ಬಸ್‌ನಲ್ಲಿ ಹೆರಿಗೆ: ಹೆಣ್ಣು ಮಗು ಜನನ

KannadaprabhaNewsNetwork |  
Published : Dec 16, 2023, 02:00 AM ISTUpdated : Dec 16, 2023, 02:01 AM IST
ಬಸ್ಸಿನಲ್ಲಿ ಹೆರಿಗೆಯಾದ ಬಾಣಂತಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಬಸ್ನಲ್ಲಿ ಕರೆ ತಂದ ಬಸ್ ಚಾಲಕ ಮತ್ತು ನಿರ್ವಾಹಕ. ಆಸ್ಪತ್ರೆ ವೈದ್ಯ ಹಾಗೂ ಸಿಬ್ಬಂದಿ ತಂಡದೊಂದಿಗೆ ಬಾಣಂತಿ ಪಿಂಕಿ. | Kannada Prabha

ಸಾರಾಂಶ

ಕೆಎಸ್‌ಆರ್‌ಟಿಸಿ ಚಲಿಸುವ ಬಸ್‌ವೊಂದರಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್‌ ಚಾಲಕ, ನಿರ್ವಾಹಕ, ಬಸ್‌ನಲ್ಲಿದ್ದ ಮಹಿಳೆಯರು ಮಾನವೀಯತೆ ಮೆರೆದಿದ್ದು, ಬಸ್‌ನಲ್ಲೇ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಹಿಳೆಗೆ ಹೆಣ್ಣು ಮಗು ಜನಿಸಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಾರ್ಗ ಮಧ್ಯೆದಲ್ಲಿಯೇ ಬಸ್ಸಿನಲ್ಲಿದ್ದ ಮಹಿಳಾ‌ ಪ್ರಯಾಣಿಕರೆ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಬಸ್ಸಿನಲ್ಲಿರುವ ಪುರುಷರ ಪ್ರಯಾಣಿಕರನ್ನು ಕೆಳಗಿಳಿಸಿ ಹೆರಿಗೆಗೆ ಸಹಕರಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಪ್ರಯಾಣಿಕರನ್ನು ಕೆಳಗಿಳಿಸಿ ಹೆರಿಗೆ:

ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಚಾಲಕ ಹಾಗೂ ನಿರ್ವಾಹಕ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪುರುಷ ಪ್ರಯಾಣಿಕರನ್ನು ಕೆಳಗೆ ಇಳಿಸಿ, ಮಹಿಳಾ ಪ್ರಯಾಣಿಕರು ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿದ್ದಾರೆ.

ಈ ಸಮಯದಲ್ಲಿ ಬಾಣಂತಿಯ ಹತ್ತಿರ ಯಾವುದೇ ಬಟ್ಟೆಗಳು ಇಲ್ಲದ ಕಾರಣ ಪುರುಷ ಪ್ರಯಾಣಿಕರೋಬ್ಬರು ತಮ್ಮ ಹೊಸ ಟಾವೆಲ್ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ತಕ್ಷಣ ಬಾಣಂತಿ- ಮಗುವನ್ನು ಶಹಪೂರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಂತಿ ಹಾಗೂ ಹೆಣ್ಣು ಮಗು ಆರೋಗ್ಯವಾಗಿದ್ದಾರೆ. ಉತ್ತರ ಪ್ರದೇಶ ಮೂಲದ, ಬಲೂನ್‌ ಮಾರಾಟಗಾರರಾದ ಅಜಯ್‌ ಹಾಗೂ ಪಿಂಕಿ ದಂಪತಿಗೆ ಈ ಮಗು ಜನಿಸಿದೆ.

ತಕ್ಷಣ ಚಾಲಕ ನೀಲಕಂಠ ಸ್ವಾಮಿ, ಕಂಡಕ್ಟರ್ ಖೆಮುನಾಯಕ್ ಪ್ರಯಾಣಿಕರಿಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಿ ಕಳಿಸಿ ಬಾಣಂತಿ ಮತ್ತು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಬಸ್ಸಿನಲ್ಲಿ ಕರೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೆರಿಗೆ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಪ್ರಯಾಣಿಕರಿಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಿ ಕಳಿಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದೇನೆ. ಹೆರಿಗೆಗೆ ಸಹಕರಿಸಿ ಮಾನವೀಯತೆ ಮೆರೆದ ಚಾಲಕ ಮತ್ತು ನಿರ್ವಾಹಕರಿಗೆ ಹಾಗೂ ಹೆರಿಗೆ ಮಾಡಿಸಿದ ಮಹಿಳೆಯರಿಗೆ ಅಭಿನಂದನೆಗಳು ಎಂದು ಡಿಪೋ ಮ್ಯಾನೇಜರ್ ಅಕ್ಬರ್ ಹೊಟಗಿ ಹೇಳಿದರು.

ನನ್ನ ಹೆಂಡತಿಗೆ ಹೆರಿಗೆ ಬ್ಯಾನಿಯಿಂದ ನರಳುತ್ತಿದ್ದನ್ನು ನೋಡಿ ಗಾಬರಿಯಾಗಿದ್ದೆ, ಆದರೆ ಬಸ್ ಡ್ರೈವರ್ ಕಂಡಕ್ಟರ್ ಹಾಗೂ ಬಸ್ಸಿನಲ್ಲಿರುವ ಮಹಿಳೆಯರು ನನ್ನ ಹೆಂಡತಿಗೆ ಸುರಕ್ಷಿತ ಬಾಣಂತನ ಮಾಡಿದ್ದಾರೆ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಬಸ್ಸಿನಲ್ಲಿ ಹೆರಿಗೆಯಾದ ಬಾಣಂತಿ ಪಿಂಕಿಯ ಗಂಡ

ಅಜಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು