ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿಯ ಒಳಮೀಸಲಾತಿ ರದ್ದು ಪಡಿಸಲು ಆಗ್ರಹಿಸಿ ತಾಲೂಕಿನ ತಾಂಡಾದ ಯುವಕರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಈ ವೇಳೆ ಯುವ ಮುಖಂಡ ತುಕ್ಕಪ್ಪ ಪೂಜಾರ, ಸಂತೋಷ ರಾಠೋಡ ಮಾತನಾಡಿ, ಒಳಮೀಸಲಾತಿಯಿಂದ ಸಣ್ಣ ಸಣ್ಣ ಸಮುದಾಯದ ಜನತೆಗೆ ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ಒಳಮೀಸಲಾತಿ ರದ್ದು ಮಾಡಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಯುವ ಮುಖಂಡ ಪರಮೇಶ ಲಮಾಣಿ ಮಾತನಾಡಿ, ಗಣತಿಯಲ್ಲಿ ಸಂಗ್ರಹಿಸಿದ ಪ್ರಾಯೋಗಿಕ ಮಾಹಿತಿ ತಾರತಮ್ಯವಾಗಿದೆ ಮತ್ತು ವರದಿ ಏಕವ್ಯಕ್ತಿಯ ಆಯೋಗದಿಂದ ನೀಡಿದ್ದು, ನಮ್ಮ ಸಮುದಾಯದ ವಿರುದ್ಧ ಪೂರ್ವಾನುಗ್ರಹ ಹೊಂದಿದೆ ಎಂದರು.
ಆಯೋಗ ನೀಡಿದ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗ ಸ್ಥಿತಿ ವಿವರಗಳಿಗೆ ಸಿ ಗುಂಪಿನ 63 ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮರ್ಪಕ ಪ್ರತಿನಿಧಿತ್ವ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ 63 ಜಾತಿಗಳಿಗೆ ಹೆಚ್ಚು ಮೀಸಲಾತಿ ಅಗತ್ಯವಿದೆ ಎಂದರು.ಸಚಿವ ಸಂಪುಟವು ವರದಿಯನ್ನು ತಿದ್ದುಪಡಿ ಮಾಡಿ ಎ,ಬಿ,ಸಿ ಎಂದು ಉಪವರ್ಗೀಕರಣ ಮಾಡಿರುವುದು ಸುಪ್ರೀಂ ಕೋಟಾ ತೀರ್ಪಿಗೆ ವಿರುದ್ಧವಾಗಿದೆ. ರೋಸ್ಟರ್ ವ್ಯವಸ್ಥೆ ಮತ್ತು ಎ,ಬಿ,ಸಿ, ಎಂದು ಜಾತಿ ಪ್ರಮಾಣಪತ್ರ ನೀಡುವ ಅಧಿಸೂಚನೆಗಳಿಗೆ ಕಾನೂನು ಆಧಾರವಿಲ್ಲ ಮತ್ತು ಇದು ಇತರ ಜಾತಿಗಳನ್ನು ಹೊರತುಪಡಿಸಿವಂತಾಗಿದೆ.ಗುಂಪಿನಲ್ಲಿ 1+4=5 ರೀತಿ ಆಂತರಿಕ ಮೀಸಲಾತಿ ನೀಡುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಿದ ಪ್ರಕರಣಗಳು ಕರ್ನಾಟಕ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿದೆ ಎಂದರು.ಈ ಸಂದರ್ಭದಲ್ಲಿ ಗಿರೀಶ ಲಮಾಣಿ, ಕಿರಣ ಲಮಾಣಿ, ಗಣೇಶ ಲಮಾಣಿ, ಕೃಷ್ಣ ಲಮಾಣಿ, ಉಮೇಶ ಲಮಾಣಿ, ತುಳಚಪ್ಪ ಲಮಾಣಿ, ಸಂತೋಷ ಲಮಾಣಿ, ಚನ್ನಪ್ಪ ಲಮಾಣಿ, ಯಂಕಪ್ಪ ಲಮಾಣಿ, ದೇವೇಂದ್ರಪ್ಪ ಲಮಾಣಿ ಮತ್ತಿತರಿದ್ದರು.