-ಕನ್ನಡ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಡಾ. ಸರೋಜಿನಿ ಮಹಿಷಿ ವರದಿಯನ್ನು ಯಾಥಾವತ್ತಾಗಿ ಜಾರಿಗೊಳಿಸಬೇಕು ಮತ್ತು ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ 80 ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ಕನ್ನಡ ಜಾಗೃತ ವೇದಿಕೆ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಮುಖಂಡರು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿದಾಯಕ ಮಂಡಿಸಿದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ಅಂಗೀಕಾರ ಮಾಡಿದ 12 ಗಂಟೆಯಲ್ಲಿ ಮತ್ತೆ ಕನ್ನಡ ನಾಡಿನ ನೀರು, ಭೂಮಿ, ವಿದ್ಯುತ್ ಹಾಗೂ ವಿವಿಧ ರೀತಿಯಲ್ಲಿ ನಮ್ಮ ತೆರಿಗೆ ಹಣದಲ್ಲಿ ಸೌಲಭ್ಯಗಳನ್ನು ಪಡೆದು ಕನ್ನಡಿಗರ ಸ್ವಾಭಿಮಾನದ ಉದ್ಯೋಗವನ್ನು ಹೊರರಾಜ್ಯದ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವ ಉದ್ದಿಮೆದಾರರ ಒತ್ತಡಕ್ಕೆ ಮಣಿದು, ಒತ್ತಾಯಪೂರ್ವಕವಾಗಿ ವಿಧೇಯಕವನ್ನು ಅಡಕತ್ತರಿಯಲ್ಲಿ ಇಟ್ಟಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಮುಖ್ಯಮಂತ್ರಿಗಳು ಮಹಿಷಿ ವರದಿಯನ್ನು ಜಾರಿಗೊಳಿಸಬೇಕು. ಇಲ್ಲವಾದರೆ ಕನ್ನಡಿಗರ ಶಕ್ತಿಪ್ರದರ್ಶನವನ್ನು ಕಂಪನಿಗಳ ಮಾಲೀಕರ ಮೇಲೆ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನಂಜಪ್ಪ, ತಾಲೂಕು ಅಧ್ಯಕ್ಷ ನಾಗರಾಜ್, ಒಕ್ಕೂಟದ ಮುಖಂಡರಾದ ಅಗ್ನಿ ವೆಂಕಟೇಶ್, ಪೀರ್ ಪಾಷಾ, ಪಚೋಡಿವಾಲ, ಉಪಾಧ್ಯಕ್ಷ ನಯಾಜ್ ಖಾನ್, ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನಾಗರಾಜು. ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್, ತರುಣ್ ಸರ್ಜಾ, ಗಿರೀಶ್, ಗುಣಶೇಖರ್, ಶಿವಕುಮಾರ್, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಹರಿಕುಮಾರ್, ಕುಮುದಾ, ಶಶಿಕಲಾ, ಪದ್ಮ, ಕಲಾ, ಲಕ್ಷ್ಮಿ, ಯುವ ಘಟಕದ ದರ್ಶನ್, ಅಜಯ್, ಪಣಿ, ನವೀನ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.