ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಉದ್ದೇಶಪೂರಿತ ಹಲ್ಲೆ: ದೇವೇರಾಜೇಗೌಡ

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು ಮಾಡಿರುವ ಮಾರಣಾಂತಿಕ ಹಲ್ಲೆ ಉದ್ದೇಶಪೂರ್ವಕವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ಮತ್ತು ಪಕ್ಷದ ಮಾಧ್ಯಮ ವಕ್ತಾರ ದೇವೇರಾಜೇಗೌಡ ಆಗ್ರಹಿಸಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

KannadaprabhaNewsNetwork | Published : Apr 27, 2024 7:54 PM IST

ಜಿಲ್ಲಾ ಕಾಂಗ್ರೆಸ್‌ನ ಲಕ್ಷ್ಮಣ್, ಪಕ್ಷದ ಮಾಧ್ಯಮ ವಕ್ತಾರ ಆರೋಪ

ಕನ್ನಡಪ್ರಭ ವಾರ್ತೆ ಹಾಸನ

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು ಮಾಡಿರುವ ಮಾರಣಾಂತಿಕ ಹಲ್ಲೆ ಉದ್ದೇಶಪೂರ್ವಕವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ಮತ್ತು ಪಕ್ಷದ ಮಾಧ್ಯಮ ವಕ್ತಾರ ದೇವೇರಾಜೇಗೌಡ ಆಗ್ರಹಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತಾಡಿ, ‘ಹೊಳೆನರಸೀಪುರ ತಾಲೂಕಿನ ಕೆ.ಬಿ.ಪಾಳ್ಯ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್ ಅವರು ಬಂದ ವೇಳೆ ಜೆಡಿಎಸ್ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿ ಗಲಭೆಗೆ ಕಾರಣರಾಗಿದ್ದಾರೆ. ಜತೆಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಗಲಾಟೆಯಲ್ಲಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಗಾಯಗಳುಗಳು ಚಿಕಿತ್ಸೆ ಪಡೆಯುತ್ತಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿರುವ ಒಬ್ಬನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ’ ಎಂದು ಹೇಳಿದರು.

‘ಈಗಾಲೇ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳು ಆಸ್ಪತ್ರೆಯಿಂದ ಹೊರ ಬಂದ ಬಳಿಕ ದೂರು ನೀಡಿ ಕ್ರಮಕ್ಕೆ ಒತ್ತಾಯ ಮಾಡಲಾಗುವುದು. ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯ ರೀತಿಯ ಮತದಾನ ಆಗಿದೆ. ಈ ಅಂಕಿ ಅಂಶ ನೋಡಿದರೆ ಕಾಂಗ್ರೆಸ್ ಗೆಲ್ಲುವ ಎಲ್ಲಾ ಲಕ್ಷಣ ಇದೆ. ೩೦ ರಿಂದ ೫೦ ಸಾವಿರ ಲೀಡ್‌ನಲ್ಲಿ ನಾವು ಗೆಲ್ಲುತ್ತೇವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು, ಅಭ್ಯರ್ಥಿಯ ಸರಳತೆ ಸ್ವಭಾವ ಗೆಲುವಿಗೆ ಪೂರಕ ಆಗಲಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ನಮಗೆ ಮುನ್ನಡೆ ಸಿಗಲಿದೆ ಎಂಬ ಅಭಿಪ್ರಾಯ ಸಿಕ್ಕಿದೆ. ಆ ದೃಢವಾದ ನಂಬಿಕೆ ನಮಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ ಮಾತನಾಡಿ, ಸುಸೂತ್ರ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದಗಳು. ಪಕ್ಷದ ವರಿಷ್ಠರ ಸೂಚನೆಯಂತೆ ಹಾಸನ ಜಿಲ್ಲೆಯ ಯಾವುದೇ ನಾಯಕರು ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಕೆಲಸ ಮಾಡಿದ್ದು, ಪಕ್ಷಾತೀತವಾಗಿ ಚುನಾವಣೆಯನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಎಲ್ಲರಿಗೂ ಈ ಮೂಲಕ ಧನ್ಯವಾದ ತಿಳಿಸುವುದಾಗಿ ಹೇಳಿದರು

ಕಾಂಗ್ರೆಸ್ ಮುಖಂಡರಾದ ತಾರಾ ಚಂದನ್, ಅಶೋಕ್ ಇತರರು ಇದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಈ.ಎಚ್.ಲಕ್ಷ್ಮಣ್. ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಇತರರು ಇದ್ದರು.

Share this article