ಲಕ್ಷ್ಮೇಶ್ವರ: ಹಿಂದೂ ಧರ್ಮ, ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹೇಳಿಕೆ ನೀಡಿರುವ ಪ್ರೊ. ಕೆ.ಎಸ್. ಭಗವಾನ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಸೋಮವಾರ ತಹಸೀಲ್ದಾರ್ ಎಂ. ಧನಂಜಯ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು..ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರೊ. ಬಿ. ಕೃಷ್ಣಪ್ಪ ಜಯಂತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ವೇಳೆ ಪ್ರೊ. ಕೆ.ಎಸ್. ಭಗವಾನ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಹಿಂದೂ ಧರ್ಮ, ಶ್ರೀರಾಮನ ಕುರಿತು ಅವಹೇಳನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.ಇದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದೆ.
ಈ ವೇಳೆ ವೆಂಕಟರಮಣ ನಾಯ್ಕ, ಮಂಜುನಾಥ ಮಾಗಡಿ, ಶಿವರಾಜ ಪಟ್ಟಣಶೆಟ್ಟಿ, ಗಜೇಂದ್ರಗೌಡ ಪಾಟೀಲ, ನಾಗರಾಜ ಚಿಂಚಲಿ, ಎಚ್.ಎಸ್. ವಾಲಿ, ಡಿ.ಎಂ. ಕೋಟಗಿ, ಮಲ್ಲಪ್ಪ ಗೌಡರ, ಮುತ್ತು ನೀರಲಗಿ, ಜಿ.ಎಸ್. ಮಲ್ಲಪ್ಪಗೌಡರ, ಫಕ್ಕೀರಪ್ಪ ಹಾವನೂರು, ಯಲ್ಲಪ್ಪ ಗೌಡ ಪಾಟೀಲ, ಶಂಕರ ಬ್ಯಾಡಗಿ ಹಾಗೂ ಸಮಿತಿಯು ಕಾರ್ಯಕರ್ತರು ಮತ್ತು ಇತರರು ಉಪಸ್ಥಿತರಿದ್ದರು.ಇಂದು ನಿಡಗುಂದಿಯಲ್ಲಿ ಶಿವಾನುಭವ ಸಂಪದ
ನರೇಗಲ್ಲ: ಸಮೀಪದ ನಿಡಗುಂದಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಕುಮಾರೇಶ್ವರ ಬಿಲ್ವ ಪತ್ರೆ ವನದ ವತಿಯಿಂದ ಜೂ. 23ರಂದು ಸಂಜೆ 6ಕ್ಕೆ ಶಿವಾನುಭವ ಸಂಪದ- 25 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸುವರು. ಧರ್ಮರ ಇಟಗಿಯ ನಾಗಲಿಂಗಪ್ಪಜ್ಜನವರು ಸಾನ್ನಿಧ್ಯ ವಹಿಸಲಿದ್ದಾರೆ. ವೇದಮೂರ್ತಿ ಸಿದ್ದಲಿಂಗಯ್ಯ ಶಾಸ್ತ್ರಿಗಳು ಸಂಗಮೇಶ್ವರ ದೇವಸ್ಥಾನದ ಇತಿಹಾಸ ಹಾಗೂ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಚರಿತ್ರೆ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಗಳ 262ನೇ ತುಲಾಭಾರ ಕಾರ್ಯಕ್ರಮ, ಪ್ರಜ್ವಲ್ ಕುಮಾರ ಸಂಜೀವ ತೋಟರ್ ಅವರಿಗೆ ಗೌರವ ಸತ್ಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ ಪ್ರಾರ್ಥನಾ ಗೀತೆ ಮತ್ತು ಕುಮಾರೇಶ್ವರ ನಾಮಾವಳಿ ನಡೆಯಲಿದ್ದು, ಬಸವರಾಜ ಜಂಗಣ್ಣವರ ಹಾಗೂ ಶರಣಪ್ಪ ಅರಮನಿ ಸಂಗೀತ ಸೇವೆ ಸಲ್ಲಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.