ಹಾನಗಲ್ಲ: ಮಕ್ಕಳಿಗೆ ಶರಣ ಸಂದೇಶಗಳನ್ನು ತಲುಪಿಸಿ, ಸಾಂಸ್ಕೃತಿಕ - ಸಾಮಾಜಿಕ ನಡುವಳಿಕೆ, ಬಾಂಧವ್ಯ ಬೆಸೆಯುವ ಕೆಲಸ ಅತ್ಯವಶ್ಯವಾಗಿ ನಡೆಯಬೇಕು ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಎಸ್.ವಿ. ಹೊಸಮನಿ ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತ ಶಿಕ್ಷಕ ಎಸ್.ಎಫ್. ಕಠಾರಿ ಮಾತನಾಡಿ, ಮಕ್ಕಳು ನಿತ್ಯ ವಚನ ಪಠನ ಮಾಡುವುದರಿಂದ ಉತ್ತಮ ಸಂಸ್ಕಾರ ಪಡೆಯಲು ಸಾಧ್ಯ. ಅತ್ಯಂತ ಸರಳವಾಗಿರುವ ವಚನಗಳು ಎಲ್ಲ ಮಕ್ಕಳಿಗೆ ಸುಲಭವಾಗಿ ಆರ್ಥವೂ ಆಗುವುದರಿಂದ ಉತ್ತಮ ಪರಿಣಾಮ ಬೀರಬಲ್ಲವು. ಮಕ್ಕಳ ಬದುಕು ರೂಪಿಸಲು ವಚನಗಳು ಸಹಕಾರಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ಶಾಲೆ, ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಶಾಲಾ ಹಂತದಲ್ಲಿ ವಚನಗಳ ಪರಿಚಯಕ್ಕೆ ಪರಿಶ್ರಮಿಸಬೇಕಾಗಿದೆ. ಇಂದಿನ ಮಕ್ಕಳು ಯುವಕರಿಗೆ ವಚನಗಳ ಪರಿಚಯ ಅಗತ್ಯವಾಗಿದೆ ಎಂದರು.ಗ್ರಾಪಂ ಸದಸ್ಯ ಭರಮಗೌಡ ಚನ್ನಗೌಡರ, ಶಾಲಾ ಆಭಿವೃದ್ಧಿ ಸಮಿತಿ ಸದಸ್ಯ ಶಿವಪ್ಪ ಕುರುಡಿ, ಶಿಕ್ಷಕಿ ಆಶ್ವಿನಿ ಕುರುಡಿ ಪಾಲ್ಗೊಂಡಿದ್ದರು. ವಚನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರೋಹಿತ ತಳವಾರ, ದ್ವಿತೀಯ ಸ್ಥಾನ ಪಡೆದ ಸಮರ್ಥ ಜಾಡರ, ತೃತೀಯ ಸ್ಥಾನ ಪಡೆದ ಯುವರಾಜ ಲಾಂಡಿಗೇರ ಅವರನ್ನು ಸನ್ಮಾನಿಸಿ, ಬಹುಮಾನ ವಿತರಿಸಲಾಯಿತು.