ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯ ಕರ್ನಾಟಕ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಉಡುಪಿ ಭೌಗೋಳಿಕವಾಗಿ ಹೊಂದಿಕೊಂಡಿವೆ. ಇತ್ತೀಚೆಗೆ ಜನಸಂಖ್ಯೆಯೂ ಹೆಚ್ಚಿದೆ. ಕೋರ್ಟ್ಗಳಲ್ಲಿ ಕೇಸುಗಳ ಸಂಖ್ಯೆಯೂ ಹೆಚ್ಚಾಗಿದೆ. ಹಲವು ವರ್ಷಗಳಿಂದ ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬುದು ಸಾರ್ವಜನಿಕರ ಮತ್ತು ನಮ್ಮೆಲ್ಲರ ಆಶಯವಾಗಿದೆ. ಇದಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನಾ ಹೋರಾಟ ಸಮಿತಿ ರಚನೆಯಾಗಿದ್ದು, ಆ ಮೂಲಕ ಎಲ್ಲಾ ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಮತ್ತು ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು ಈ ಹೋರಾಟ ಆರಂಭಿಸುತ್ತಿದ್ದೇವೆ ಎಂದರು.
ಈಗಾಗಲೇ ಒಂದು ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕರಾವಳಿ ಸಂಚಾರಿ ಪೀಠ ಸ್ಥಾಪನೆಯಾಗಬೇಕೆಂಬ ಒತ್ತಾಯ ಪ್ರಾರಂಭವಾಗಿದೆ. ಇದಕ್ಕಾಗಿ ಜಾಗ ಕೂಡ ಗುರುತಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಜನರ ಅಭಿಪ್ರಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಂಚಾರಿ ಪೀಠಕ್ಕೆ ಶಿವಮೊಗ್ಗ ಜಿಲ್ಲೆಯನ್ನು ಸೇರಿಸಿರುವುದು ಸರಿಯಲ್ಲ. ಇದನ್ನು ನಾವು ಒಪ್ಪುವುದೂ ಇಲ್ಲ. ಇದಕ್ಕಾಗಿ ಯಾರ ಅಭಿಪ್ರಾಯವನ್ನೂ ಅವರು ಕೇಳಿಲ್ಲ. ಒಂದು ಪಕ್ಷ ಶಿವಮೊಗ್ಗ ಜಿಲ್ಲೆಯನ್ನು ಸೇರಿಸುವುದಾದರೆ ನಮ್ಮ ವಿರೋಧವಿದೆ ಎಂದರು.ಮಧ್ಯ ಕರ್ನಾಟಕ ಭಾಗವು 1956ರಿಂದಲೇ ವಂಚಿತಗೊಂಡಿದೆ. ಆದ್ದರಿಂದ ನಾವು ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಇತ್ತೀಚೆಗೆ ಭೇಟಿಯಾಗಿ ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪಿಸುವಂತೆ ಬೇಡಿಕೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳಿಗೂ ನಾವು ಮನವಿ ಮಾಡುತ್ತಿದ್ದೇವೆ. ಯಾವುದೇ ಒಂದು ಸಂಚಾರಿ ಪೀಠ ಸ್ಥಾಪನೆಯಾಗಲು ಜಸ್ವಂತ್ ಸಿಂಗ್ ಕಮಿಷನ್ ಶಿಫಾರಸು ಆಧಾರದಲ್ಲಿ ಆಗಬೇಕು. ಈ ಶಿಫಾರಸಿನಂತೆ ಮಧ್ಯಕರ್ನಾಟಕ ಭಾಗ ಸರಿಯಾದ ವ್ಯವಸ್ಥಿತ ಪೀಠ ಸ್ಥಾಪಿಸಲು ಯೋಗ್ಯವಾಗಿದೆ ಎಂದರು.
ಈಗಾಗಲೇ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಜಿಲ್ಲಾ ಕಾರ್ಮಿಕರ ಸಂಘ, ವಿದ್ಯಾರ್ಥಿಗಳು, ಪತ್ರಕರ್ತರ ಸಂಘ, ಛೇಂಬರ್ ಆಫ್ ಕಾಮರ್ಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಮಂಡಿ ಮರ್ಚೆಂಟ್ಸ್, ಕಾರ್ಮಿಕರ ಸಂಘಗಳು, ಆಟೋ ಚಾಲಕರ ಸಂಘ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಸಂಪರ್ಕದೊಂದಿಗೆ ಎಲ್ಲರೊಡನೆ ಚರ್ಚಿಸಿ ಎಲ್ಲರ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಜನಪ್ರತಿನಿಧಿಗಳನ್ನು ಜೊತೆಯಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯಪಾಲರನ್ನು ಸಂಪರ್ಕಿಸಿ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಒಂದು ಬಹುದೊಡ್ಡ ಹೋರಾಟವನ್ನೇ ನಾವು ಮಾಡಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ಎ.ಗೋಪಿಕೃಷ್ಣ, ಕೆ.ವಾಸುದೇವಮೂರ್ತಿ, ಎಸ್.ಎ.ಶ್ರೀನಿವಾಸ್, ತಿಲಕ ಮಧುಸೂದನ, ಅತಾವುಲ್ಲಾ ಖಾನ್, ಶ್ವೇತ ಇದ್ದರು.