ಕಂಪ್ಲಿ: ಜನರಿಗೆ ಫಾರಂ ನಂಬರ್ 3 ನೀಡುವಲ್ಲಿ ವಿಳಂಬವಾದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ(ಪಕ್ಷಾತೀತ) ಅಧ್ಯಕ್ಷ ಜಿ.ಜಿ. ಚಂದ್ರಣ್ಣ ತಿಳಿಸಿದರು.
ಫಾರಂ ನಂಬರ್ 3 ಹಾಗೂ ಮೋಟೇಶನ್ ಗಾಗಿ ಬಡ ಹಾಗೂ ಮಾಧ್ಯಮ ವರ್ಗದ ಎಷ್ಟೋ ಜನರು ಅರ್ಜಿ ಸಲ್ಲಿಸಿ 3 ತಿಂಗಳು ಕಳೆದರೂ ಅವರ ಕೆಲಸಗಳಾಗದಿರುವುದು ದುರಂತವೇ ಸರಿ. ಈ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು. ಒಂದು ವೇಳೆ ವಿಳಂಬವಾದಲ್ಲಿ ಅಥವಾ ಹಣದ ಬೇಡಿಕೆ ಇಟ್ಟಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಆಕ್ರೋಶ ಹೊರಹಾಕಿದರು.
ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ವಯೋವೃದ್ಧರು, ಗರ್ಭಿಣಿಯರು, ಮಹಿಳೆಯರು ಹಾಗೂ ಅಂಗವಿಕಲರು ಬಿಸಿಲಿನಲ್ಲಿ ನಿಂತೆ ಬಸ್ಗಾಗಿ ಕಾಯುವ ಪರಿಸ್ಥಿತಿ ಇದೆ. ಈ ಕುರಿತು ಪುರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಬಸ್ ತಂಗುದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಕರೆಕಲ್ ಮನೋಹರ್, ಬಿ. ನಾಗೇಂದ್ರ, ವಿ. ವೆಂಕಟರಮಣ, ಹನುಮಂತ, ಬಿ.ಕೆ. ವಿರೂಪಾಕ್ಷಿ, ಭಾವೈಕ್ಯ ವೆಂಕಟೇಶ್, ಬಾವಿಕಟ್ಟೆಯ ವೆಂಕಟೇಶ್ ಸೇರಿದಂತೆ ಇತರರಿದ್ದರು.