ಹುಬ್ಬಳ್ಳಿ: ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳ ಬದಲಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು (ಲೇಬರ್ ಕೋಡ್) ಅಂಗೀಕರಿಸಿರುವುದನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಮಹೇಶ ಪತ್ತಾರ, ದೇಶದಲ್ಲಿ 29 ಕಾರ್ಮಿಕ ಕಾನೂನುಗಳಿವೆ. ಅವುಗಳ ಬದಲಿಗೆ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನಾಗಿ ಅಂಗೀಕರಿಸಲಾಗಿದೆ. ಆದರೆ, ಇದು ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಸಂಹಿತೆಗಳಾಗಿವೆ. ಆದಕಾರಣ ಇವುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ವರ್ಗದ ಹಕ್ಕೊತ್ತಾಯಗಳನ್ನು ಈಡೇರಿಸಲು ಕೇಂದ್ರ, ರಾಜ್ಯ ಸರಕಾರಗಳು ಮುಂದಾಗದಿದ್ದರೆ ಜುಲೈ 9 ರಂದು ದೇಶದ ದುಡಿಯುವ ಜನರ ದೇಶವ್ಯಾಪಿ ಮುಷ್ಕರವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಂಚಾಲಕ ಅಶೋಕ ಬಾರ್ಕಿ, ಮಹೇಶ ಪತ್ತಾರ, ಎ.ಎಸ್, ಪೀರಜಾದೆ, ಗಂಗಾಧರ ಬಡಿಗೇರ, ಶರಣು ಗೊನವಾರ, ದೀಪಾ, ದೇವರಾಜ ಕಂಬಳಿ, ಬಸವಣ್ಣೆಪ್ಪ ನೀರಲಗಿ, ಗುರುಸಿದ್ದಪ್ಪ ಅಂಬಿಗೇರ, ನಾರಾಯಣ ಆರೇರ, ಬಿ.ಐ. ಈಳಿಗೇರ, ಮಹೇಶ ಹುಲಗೋಡ, ಭುವನಾ ಬಳ್ಳಾರಿ, ಸರಸ್ವತಿ ಚಲವಾದಿ, ಫಕ್ಕೀರೇಶ ಹರಕುಣಿ, ಎಂ.ಎ. ಮುಲ್ಲಾ. ಗಾಳೆಪ್ಪ ಮುತ್ಯಾಳ, ಮೊಹ್ಮದರಫೀಕ್ ಮುಳಗುಂದ, ಅಜ್ಮೀರ ಸೊರಟಗೇರಿ, ಹನಮಂತ ಅಂಬಿಗೇರ ಮುಂತಾವರು ಸೇರಿದಂತೆ ವಿವಿಧ ಕಂಪನಿಗಳ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಪಾಲ್ಗೊಂಡದ್ದರು.