ಬೇಡ್ತಿ ನದಿಯುದ್ದಕ್ಕೂ ರೈತರಿಗೆ ನೀರಾವರಿ ಯೋಜನೆ ಮಾಡಲು ಆಗ್ರಹ

KannadaprabhaNewsNetwork |  
Published : Sep 12, 2025, 12:06 AM IST
ಬೇಸಿಗೆಯಲ್ಲಿ ನೀರಿಲ್ಲದೆ ಮರಳಿನ ಮೂಟೆ ಹಾಕಿ ಬೇಡ್ತಿಯಲ್ಲಿ ನೀರು ಸಂಗ್ರಹಿಸಲಾಗುತ್ತದೆ  | Kannada Prabha

ಸಾರಾಂಶ

ಯೋಜನೆಯ ಪರವಾಗಿ ಬ್ಯಾಟ್ ಮಾಡುತ್ತಿರುವ ಬಸವರಾಜ ಬೊಮ್ಮಾಯಿ ಅವರ ವಿರುದ್ಧವೂ ಕೆಲವರು ಹರಿಹಾಯ್ದಿದ್ದಾರೆ.

ವಸಂತಕುಮಾರ ಕತಗಾಲ

ಕಾರವಾರ: ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಕುರಿತು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಪರಿಸರವಾದಿಗಳು, ಸಂಘಟನೆಗಳ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯೋಜನೆಯ ಪರವಾಗಿ ಬ್ಯಾಟ್ ಮಾಡುತ್ತಿರುವ ಬಸವರಾಜ ಬೊಮ್ಮಾಯಿ ಅವರ ವಿರುದ್ಧವೂ ಕೆಲವರು ಹರಿಹಾಯ್ದಿದ್ದಾರೆ. ಜಿಲ್ಲೆಯಲ್ಲಿ ಬೇಡ್ತಿ ನದಿಯುದ್ದಕ್ಕೂ ನೀರಾವರಿ ಯೋಜನೆ ರೂಪಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಯೋಜನೆಗೆ ಪೂರಕವಾಗಿ ನಿಂತು ಹಾವೇರಿ ಜಿಲ್ಲೆಗೆ ನೀರಿಗಾಗಿ ಉತ್ತರ ಕನ್ನಡವನ್ನು ಬಲಿಕೊಡಲು ಯೋಚಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವ್ಯಾಪಕ ಆಕ್ರೋಶ, ಅಸಮಾಧಾನ ಕೇಳಿಬಂದಿದೆ.

ಜಿಲ್ಲೆಯ ಪರಿಸರವಾದಿಗಳು, ತಜ್ಞರು, ಜನಪ್ರತಿನಿಧಿಗಳು ಸಾರಾಸಗಟಾಗಿ ಈ ಯೋಜನೆಯನ್ನು ವಿರೋಧಿಸಿದ್ದಾರೆ. ಯೋಜನೆಯ ವಿರುದ್ಧ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಅಲ್ಲದೆ, ನಮ್ಮ ನದಿ ನೀರನ್ನು ಬೇರೆಡೆ ಒಯ್ದು ನೀರಾವರಿ ಯೋಜನೆ ರೂಪಿಸುವುದಕ್ಕಿಂತ ನಮ್ಮ ಜಿಲ್ಲೆಯಲ್ಲೇ ಅಂದರೆ ಬೇಡ್ತಿ (ಗಂಗಾವಳಿ) ನದಿ ತೀರದ ಜನರಿಗೆ ಅನುಕೂಲ ಆಗುವಂತೆ ಪರಿಸರಕ್ಕೆ ಹಾನಿಯಾಗದಂತೆ ಚಿಕ್ಕ ಚಿಕ್ಕ ಯೋಜನೆ ಮೂಲಕ ನೀರಾವರಿ ಕಲ್ಪಿಸಲಿ ಎಂಬ ಆಗ್ರಹವೂ ಸ್ಥಳೀಯರಿಂದ ಕೇಳಿಬಂದಿದೆ.

ಈ ಯೋಜನೆಯನ್ನು ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಬಹು ಹಿಂದಿನಿಂದಲೇ ವಿರೋಧಿಸುತ್ತಿದ್ದಾರೆ. ಈಚೆಗೆ ಶ್ರೀಗಳ ನೇತೃತ್ವದಲ್ಲೇ ಸಭೆ ನಡೆದು ಯೋಜನೆಯನ್ನು ವಿರೋಧಿಸಲು ತೀರ್ಮಾನಿಸಲಾಗಿದೆ.

ಯೋಜನೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ಈ ಯೋಜನೆ ಜಾರಿಗೆ ಮುಂದಾದರೆ ಅಥವಾ ಆ ನಿಟ್ಟಿನಲ್ಲಿ ಪ್ರಯತ್ನ ಸಾಗಿದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬೃಹತ್ ಹೋರಾಟ ನಡೆಯಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಪರಿಸರ ಸಂಘಟನೆಗಳು ಪ್ರಯತ್ನ ಆರಂಭಿಸಿವೆ.

ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಅನೇಕ ಯೋಜನೆಗಳಿಂದ ಜಿಲ್ಲೆಗೆ ಅನ್ಯಾಯವಾಗಿದೆ. ಈ ಯೋಜನೆ ಕುರಿತು ಸ್ವರ್ಣವಲ್ಲಿ ಶ್ರೀಗಳು ಹಿಂದಿನಿಂದಲೂ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ನಮ್ಮ ಜಿಲ್ಲೆಯ ಪರಿಸರ, ನೆಲ, ಜಲ ಇತರ ಸ್ಥಿತಿಗತಿ ಕುರಿತು ಚಿಂತನೆ ನಡೆಯಬೇಕಿದೆ. ಈ ಯೋಜನೆ ಬಗ್ಗೆ ನಾನು ತೀವ್ರವಾಗಿ ವಿರೋಧಿಸುತ್ತೇನೆ ಎನ್ನುತ್ತಾರೆ ಶಾಸಕ ಶಿವರಾಮ ಹೆಬ್ಬಾರ್.

ಬೇಡ್ತಿ- ವರದಾ ಯೋಜನೆ ಅತ್ಯಂತ ಅವೈಜ್ಞಾನಿಕವಾದುದು. ಪರಿಸರ ನಾಶಕ್ಕೆ ಕಾರಣವಾಗಲಿರುವ ಈ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಕುತ್ತು ತರಲಿದೆ. ಯಾವುದೇ ಕಾರಣಕ್ಕೂ ಯೋಜನೆ ಜಾರಿಯಾಗಬಾರದು. ಯೋಜನೆಗೆ ನಮ್ಮ ಬಲವಾದ ವಿರೋಧ ಇದೆ ಎನ್ನುತ್ತಾರೆ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ.

ಇದೊಂದು ಅವೈಜ್ಞಾನಿಕ ಯೋಜನೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬೇಡ್ತಿ ಕೊಳ್ಳದಲ್ಲಿ ಹಾಹಾಕಾರ ಸೃಷ್ಟಿಸಲು ಮುಂದಾಗಿದ್ದಾರೆ. ಕಾರವಾರ, ಅಂಕೋಲಾ, ನೌಕಾನೆಲೆ, ಗೋಕರ್ಣ ಹಾಗೂ ನದಿ ತೀರದ ಜನತೆಯ ಜೀವಸೆಲೆಯಾದ ಬೇಡ್ತಿ ನದಿಯನ್ನು ವರದಾ ನದಿಗೆ ಜೋಡಿಸುವ ಯೋಜನೆ ಆಗಲು ಬಿಡುವುದಿಲ್ಲ ಎನ್ನುತ್ತಾರೆ ಪ್ರಾಂತ ರೈತ ಸಂಘದ ಅಧ್ಯಕ್ಷ ಶಾಂತಾರಾಮ ನಾಯಕ.

ಪ್ರತಿ ವರ್ಷ ಬೇಸಿಗೆ ಬಂತೆಂದರೆ ಗಂಗಾವಳಿ ನದಿಯಲ್ಲಿ ನೀರೇ ಇರುವುದಿಲ್ಲ. ನದಿ ತೀರದ ಕೃಷಿಕರು ತಮ್ಮ ತೋಟ, ಗದ್ದೆಗಳಿಗೆ ನೀರಿಲ್ಲದೇ ಬವಣೆ ಅನುಭವಿಸುತ್ತಾರೆ. ಲಕ್ಷಾಂತರ ಜನರು ಈ ನದಿ ನೀರನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ ಬೇಡ್ತಿ ವರದಾ ಯೋಜನೆ ಮಾಡುವ ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ ಗಾಂವಕರ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ