ಇಂಡಿ ಶಾಖಾ ಕಾಲುವೆಗೆ ನೀರು ಹರಿಸಲು ಆಗ್ರಹ

KannadaprabhaNewsNetwork |  
Published : May 25, 2024, 12:49 AM IST
ಹಹ | Kannada Prabha

ಸಾರಾಂಶ

ಇಂಡಿ ಶಾಖಾ ಕಾಲುವೆಗೆ ನೀರು ಹರಿಸಬೇಕು, ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಮಳೆಗಾಲದಲ್ಲಿ ಕಾಲುವೆ ಮೂಲಕವಾಗಲಿ, ನದಿ,ಹಳ್ಳ ಕೊಳ್ಳಗಳ ಮೂಲಕ ಹರಿಯುವ ನೀರು ಕೆರೆ, ಬಾಂದಾರಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿ ರೈತರು ತಾಲೂಕಿನ ತಡವಲಗಾ ಜೋಡಗುಡಿ ಬಳಿ ಹಾದು ಹೋಗಿರುವ ಇಂಡಿ-ವಿಜಯಪುರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಇಂಡಿ ಶಾಖಾ ಕಾಲುವೆಗೆ ನೀರು ಹರಿಸಬೇಕು, ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಮಳೆಗಾಲದಲ್ಲಿ ಕಾಲುವೆ ಮೂಲಕವಾಗಲಿ, ನದಿ,ಹಳ್ಳ ಕೊಳ್ಳಗಳ ಮೂಲಕ ಹರಿಯುವ ನೀರು ಕೆರೆ, ಬಾಂದಾರಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿ ರೈತರು ತಾಲೂಕಿನ ತಡವಲಗಾ ಜೋಡಗುಡಿ ಬಳಿ ಹಾದು ಹೋಗಿರುವ ಇಂಡಿ-ವಿಜಯಪುರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಮುಖಂಡರಾದ ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ,ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಅವರು, ಭೀಕರ ಬರಗಾಲ ತಾಲೂಕಿನಲ್ಲಿ ಆವರಿಸಿದ್ದರಿಂದ ನೀರಿಲ್ಲದೇ ಅಂತರ್ಜಲ ಬತ್ತಿ ಹೋಗಿದ್ದರಿಂದ ಬೆಳೆಗಳಿಗೆ ನೀರು ಇಲ್ಲದಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಿದರೆ, ನದಿ, ಹಳ್ಳ, ಬಾಂದಾರಗಳಿಗೆ ನೀರು ಹರಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್‌ವೆಲ್, ಭಾವಿಗಳಿಗೆ ನೀರು ಬರುತ್ತಿತ್ತು. ಕೃಷಿ ಮಾಡಲು ಅನುಕೂಲವಾಗುತ್ತಿತ್ತು. ಮಳೆಗಾಲದಲ್ಲಿ ಹಾಳಾಗಿ ಹೋಗುವ ನೀರನ್ನು ಕೆರೆಗಳಿಗೆ ತುಂಬಿಸಿದ್ದರೆ ಇಂದು ಬೇಸಿಗೆಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಸೇರಿದಂತೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುತ್ತಿತ್ತು. ಕೂಡಲೇ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಇಂಡಿ ಶಾಖಾ ಕಾಲುವೆ ಹಾಗೂ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗಳ ಟೆಲ್ ಎಂಡ್ ವರೆಗೆ ನೀರು ಹರಿಸಬೇಕು. ತಾಲೂಕಿನ ಹಳ್ಳಿ ಹಾಗೂ ಜನವಸತಿ ಪ್ರದೇಶದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ಅದನ್ನು ನಿಯಂತ್ರಿಸಬೇಕು. ನಮ್ಮ ಬೇಡಿಕೆಗಳು ಈಡೇರಿಸುವವರೆಗೆ ರಸ್ತೆ ತಡೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮನ್ನು ಬಂಧನ ಮಾಡಿದರೂ ಅಂಜುವುದಿಲ್ಲ ಎಂದು ಪಟ್ಟು ಹಿಡಿದರು.

ರೈತರ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್‌ ಮಂಜುಳಾ ನಾಯಕ,ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪುರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ರೈತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಂದು ನಿಮ್ಮೇಲ್ಲ ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುತ್ತದೆ. ತಾವು ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು.ನಂತರ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು. ಕೆಲಕಾಲ ರಸ್ತೆ ತಡೆ ನಡೆಸಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. ವಿವಿಧ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!