ವಿಳಂಬ: ಸಿಎಂ ಅಸಮಾಧಾನ

KannadaprabhaNewsNetwork |  
Published : Jun 25, 2026, 01:45 AM IST
ಡಿಕೆಶಿ | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರದ ಬಡವರ ವಸತಿ ಯೋಜನೆಗಳಲ್ಲಿ ಆಗುತ್ತಿರುವ ನಿಧಾನಗತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರದ ಬಡವರ ವಸತಿ ಯೋಜನೆಗಳಲ್ಲಿ ಆಗುತ್ತಿರುವ ನಿಧಾನಗತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಹಿಂದಿನ ಸರ್ಕಾರದಲ್ಲಿ ಸಲ್ಲಿಸಿರುವ ಅರ್ಜಿಗಳ ಮೇಲೆ ಅಂದಿನ ವಸತಿ ಸಚಿವ ವಿ.ಸೋಮಣ್ಣ ಅವರ ಫೋಟೋ ಇದೆ. ಅವರಿಗೂ ಇನ್ನೂ ಮನೆಗಳು ಸಿಕ್ಕಿಲ್ಲ. ಪಾಪ ಅವರೆಲ್ಲ ಎಷ್ಟು ವರ್ಷ ಕಾಯಬೇಕು. ಬೇಗ ಮನೆ ವಿತರಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಧಾನಸೌಧದಲ್ಲಿ ಬುಧವಾರ ವಸತಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜೀವಿತಾವಧಿಯಲ್ಲಿ ಒಂದು ಮನೆ ಬೇಕು ಎನ್ನೋದು ಬಡವರು, ಮಧ್ಯಮ ವರ್ಗದವರ ಕನಸು, ಆಸೆ. ಬಡವರು ಸರ್ಕಾರಕ್ಕೆ ಠೇವಣಿ ಕಟ್ಟಿ ಎಷ್ಟು ವರ್ಷ ಕಾಯಬೇಕು. ಹಿಂದಿನ ಸರ್ಕಾರದಲ್ಲಿ ಠೇವಣಿ ಕಟ್ಟಿ ಅರ್ಜಿ ಹಾಕಿದವರಿಗೂ ಇನ್ನೂ ಮನೆ ಸಿಕ್ಕಿಲ್ಲ ಎಂದರೆ ಏನ್ರೀ ಇದು. ಇದನ್ನು ಸಹಿಸಲಾಗುವುದಿಲ್ಲ. ಆದಷ್ಟು ಬೇಗ ತಮ್ಮ ಕ್ಷೇತ್ರಗಳಿಂದ ಫಲಾನುಭವಿಗಳ ಪಟ್ಟಿ ಕೊಡಲು ಶಾಸಕರ ಜೊತೆ ಮಾತನಾಡುತ್ತೇನೆ. ಬಾಕಿ ಇರುವ ಯೋಜನೆಗಳನ್ನು ಪೂಣಗೊಳಿಸಿ ಫಲಾನುಭವಿಗಳಿಗೆ ಬೇಗ ಮನೆ ವಿತರಿಸಲು ಕ್ರಮ ವಹಿಸಿ ಎಂದು ಸೂಚಿಸಿದರು.

ಬಡವರಿಗೆ ನಿವೇಶನ ನೀಡಿದರೆ ಹಣ ಹೊಂದಿಸಿ ಮನೆ ಕಟ್ಟಿಕೊಳ್ಳುವುದು ಕಷ್ಟ. ಹಾಗಾಗಿ ನಿವೇಶನದ ಬದಲು ಮನೆಯನ್ನೇ ಕಟ್ಟಿ ಕೊಡಲು ಆದ್ಯತೆ ನೀಡಿ. ನಿವೇಶನಗಳು ಖಾಲಿ ಬಿದ್ದಷ್ಟೂ ಕೊಳಗೇರಿಗಳು ಹೆಚ್ಚು ತಲೆ ಎತ್ತುತ್ತವೆ. ಇದಕ್ಕೆ ಅವಕಾಶ ಕೊಡಬೇಡಿ. ಯಾವುದೇ ವಸತಿ ಯೋಜನೆಗೆ ಕೈ ಹಾಕುವ ಮೊದಲೇ ಸ್ಪಷ್ಟ ಯೋಜನೆ ಇಟ್ಟುಕೊಳ್ಳಿ. ಮನೆ ನಿರ್ಮಿಸಿದ ನಂತರ ಮಾರಾಟಕ್ಕೆ ಒದ್ದಾಡುವುದು ಬೇಡ ಎಂದು ತಿಳಿಸಿದರು.

ಗ್ರಾಮೀಣ ವಸತಿ ಮನೆಗಳ ನಿರ್ಮಾಣ, ನಿವೇಶನಗಳ ಹಂಚಿಕೆಯಲ್ಲಿ ನಿಧಾನ ಆಗಬಾರದು. ಮನೆ ಕಟ್ಟಲು ಸರ್ಕಾರದಿಂದ ಕಡಿಮೆ ದರದಲ್ಲಿ ನಿವೇಶನ ಪಡೆದವರು 3 ಅಥವಾ ಐದು ವರ್ಷದೊಳಗೆ ಮನೆ ನಿರ್ಮಿಸುವ ನಿಯಮ ಪರಿಶೀಲಿಸಿ ಎಂದು ಸೂಚಿಸಿದರು.

ಮನೆಗಳ ಹರಾಜು ಪ್ರಸ್ತಾಪಕ್ಕೆ ಸಿಎಂ ಗರಂ:

ಈ ವೇಳೆ ಅಧಿಕಾರಿಗಳು ವಿವಿಧ ಯೋಜನೆಯ ಮನೆಗಳಿಗೆ ಹೆಚ್ಚು ಅರ್ಜಿಗಳು ಬಂದಿರುವುದರಿಂದ ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡುವುದಾಗಿ ಪ್ರಸ್ತಾಪಿಸಿದ್ದಕ್ಕೆ ಗರಂ ಆದ ಮುಖ್ಯಮಂತ್ರಿ, ಹರಾಜು ಹಾಕಿದರೆ ಅರ್ಹರಿಗೆ ಸಿಗುತ್ತದೋ, ಹಣವಿದ್ದವರಿಗೆ ಸಿಗುತ್ತದೋ? ಎಂದು ಕೇಳಿದಾಗ ತಬ್ಬಿಬ್ಬಾದ ಅಧಿಕಾರಿಗಳು ಬಾಯಿ ಬಿಡಲಿಲ್ಲ. ಹರಾಜು ವ್ಯವಸ್ಥೆ ಬೇಡ, ಸಾರ್ವಜನಿಕವಾಗಿ ಲಾಟರಿ ಎತ್ತಿ. ಒಟ್ಟಿನಲ್ಲಿ ಬಡವರಿಗೆ, ಅರ್ಹರಿಗೆ ಮನೆ ಸಿಗಬೇಕು. ಅದಕ್ಕೆ ಯಾವ ಕ್ರಮ ಅನುಸರಿಸುತ್ತೀರಿ ನನಗೆ ಸ್ಪಷ್ಟತೆ ನೀಡಿ ಎಂದರು.

ಉತ್ತಮ ಮಾದರಿಯಲ್ಲಿ ಸ್ಲಂ ಅಭಿವೃದ್ಧಿಗೆ ವರದಿ ನೀಡಿ:

ರಾಜ್ಯದಲ್ಲಿ ಕೊಳಗೇರಿಗಳ ಮರು ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಬೇಕು. ಇದಕ್ಕಾಗಿ ಮುಂಬೈಗೆ ಭೇಟಿ ನೀಡಿ ಅಲ್ಲಿನ ಕೊಳಗೇರಿ ಅಭಿವೃದ್ಧಿ ಅವಲೋಕಿಸಿ ಬನ್ನಿ. ಅಲ್ಲಿಗಿಂತ ಉತ್ತಮ ರೀತಿಯಲ್ಲಿ ನಮ್ಮ ಕೊಳಗೇರಿಗಳ ಅಭಿವೃದ್ಧಿ ಪಡಿಸಲು, ಹೆಚ್ಚು ವಿಸ್ತೀರ್ಣದ ಮನೆಗಳನ್ನು ನಿರ್ಮಿಸಲು ಏನು ಮಾಡಬಹುದು ಅವಲೋಕಿಸಿ. ಮುಂದಿನ ಸಚಿವ ಸಂಪುಟದ ವೇಳೆಗೆ ವರದಿ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ತಿಳಿಸಿದರು.

ಕೆಎಚ್‌ಬಿಯ ಬಾಕಿ 288 ಯೋಜನೆ ಜಾರಿಗೆ ಕ್ರಮ ವಹಿಸಿ: ಕರ್ನಾಟಕ ಗೃಹ ಮಂಡಳಿಯಿಂದ 568 ಯೋಜನೆಗಳನ್ನು ಅನುಮೋದಿಸಲಾಗಿದ್ದು, ಇದರಲ್ಲಿ 280 ಅನುಷ್ಠಾನಗೊಂಡಿವೆ. 288 ಬಾಕಿ ಇವೆ. ಈ ಬಾಕಿ ಯೋಜನೆಗಳಿಗೆ ಅಡ್ಡಿ ಆಗಿರುವ ತಾಂತ್ರಿಕ ಅಡಚಣೆಗಳ ನಿವಾರಣೆಗೆ ಕ್ರಮ ವಹಿಸಬೇಕು ಮತ್ತು ದುರುಪಯೋಗ ಆಗದಂತೆ ಜಾಗ್ರತೆ ವಹಿಸಬೇಕು ಎಂದು ತಾಕೀತು ಮಾಡಿದರು.

ಇದೇ ವೇಳೆ, ಶಿವರಾಮಕಾರಂತ ಬಡಾವಣೆಯ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಗಳ ನಿರ್ಮಾಣ ಜವಾಬ್ದಾರಿಯನ್ನು ಬಿಡಿಎಗೆ ವಹಿಸಲು ಸೂಚಿಸಿದ ಮುಖ್ಯಮಂತ್ರಿ ಅವರು, ಸಂಡೂರಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಿರುವ ಮನೆಗಳ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ವಸತಿ ಯೋಜನೆ ಅನುಷ್ಠಾನಕ್ಕೆ ಯೋಜನಾ ವಿಭಾಗಕ್ಕೆ ಮೊದಲು ಹೋಗಲೇಬೇಕು. ಮನೆ ಕಟ್ಟಿದರೆ ಸಾಲದು. ಮೂಲಭೂತ ಸೌಲಭ್ಯಗಳು ಮತ್ತು ಸೂಕ್ತ ಸಂಪರ್ಕ ಕಲ್ಪಿಸುವ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ವಸತಿ ಇಲಾಖೆ ಕಾರ್ಯದರ್ಶಿ ಮೋಹನ್‌ ರಾಜ್‌, ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಶಿನ್ನಾಳಕರ್‌, ಕರ್ನಾಟಕ ಗೃಹ ಮಂಡಳಿ ಆಯುಕ್ತ ದಯಾನಂದ, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ರಾಘವೇಂದ್ರ ಟಿ. ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಮಹೇಶ ಟೆಂಗಿನಕಾಯಿ ಜನ್ಮದಿನ: ವಿವಿಧ ಕಾರ್ಯಕ್ರಮ
ಸೆಲ್ಫಿ ತೆಗೆದುಕೊಳ್ಳಲು ಹೋಗಿಕಾವೇರಿ ಬಿದ್ದು ಐವರು ಸಾವು