ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಮಿತಿಯ ಜಿಲ್ಲಾ ಸಂಚಾಲಕ ಯಲ್ಲಪ್ಪ ಹೆಗಡೆ ಅವರು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕುರಿಗಾರರಿಗೆ ರಕ್ಷಣೆ ಇಲ್ಲದಂತಾಗಿದೆ. ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಅತ್ಯಾಚಾರಗಳು ಸಹ ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದರು.
ಕುರಿ ಮೇಯಿಸುತ್ತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಿರುಕುಳ ಮಾಡುತ್ತಿದ್ದಾರೆಂದು ಆರೋಪಿಸಿದ ಅವರು, ಸರ್ಕಾರ ಎಲ್ಲಾ ವರ್ಗದ ಮಹಿಳೆಯರ, ಮಕ್ಕಳ, ಶೋಷಿತರ ಹಿತರಕ್ಷಣೆಗೆ ವಿಶೇಷ ಕಾಯ್ದೆಗಳು ಜಾರಿ ಮಾಡಿದಂತೆ ಕುರಿಗಾರರ ರಕ್ಷಣೆಗೆ ಕಾಯ್ದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ಕುರಿಗಾರರಿಕೆ ಮತ್ತು ಪಶು ಸಂಗೋಪನೆ ಮೇಲೆ ಜೀವನ ಸಾಗಿಸುತ್ತಿರುವ ಕುರಿಗಾರರು ಪಶುಪಾಲಕರ ಮೇಲೆ ಆಗುತ್ತಿರುವ ದೌರ್ಜನ್ಯ, ನಿಂದನೆ, ಕಳ್ಳತನ, ಪ್ರಾಣಾಪಾಯ, ಅತ್ಯಾಚಾರ ಮುಂತಾದ ಅಪರಾಧಿಕ ಚಟುವಟಿಕೆಗಳ ತಡೆಯಲು ದೌರ್ಜನ್ಯ ತಡೆ ಕಾಯ್ದೆ ತರಬೇಕು ಎಂದು ಹೇಳಿದರು.