ರಾಮನಗರ: ದೌರ್ಜನ್ಯಕ್ಕೊಳಗಾದ ದಲಿತರಿಗೆ ರಕ್ಷಣೆ ನೀಡಬೇಕಾದ ಡಿಸಿಆರ್ಇ ಪೊಲೀಸರು ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಬೆದರಿಸಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಡಿವೈಎಸ್ಪಿ ರಮೇಶ್ ಮತ್ತು ಪಿಎಸ್ಐ ಯೋಗೀಶ್ ಕುಮಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳದ ಮುಖಂಡರು ನಗರದ ಕಂದಾಯ ಭವನದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಮಾತನಾಡಿ, ಪರಿಶಿಷ್ಟ ಜಾತಿ, ಜನಾಂಗದವರ ಮೇಲೆ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ನಡೆದರೆ ಕಾನೂನಿನ ನೆರವು ನೀಡಲು 1989 ರ ಪರಿಶಿಷ್ಟ ಜಾತಿ ಜನಾಂಗ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದಿತು. ಆದರೆ ಪರಿಶಿಷ್ಟರ ರಕ್ಷಣೆಗಾಗಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವನ್ನು ಸ್ಥಾಪಿಸಿ ಪ್ರತ್ಯೇಕ ಪೊಲೀಸ್ ಠಾಣೆ ಪ್ರಾರಂಭಿಸಲಾಗಿತ್ತು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪರವರು ಇದರ ಕಾನೂನನ್ನು ಪ್ರಬಲಗೊಳಿಸಿ ದಲಿತರಿಗೆ ದೌರ್ಜನ್ಯ ನಡೆದರೆ ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸಲು ಕಾನೂನು ರೂಪಿಸಿದ್ದರು. ಆದರೆ ಇದು ದಲಿತರಿಗೆ ವರವಾಗಬೇಕಾದದ್ದು ಶಾಪವಾಗಿದೆ ಎಂದು ಟೀಕಿಸಿದರು.ಹಾರೋಹಳ್ಳಿಯ ಮರಳವಾಡಿ ಹೋಬಳಿ, ಯಡವನಹಳ್ಳಿ ಗ್ರಾಮದ ರಾಮಚಂದ್ರ ಎಂಬುವರ ಮೇಲೆ ಸವರ್ಣೀಯರಿಂದ ದೌರ್ಜನ್ಯ ನಡೆದಿದೆ. ಇದರ ಬಗ್ಗೆ ತನಿಖೆ ನಡೆಸುವಂತೆ ಕೋರಿದರೆ ರಾಮಚಂದ್ರ ಎಂಬುವರಿಗೆ ಡಿ.ವೈ.ಎಸ್.ಪಿ. ಎದುರುಸಿ ರಾಜೀ ಮಾಡಲು ಮುಂದಾಗಿ ಸವರ್ಣೀಯರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ಇತ್ತೀಚೆಗೆ ನಡೆದ ಹಿಂದುಳಿದ ವರ್ಗಗಳ ಇಲಾಖೆಯ ಮೇಲಾಧಿಕಾರಿಯಿಂದ ಕೆಳ ಅಧಿಕಾರಿಗೆ ದೌಜನ್ಯ ನಡೆದಿದೆ ಎಂದು ತಿಳಿದಿದ್ದರೂ ದೂರು ದಾಖಲಿಸದೆ ರಾಜೀ ಪಂಚಾಯ್ತಿ ನಡೆಸುತ್ತಾ ನ್ಯಾಯ ಕೇಳಲು ಹೋದ ಮುಖಂಡರ ವಿರುದ್ಧ ದೂರು ದಾಖಲಿಸುವ ಪ್ರಯತ್ನಕ್ಕೆ ಡಿವೈಎಸ್ಪಿರಮೇಶ್, ಪಿಎಸ್ಐ ಯೋಗೀಶ್ ಕುಮಾರ್ ದುರ್ನಡತೆಯು ಇಡೀ ಸಮುದಾಯಕ್ಕೆ ನಿದ್ದೆಗೆಡಿಸಿದೆ ಎಂದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಹರೀಶ್ ಬಾಲು, ವೆಂಕಟೇಶ್, ಸುರೇಶ್, ಮಲ್ಲಿಕಾರ್ಜುನ್, ಮರಳವಾಡಿ ಮಂಜು, ವಿನಯ್ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂಎನ್ಆರ್ ರಾಜು, ಕರುನಾಡ ಸೇನೆ ಉಪಾಧ್ಯಕ್ಷ ಜಗದೀಶ್, ರಾಜ್ ಮೌರ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ರಾಮನಗರ ಕಂದಾಯ ಭವನ ಎದುರು ಸಮತಾ ಸೈನಿಕ ದಳಕದ ಮುಖಂಡರು ಪ್ರತಿಭಟನೆ ನಡೆಸಿದರು.