- ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಇತರೆ ಕಾನೂನಿನಡಿ ಕ್ರಮ ಜರುಗಿಸಿ: ಹಿಂದೂ ಜನಜಾಗೃತಿ ಸೇನಾ ಸಮಿತಿ ಮನವಿ - - -
ಅಕ್ರಮ ಗೋಮಾಂಸ ಮಾರಾಟ, ಅಕ್ರಮ ಗೋ ಸಾಗಾಣಿಕೆ, ಲೈಸೆನ್ಸ್ ರಹಿತ ಕಸಾಯಿಖಾನೆಗಲ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಇತರೆ ಸಂಬಂಧಿಸಿದ ಕಾನೂನುಗಳಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸೇನಾ ಸಮಿತಿ ರಾಜ್ಯ ಘಟಕದಿಂದ ನಗರದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಮನವಿ ಅರ್ಪಿಸಲಾಯಿತು.
ನಗರದ ಎಸ್ಪಿ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ಪಾಲಿಕೆ ಕಚೇರಿಯಲ್ಲಿ ಆಯುಕ್ತ ಎನ್.ಮಹಾಂತೇಶ ಅವರನ್ನು ಭೇಟಿ ಮಾಡಿದ ಸಂಘಟನೆ ರಾಜ್ಯ ಪದಾಧಿಕಾರಿಗಳಾದ ಜಿ.ಚೇತನ್, ಎನ್.ಮಲ್ಲೇಶ, ವಕೀಲ ವಿವೇಕಾನಂದಯ್ಯ ಇತರರು, ಅಕ್ರಮ ಗೋಮಾಂಸ ಮಾರಾಟ, ಗೋವುಗಳ ಅಕ್ರಮ ಸಾಗಾಣಿಕೆ, ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಇತರೆ ಕಾನೂನುಗಳಡಿ ಪ್ರಕರಣ ದಾಖಲಿಸಿ, ಕ್ರಮ ಜರುಗಿಸುವಂತೆ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ಜಿ.ಚೇತನ್, ದಾವಣಗೆರೆಯ ವಿವಿಧ ಪ್ರದೇಶಗಳಲ್ಲಿ ಅಕ್ರಮ ಗೋಮಾಂಸ ಮಾರಾಟ, ಅಕ್ರಮ ಗೋ ಸಾಗಾಣಿಕೆ, ಯಾವುದೇ ಲೈಸೆನ್ಸ್ ಇಲ್ಲದ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ಆಜಾದ್ ನಗರ, ಬಾಷಾ ನಗರ, ಮೆಹಬೂಬ್ ನಗರ, ಅಕ್ತರ್ ರಜಾ ವೃತ್ತದ ಸುತ್ತಮುತ್ತ ಹಾಗೂ ಕೆಟಿಜೆ ನಗರದಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ, ಅಕ್ರಮ ಗೋ ಸಾಕಾಣಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಭಾರತೀಯ ನ್ಯಾಯ ಸಂಹಿತೆ, 2023ರ ಅಡಿಯಲ್ಲಿ ಸಾರ್ವಜನಿಕ ಶಾಂತಿಭಂಗ, ಅಕ್ರಮ ಚಟುವಟಿಕೆ ಮತ್ತು ಕಾನೂನುಬಾಹಿರ ಸಾಗಾಣಿಕೆ ಸಂಬಂಧಪಟ್ಟ ವಿಧಿಗಳು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ಅಡಿಯಲ್ಲಿ ಕಾನೂನುಬಾಹಿರವಾಗಿದೆ. ಪಾಲಿಕೆ ಹಾಗೂ ಆರೋಗ್ಯ ಇಲಾಖೆ ವ್ಯಾಪಾರ ನಿಯಮಗಳ ಉಲ್ಲಂಘನೆ ಆಗುತ್ತಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಸಾಕಷ್ಟು ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಬದಲಾಗಿ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿ, ನುಣುಚಿಕೊಳ್ಳುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
- - -
- ಲೈಸೆನ್ಸ್ ರಹಿತ ಅಂಗಡಿಗಳನ್ನು ತಕ್ಷಣ ಸೀಜ್ ಮಾಡಿ ಮುಚ್ಚಿಸಬೇಕು.
- ಅಕ್ರಮ ಗೋ ಸಾಗಣೆ ತಡೆಗಟ್ಟಲು ಹೋಗುವ ಸಮಾಜಮುಖಿ ಕಾರ್ಯಕರ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲು ವಿರುದ್ಧ ಕ್ರಮ ಜರುಗಿಸಬೇಕು
- ಆಹಾರ ಸುರಕ್ಷತಾ ಇಲಾಖೆ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕು
- - -
-26ಕೆಡಿವಿಜಿ1: ದಾವಣಗೆರೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರಿಗೆ ಹಿಂದೂ ಜನಜಾಗೃತಿ ಸೇನಾ ಸಮಿತಿ ರಾಜ್ಯ ಘಟಕದಿಂದ ಮನವಿ ಅರ್ಪಿಸಲಾಯಿತು.