ಜಗಳೂರು: ರೈತರ ಕೃಷಿ ಪಂಪ್ ಸೆಟ್ಗಳಿಗೆ ದಿನದ ಕನಿಷ್ಠ ೭ ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಸಂಪರ್ಕ ಪೂರೈಕೆಗೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಸೊಕ್ಕೆ ಗ್ರಾಮದ ವಿದ್ಯುತ್ ಪವರ್ ಸ್ಟೇಷನ್ ಮುಂಬಾಗ ಸೊಕ್ಕೆ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳ ರೈತರು ಪ್ರತಿಭಟನೆ ನಡೆಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್.ರಂಗಪ್ಪ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಒದಗಿಸಬೇಕು. ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಬೇಡಿಕೆಯಂತೆ ದಿನಕ್ಕೆ ೭ ತಾಸು ವಿದ್ಯುತ್ ಸಂಪರ್ಕಗೊಳಿಸಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಇನ್ನೂ ೧೦ ದಿನಗಳೊಳಗೆ ಈಡೇರಿಸಲಾಗುವುದು. ಕಾಲಾವಕಾಶ ನೀಡುವ ಮೂಲಕ ರೈತರು ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ರೈತರಿಗೆ ಮನವಿ ಮಾಡಿದರು.ಕೆಟಿಸಿಎಲ್ ಅಧಿಕಾರಿ ಮಂಜುನಾಥ್, ಸೊಕ್ಕೆ ಬೆಸ್ಕಾಂ ಇಲಾಖೆ ಅಧಿಕಾರಿ ಟಿ. ಶಿವಶಂಕರ್, ಮುಖಂಡರಾದ ಮಲ್ಲೇಶ್, ಪಾಪನಾಯಕ, ಗ್ರಾಪಂ ಸದಸ್ಯ ಎಲ್.ತಿರುಮಲೇಶ್ ಸೇರಿದಂತೆ ಇತರರು ಇದ್ದರು.