ಸಿಂಗಲ್‌ ಲೇಔಟ್‌ ಅನುಮೋದನೆ ಅಧಿಕಾರ ಗ್ರಾ.ಪಂ.ಗೆ ನೀಡಲು ಒತ್ತಾಯ

KannadaprabhaNewsNetwork |  
Published : Mar 22, 2025, 02:02 AM IST
21ಶಿರ್ವಾ | Kannada Prabha

ಸಾರಾಂಶ

25 ಸೆಂಟ್ಸ್‌ವರೆಗೆ ನಿವೇಶನದ ಏಕನಿವೇಶನ (ಸಿಂಗಲ್‌ ಲೇಔಟ್) ನಕ್ಷೆಗೆ ಅನುಮೋದನೆ ನೀಡುವ ಅಧಿಕಾರವನ್ನು ಮತ್ತೆ ಗ್ರಾಮ ಪಂಚಾಯತಿಗಳಿಗೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಇಲ್ಲಿನ ಶಿರ್ವ ಗ್ರಾ.ಪಂ. ಅಂಗೀಕರಿಸಿದೆ.

ಕನ್ನಡಪ್ರಭ ವಾರ್ತೆ ಕಾಪು

ಈ ಹಿಂದಿನಂತೆ 25 ಸೆಂಟ್ಸ್‌ವರೆಗೆ ನಿವೇಶನದ ಏಕನಿವೇಶನ (ಸಿಂಗಲ್‌ ಲೇಔಟ್) ನಕ್ಷೆಗೆ ಅನುಮೋದನೆ ನೀಡುವ ಅಧಿಕಾರವನ್ನು ಮತ್ತೆ ಗ್ರಾಮ ಪಂಚಾಯತಿಗಳಿಗೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಇಲ್ಲಿನ ಶಿರ್ವ ಗ್ರಾ.ಪಂ. ಅಂಗೀಕರಿಸಿದೆ.

ಬುಧವಾರ ಇಲ್ಲಿನ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆ ಬಳಿಯ ಮಹಿಳಾ ಸೌಧದಲ್ಲಿ ಶಿರ್ವ ಗ್ರಾಪಂ ೨೦೨೪ - ೨೫ನೇ ಸಾಲಿನ ದ್ವಿತೀಯ ಗ್ರಾಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು

ಜಿಲ್ಲೆಯಲ್ಲಿ ೨೫ ಸೆಂಟ್ಸ್ ಜಮೀನಿನವರೆಗೆ ನೊಂದಾಯಿತ ಖಾಸಗಿ ವಾಸ್ತುಶಿಲ್ಪಿಯವರು ಮಾಡಿದ ಏಕ ನಿವೇಶನ (ಸಿಂಗಲ್ ಲೇಔಟ್) ನಕ್ಷೆಗೆ ಅನುಮೋದನೆ ನೀಡುವ ಅಧಿಕಾರ ಗ್ರಾ.ಪಂ.ಗೆ ಇವತ್ತು. ಈಗ ಅದನ್ನು ಯೋಜನಾ ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೆ ಪ್ರಾಧಿಕಾರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಅನುಮೋದನೆ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿದ್ದು, ಸಾವಿರಾರು ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಹಿಂದಿನಂತೆ ಸಿಂಗಲ್ ಲೇಔಟ್ ನಕ್ಷೆಗೆ ಅನುಮೋದನೆ ನೀಡುವ ಅಧಿಕಾರವನ್ನು ಪಂಚಾಯಿತಿಗೆ ನೀಡಬೇಕು ಎಂದು ಗ್ರಾಮಸ್ಥರ ಮತ್ತು ಜನಪ್ರತಿನಿಧಿಗಳ ಸರ್ವಾನುಮತದ ನಿರ್ಣಯ ಮಂಡಿಸಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಶಿರ್ವ ಪಶುವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಹೆಗ್ಡೆ ಮಾತನಾಡಿ ಸಭೆಯಲ್ಲಿ ಗ್ರಾಮಸ್ಥರ ಹಾಜರಾತಿ ಕಡಿಮೆ ಇರುವುದನ್ನು ಗಮನ ಸಳೆದರು. ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿ ವಾರ್ಷಿಕ ವರದಿ ಮಂಡಿಸಿದರು. ಗ್ರಂಥಪಾಲಕಿ ಅಮ್ಮಿ ವಾರ್ಡ್ ಸಭೆಯ ವರದಿ ಮಂಡಿಸಿದರು.

ಶಿರ್ವ ಪೊಲೀಸ್ ಠಾಣೆಯ ಎಎಸ್‌ಐ ಶ್ರೀಧರ ಕೆ. ಜೆ., ಶಿರ್ವ ಸ. ಆ. ಕೇಂದ್ರದ ಆರೋಗ್ಯಾಧಿಕಾರಿ ನಿಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೂರ್ಣಿಮಾ, ಗ್ರಾಮ ಆಡಳಿತಾಧಿಕಾರಿ ಶ್ವೇತಾ, ಮೆಸ್ಕಾಂನ ಪ್ರದೀಪ್, ಸಾಮಾಜಿಕ ಅರಣ್ಯ ಇಲಾಖೆಯ ಕೃಷ್ಣಪ್ಪ, ಕೃಷಿ ಇಲಾಖೆಯ ಸಂಜನಾ ಶೆಟ್ಟಿ ಮತ್ತು ಶಿಕ್ಷಣ ಇಲಾಖೆಯ ಶಿವಣ್ಣ ಆರ್. ಆಯಾ ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಲಾಯಿತು.

ಗ್ರಾಮಸಭೆಯಲ್ಲಿ ಕಿಂಡಿ ಆಣೆಕಟ್ಟು ದುರಸ್ತಿ, ಕೃಷಿಗೆ ಮಂಗಗಳ ಹಾವಳಿ, ಕಸದ ಸಮಸ್ಯೆ, ಪಂಜಿಮಾರು ಭಾಗದಲ್ಲಿ ನೇತಾಡುವ ಹಳೆಯ ವಿದ್ಯುತ್ ತಂತಿಗಳ ಸಮಸ್ಯೆ ಬಗ್ಗೆ ದಿನೇಶ್ ಸುವರ್ಣ, ರಮೇಶ್ ಬಂಗೇರಾ, ಲೂಕಸ್ ಡಿಸೋಜಾ, ಶೈಲೇಶ್, ರಿಚರ್ಡ್ ಫೆರಾವೋ ಸಭೆಯ ಗಮನ ಸೆಳೆದರು.

ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸತೀಶ್ ಮತ್ತು ಗ್ರಾ. ಪಂ. ಸದಸ್ಯರು ವೇದಿಕೆಯಲ್ಲಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಸ್ವಾಗತಿಸಿ ವಂದಿಸಿದರು. ಗ್ರಾ.ಪಂ.ಸಿಬಂದಿ ದಿನೇಶ್ ನಿರೂಪಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...