ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರಿನ ಇಸ್ಮಾಯಿಲ್ ನಗರ ಅಲೆಮಾರಿ ಹಂದಿಜೋಗಿ ಮತ್ತು ಲಂಬಾಣಿ ಸಮುದಾಯ ಸೌಲಭ್ಯ ವಂಚಿತ ಕುಟುಂಬಗಳ ಸಮೀಕ್ಷೆಗೆ ಜಿಲ್ಲಾಡಳಿತಕ್ಕೆ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.ನಗರದ 18ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಬನಶಂಕರಿ ಇಸ್ಮಾಯಿಲ್ ನಗರ ಸ್ಲಂನಲ್ಲಿ ಸುಮಾರು 40 ವರ್ಷಗಳಿಂದ ಅರೆ ಅಲೆಮಾರಿ ಹಂದಿಜೋಗಿ, ಲಂಬಾಣಿ ಸಮುದಾಯದ ಕುಟುಂಬಗಳು ನೆಲೆಸಿದ್ದು ತುಮಕೂರು ಸ್ಲಂ ಸಮಿತಿಯು 2023ರ ಜುಲೈ25 ರಂದು ಗೃಹಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪುನರ್ ವಸತಿ ಕಲ್ಪಿಸಲು ಮನವಿ ಸಲ್ಲಿಸಿತ್ತು.
ಅದರಂತೆ ನಗರ ಮಿತಿಯಲ್ಲಿ 4 ಎಕರೆ ಭೂಮಿ ಗುರುತಿಸಿ ಪುನರ್ವಸತಿ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಮುಂದುವರಿದು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಅಣ್ಣೇನಹಳ್ಳಿ ಸರ್ವೇ, 74 ರಲ್ಲಿ 4 ಎಕರೆ 44 ಕುಂಟೆ ಜಮೀನನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ತುಮಕೂರು ಸ್ಲಂ ಸಮಿತಿ ಅಭಿನಂದನೆ ಸಲ್ಲಿಸುತ್ತದೆ.2017ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದಿರುವ ಸಮೀಕ್ಷೆ ಸಂದರ್ಭದಲ್ಲಿ ಮೂಲ ನಿವಾಸಿಗಳನ್ನು ಕೈಬಿಡಲಾಗಿದೆ. ಈ ಬಗ್ಗೆ ನಾವು ಹಲವಾರು ಬಾರಿ ನಗರಪಾಲಿಕೆಗೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ ಮಾನ್ಯ ಜಿಲ್ಲಾಧಿಕಾರಿಗಳು ಇತ್ತೀಚಿಗೆ ಇಲ್ಲಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದು, ಈಗಾಲೇ ದಾಖಲೆ ಸಂಗ್ರಹಣೆ ಮಾಡಲಾಗಿದೆ.
ಸುಮಾರು 7 ವರ್ಷದ ಹಿಂದಿನ ಸಮೀಕ್ಷೆ ಆಗಿರುವುದರಿಂದ ನೈಜವಾಗಿ ವಾಸಿಸುವವರನ್ನು ಪಟ್ಟಿಯಿಂದ ಕೈಬಿಟ್ಟು ಬೆಂಗಳೂರಿನಲ್ಲಿರುವ ಅಲೆಮಾ ರಿಗಳನ್ನು ಈ ಸಮೀಕ್ಷಾ ಪಟ್ಟಿಯಲ್ಲಿ ಸೇರಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಹೊಸ ಸಮೀಕ್ಷೆ ಮಾಡಿ ಏಕ ಕಾಲದಲ್ಲಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಶಿವಾನಂದ್ ಕರಾಳೆ ಮೂಲಕ ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಹೆಚ್ಚವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕೈಬಿಟ್ಟಿರುವ ಅಲೆಮಾರಿ ಕುಟುಂಬಗಳನ್ನು ಸಮೀಕ್ಷೆ ಮಾಡಿ ಗುರುತಿಸಲಾಗುವುದು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ತುಮಕೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಲಾಗುವುದು ಮತ್ತು ಇಲ್ಲಿನ ನಿವಾಸಿಗಳನ್ನು ಹೊರತು ಪಡಿಸಿ ಅನಧಿಕೃತವಾಗಿ ವಾಸಿಸುವವರ ಬಗ್ಗೆ ಪರೀಶೀಲನೆ ನಡೆಸಲಾಗುವುದೆಂದು ತಿಳಿಸಿದರು,
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್, ಇಸ್ಮಾಯಿಲ್ ನಗರ ಸ್ಲಂ ಶಾಖೆಯ ಪದಾಧಿಕಾರಿಗಳಾದ ಚಿಕ್ಕಗಂಗಮ್ಮ, ಮಂಜಮ್ಮ, ರಾಮಕ್ಕ, ವೆಂಕಟೇಶ್, ಗೋಪಾಲಯ್ಯ, ಗಂಗಮ್ಮ ಹಾಗೂ ವೆಂಕಟೇಶ್, ಯುವ ಪದಾಧಿಕಾರಿಗಳು ಹಾಜರಿದ್ದರು.