ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಗವಾಯಿ ದೀಪಕಸಿಂಗ್ ಹಜೇರಿ ನೇತೃತ್ವದಲ್ಲಿ ಪ್ರಾರಂಭಗೊಂಡ ಸಂಗೀತ ಕಲಾವಿದರ ಬೃಹತ್ ಪ್ರತಿಭಟನಾ ಮೆರವಣಿಗೆ ಪಟ್ಟಣದ ಕತ್ರಿ ಬಜಾರ್ ಮಾರ್ಗವಾಗಿ ಪ್ರಮುಖ ರಸ್ತೆಗಳ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದರು. ಈ ವೇಳೆ ಮಾತನಾಡಿದ ಗವಾಯಿ ದೀಪಕಸಿಂಗ್ ಹಜೇರಿ, ೧೯೬೫ ರಿಂದ ಶ್ರೀ ಖಾಸ್ಗತೇಶ್ವರ ಸಂಗೀತ ಪಾಠಶಾಲೆ ಅನೇಕ ವಿದ್ಯಾರ್ಥಿಗಳಿಗೆ ನೃತ್ಯ, ತಾಳವಾದ್ಯ ಪರೀಕ್ಷೆಗಳಾದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ತ ಪಠ್ಯಕ್ರಮದ ಪ್ರಕಾರ ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಗೀತ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಖಾಸ್ಗತೇಶ್ವರ ಮಠದ ಲಿಂ.ಶಿವಬಸವ ದೇವರು, ಅಂದಿನ ಸಂಗೀತ ಶಿಕ್ಷಕ ಗವಾಯಿಗಳಾದ ಲಿಂ.ಪಿ.ಎ.ಸಾಲಿಮಠ ಗುರುಗಳ ನೇತೃತ್ವದಲ್ಲಿ ಉಚಿತ ಊಟ ವಸತಿ ಜೊತೆಗೆ ಸಂಗೀತ ವಿದ್ಯೆ ನೀಡಲಾಗುತ್ತಿದೆ. ಹೀಗಾಗಿ, ತಾಳಿಕೋಟೆಯಲ್ಲಿಯೇ ಸಂಗೀತ ಪರೀಕ್ಷೆಗನ್ನು ನಡೆಸುವಂತೆ ಕೂಡಲೇ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಶ್ವೇತಾ ಯರಗಲ್ಲ ಮಾತನಾಡಿ, ತಾಳಿಕೋಟೆ ಪಟ್ಟಣ ಶ್ರೀ ಖಾಸ್ಗತೇಶ್ವರ ಕಾಲದಿಂದಲೂ ಹಲವಾರು ವಿದ್ಯಾರ್ಥಿಗಳು ಸಂಗೀತ ಕಲಿತು ಗವಾಯಿಗಳಾಗಿದ್ದಾರೆ. ಅನೇಕರು ಸಂಗೀತ ಶಿಕ್ಷಕರಾಗಿದ್ದಾರೆ. ತಾಳಿಕೋಟೆ ಪರೀಕ್ಷಾ ಕೇಂದ್ರವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ೪೦ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಇದೀಗ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಈ ವರ್ಷದಿಂದ ತಾಳಿಕೋಟೆ ಪರೀಕ್ಷಾ ಕೇಂದ್ರಕ್ಕೆ ಯಾವುದೇ ಮಾಹಿತಿ ನೀಡದೇ ಪರೀಕ್ಷಾ ಕೇಂದ್ರ ರದ್ದು ಮಾಡಿರುವುದು ಖಂಡನೀಯ. ಮರಳಿ ತಾಳಿಕೋಟೆಯಲ್ಲಿಯೇ ಸಂಗೀತ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು.ಈ ವೇಳೆ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಶ್ರೀ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ಅಧ್ಯಕ್ಷ ವೇ.ಮುರುಘೇಶ ವಿರಕ್ತಮಠ ಹಾಗೂ ಪ್ರಾಚಾರ್ಯ ಬಸನಗೌಡ ಬಿರಾದಾರ ಮನವಿ ಸಲ್ಲಿಸಿದರು.
ದನ್ನೂರ ಇತರರು ಇದ್ದರು.