ಬೆಳಗಾವಿ- ಮಂತ್ರಾಲಯ ರೈಲಿಗೆ ಮತ್ತೆ ಬೇಡಿಕೆ

KannadaprabhaNewsNetwork |  
Published : Sep 07, 2025, 01:00 AM IST
ರೈಲು. | Kannada Prabha

ಸಾರಾಂಶ

ಕೊರೋನಾಕ್ಕಿಂತ ಮುಂಚೆ ಸಂಚರಿಸುತ್ತಿತ್ತು. ಕೊರೋನಾ ವೇಳೆ ರಶ್‌ ಆಗುವುದನ್ನು ತಡೆಯುವ ಹಿತದೃಷ್ಟಿಯಿಂದ ಕೆಲ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಸ್ಥಗಿತಗೊಳಿಸಿದ ರೈಲುಗಳ ಪೈಕಿ ಮಂತ್ರಾಲಯಂ ರೋಡ್‌ಗೆ ಉತ್ತರ ಕರ್ನಾಟಕ ಭಾಗದಿಂದ ಸಂಪರ್ಕಿಸುವ ರೈಲು ಕೂಡ ಒಂದಾಗಿದೆ.ಕೊರೋನಾ ಮುಗಿದ ಬಳಿಕ ಸ್ಥಗಿತಗೊಂಡಿದ್ದ ಉಳಿದ ಎಲ್ಲ ರೈಲುಗಳ ಸಂಚಾರ ಪುನಾರಂಭಗೊಳಿಸಲಾಯಿತು. ಆದರೆ ಅದೇಕೋ ಏನೋ ಮಂತ್ರಾಲಯಂ ರೋಡ್‌ಗೆ ಸಂಪರ್ಕಿಸುವ ರೈಲು ಮಾತ್ರ ಪುನಾರಂಭಗೊಳ್ಳಲೇ ಇಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು, ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಎನಿಸಿರುವ ಹುಬ್ಬಳ್ಳಿಯಾಗಲಿ, ಗಡಿ ಜಿಲ್ಲೆ ಬೆಳಗಾವಿಯಿಂದಾಗಲಿ ಮಂತ್ರಾಲಯಕ್ಕೆ ರೈಲಿನ ಸೌಲಭ್ಯವೇ ಇಲ್ಲ. ಇದು ಈ ಭಾಗದ ರಾಯರ ಭಕ್ತರಲ್ಲಿ ಬೇಸರವನ್ನುಂಟು ಮಾಡುತ್ತಿದ್ದು, ಈ ಭಾಗದಿಂದ ಮಂತ್ರಾಲಯಂ ರೋಡ್‌ಗೆ ನೇರವಾಗಿ ರೈಲು ಪ್ರಾರಂಭಿಸಬೇಕು ಎಂಬ ಬೇಡಿಕೆ ಇದೆ.

ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರಾಯರ ಭಕ್ತರ ಸಂಖ್ಯೆ ಜಾಸ್ತಿ. ಜತೆಗೆ ರಾಜ್ಯದ ದೊಡ್ಡ ನಗರ ಎನಿಸಿರುವ ಹುಬ್ಬಳ್ಳಿಯಲ್ಲೇ ನೈಋತ್ಯ ವಲಯದ ಕೇಂದ್ರ ಕಚೇರಿ ಇದೆ. ಆದರೂ ಕೂಡ ಈ ಭಾಗದಿಂದ ಒಂದೇ ಒಂದು ರೈಲು ಮಂತ್ರಾಲಯಂ ರೋಡ್‌ (ಸ್ಟೇಷನ್‌)ಗೆ ಇಲ್ಲ.

ಹಾಗಂತ ಮುಂಚೆ ಇರಲಿಲ್ಲ ಅಂತೇನೂ ಇಲ್ಲ. ಕೊರೋನಾಕ್ಕಿಂತ ಮುಂಚೆ ಧಾರವಾಡದಿಂದ ಮಂತ್ರಾಲಯಂ ರೋಡ್‌ಗೆ ರೈಲು ಇತ್ತು. ಬಳಿಕ ಇದನ್ನೇ ಬೆಳಗಾವಿಯಿಂದಲೂ ಓಡಿಸಲಾಗುತ್ತಿತ್ತು.

ಜತೆಗೆ ಕೊಪ ಮುಗುರು ಎಕ್ಸ್‌ಪ್ರೆಸ್‌ ಎಂಬ ರೈಲು ಇತ್ತು. ಇದು ಶಾಹು ಮಹಾರಾಜ್‌ ಸ್ಟೇಷನ್‌ನಿಂದ ತೆಲಂಗಾಣದ ಮುನುಗುರುಗೆ ರೈಲು ಸಂಚಾರವಿತ್ತು. ಇದು ಕೂಡ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಮೂಲಕ ಮಂತ್ರಾಲಯಂ ರೋಡ್‌ ಸ್ಟೇಷನ್‌ಗೆ ತೆರಳುತ್ತಿತ್ತು. ಆದರೆ, ಇದು ಕೂಡ ಇದೀಗ ಇಲ್ಲ.

ಕಾರಣವೇನು?: ಕೊರೋನಾಕ್ಕಿಂತ ಮುಂಚೆ ಸಂಚರಿಸುತ್ತಿತ್ತು. ಕೊರೋನಾ ವೇಳೆ ರಶ್‌ ಆಗುವುದನ್ನು ತಡೆಯುವ ಹಿತದೃಷ್ಟಿಯಿಂದ ಕೆಲ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಸ್ಥಗಿತಗೊಳಿಸಿದ ರೈಲುಗಳ ಪೈಕಿ ಮಂತ್ರಾಲಯಂ ರೋಡ್‌ಗೆ ಉತ್ತರ ಕರ್ನಾಟಕ ಭಾಗದಿಂದ ಸಂಪರ್ಕಿಸುವ ರೈಲು ಕೂಡ ಒಂದಾಗಿದೆ.

ಕೊರೋನಾ ಮುಗಿದ ಬಳಿಕ ಸ್ಥಗಿತಗೊಂಡಿದ್ದ ಉಳಿದ ಎಲ್ಲ ರೈಲುಗಳ ಸಂಚಾರ ಪುನಾರಂಭಗೊಳಿಸಲಾಯಿತು. ಆದರೆ ಅದೇಕೋ ಏನೋ ಮಂತ್ರಾಲಯಂ ರೋಡ್‌ಗೆ ಸಂಪರ್ಕಿಸುವ ರೈಲು ಮಾತ್ರ ಪುನಾರಂಭಗೊಳ್ಳಲೇ ಇಲ್ಲ.

ಮನವಿ ಕೊಟ್ಟಿದ್ದು ಆಯ್ತು: ಹುಬ್ಬಳ್ಳಿ ಅಥವಾ ಬೆಳಗಾವಿಯಿಂದ ಮಂತ್ರಾಲಯಂ ರೋಡ್‌ಗೆ ನೇರವಾಗಿ ರೈಲನ್ನು ಆರಂಭಿಸಿ ಎಂಬ ಬೇಡಿಕೆಯನ್ನು ಈ ಭಾಗದ ಜನರು ಹಲವು ಬಾರಿ ಅಧಿಕಾರಿ ವರ್ಗಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಸಲ್ಲಿಸಿದ್ದು ಆಗಿದೆ. ಆದರೆ, ಪ್ರಯೋಜನ ಮಾತ್ರ ಶೂನ್ಯ ಎಂಬಂತಾಗಿದೆ.

ಹಾಗಂತ ಈ ರೈಲಿಗೆ ಹೋಗುವ ಭಕ್ತರ ಸಂಖ್ಯೆಯೇನೂ ಕಮ್ಮಿಯಿಲ್ಲ. ಏಕೆಂದರೆ ಮಂತ್ರಾಲಯಕ್ಕೆ ಹೋಗಬೇಕೆಂದರೆ ಬಸ್‌ಗಿಂತ ರೈಲು ಪಯಣ ಅನುಕೂಲಕರ ಎಂಬುದರಲ್ಲಿ ಎರಡು ಮಾತಿಲ್ಲ. ಬಸ್‌ನಲ್ಲಿ ಹೋದರೆ ನೇರವಾಗಿ ದೇವಸ್ಥಾನದ ಎದುರಿಗೆ ಹೋಗುತ್ತದೆ. ರೈಲ್ವೆ ಸ್ಟೇಷನ್‌ ಮಂತ್ರಾಲಯ ದೇವಸ್ಥಾನದಿಂದ 15 ಕಿಮೀ ದೂರದಲ್ಲಿದೆ. ಆದರೂ ಮಕ್ಕಳು, ವೃದ್ಧರನ್ನು ಕರೆದುಕೊಂಡು ಹೋಗಬೇಕೆಂದರೆ ರೈಲು ಪ್ರಯಾಣವೇ ಹೆಚ್ಚು ಅನುಕೂಲ ಹಾಗೂ ಸುರಕ್ಷಿತ ಎಂಬುದು ನಾಗರಿಕರ ಅಂಬೋಣ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಅಥವಾ ಹುಬ್ಬಳ್ಳಿಯಿಂದ ಮಂತ್ರಾಲಯಂ ರೋಡ್‌ಗೆ ನೇರವಾಗಿ ರೈಲು ಸಂಪರ್ಕ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌, ಹಾವೇರಿ- ಗದಗ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಈ ಭಾಗದ ಸಂಸದರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಜೋಶಿ, ಶೆಟ್ಟರ್‌ ಮನಸು ಮಾಡಿದರೆ ಇದೇನು ಕಷ್ಟದ ಮಾತಲ್ಲ ಎಂಬುದು ಭಕ್ತರ ಅಭಿಮತ.

ಒಟ್ಟಿನಲ್ಲಿ ಉತ್ತರ ಕರ್ನಾಟಕದಿಂದ ಮಂತ್ರಾಲಯಂಕ್ಕೆ ರೈಲು ಸಂಪರ್ಕ ಮಾಡಬೇಕು ಎಂಬುದು ನಾಗರಿಕರ ಆಗ್ರಹ. ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!.

ಹುಬ್ಬಳ್ಳಿ ಅಥವಾ ಬೆಳಗಾವಿಯಿಂದ ಮಂತ್ರಾಲಯಂ ರೋಡ್‌ಗೆ ನೇರ ರೈಲು ಸಂಪರ್ಕ ಇಲ್ಲ. ಮೊದಲು ಇತ್ತು. ಕೊರೋನಾ ಬಳಿಕ ಬಂದ್‌ ಆಗಿದೆ. ಇದು ಭಕ್ತರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ನೇರ ರೈಲು ಸಂಪರ್ಕ ಮಾಡಬೇಕು ಎಂದು ನೈಋತ್ಯ ವಲಯದ ರೈಲ್ವೆ ಬಳಕೆದಾರರ ಸಂಘದ ಸದಸ್ಯ ಮಹೇಂದ್ರ ಸಿಂಘಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ