ಬಜೆಟ್‌ನಲ್ಲಿ ಬಿಸಿಯೂಟ ಕಾರ್ಮಿಕರಿಗೆ ಗೌರವಧನ ಹೆಚ್ಚಿಸಲು ಆಗ್ರಹ

KannadaprabhaNewsNetwork | Updated : Feb 05 2024, 04:46 PM IST

ಸಾರಾಂಶ

ಗೌರವಧನ ಹೆಚ್ಚಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಧಾರವಾಡ: ಬಿಸಿಯೂಟ ಕಾರ್ಮಿಕರಿಗೆ ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಮಾಸಿಕ ₹6 ಸಾವಿರ ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, ರಾಜ್ಯದಲ್ಲಿ ಮುಖ್ಯ ಅಡುಗೆಯವರು 47,250, ಅಡುಗೆ ಸಹಾಯಕರಾಗಿ 71,336 ಪ್ರಸ್ತುತ ಒಟ್ಟಾರೆ 1,18,586 ಅಡುಗೆ ತಯಾರಕರು ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ಇವರಿಗೆ ಸೇವಾ ಹಿರಿತನದ ಭತ್ಯೆ ಇಲ್ಲ. ಕೆಲಸದ ನಿಯಮಾವಳಿಗಳ ಸ್ಪಷ್ಟ ನಿರ್ದೇಶನವಿದ್ದರೂ ಶಾಲೆಗಳ ಆಯಾಗಳ ತರಹ ಡಿ ಗ್ರೂಪ್ ದರ್ಜೆ ನೌಕರರ ತರಹ ದುಡಿಸಿಕೊಳ್ಳಲಾಗುತ್ತಿದೆ. 

ಶಾಸನಬದ್ಧವಾಗಿ ದೊರಕಬೇಕಾದ ವೇತನ ಸಹಿತ ಹೆರಿಗೆ ರಜೆ, ವೈದ್ಯಕೀಯ ಸೌಲಭ್ಯಗಳೂ ದೊರಕುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಇವರದಲ್ಲದ ಕೆಲಸಗಳನ್ನು, ಹೆಚ್ಚುವರಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ. 

ಆದ್ದರಿಂದ ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಕನಿಷ್ಠ ಮಾಸಿಕ ಗೌರವಧನ 6 ಸಾವಿರ ಘೋಷಣೆ ಮಾಡಬೇಕು ಎಂದರು.

ಹೋರಾಟಗಾರ ಗಂಗಾಧರ ಬಡಿಗೇರ ಮಾತನಾಡಿ, ಬಿಸಿ ಊಟ ತಯಾರಿಸುವ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರು, ಒಬ್ಬಂಟಿ ಮಹಿಳೆಯರು, ಬಡವರು, ಇಡೀ ಕುಟುಂಬ ನಿರ್ವಹಿಸುವ ಜವಾಬ್ದಾರಿ ಇರುವಂತಹವರು. 

ಆದ್ದರಿಂದ ಇವರಿಗೆ ವರ್ಷದಲ್ಲಿ 12 ತಿಂಗಳು ಗೌರವಧನ ನೀಡಬೇಕು. ಬಾಕಿ ಉಳಿದಿರುವ ಗೌರವಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕುಂದಗೋಳ ತಾಲೂಕು ಸಮಿತಿಯ ಯಲ್ಲಮ್ಮ ಭಜಂತ್ರಿ, ಅಳ್ನಾವರ ತಾಲೂಕಿನ ಶಾಹೀನ್, ನವಲಗುಂದ ತಾಲೂಕಿನ ಅನಿತಾ ಕುಸುಗಲ್, ಹುಬ್ಬಳ್ಳಿ ತಾಲೂಕಿನ ಲಲಿತಾ ಹೊಸಮನಿ, ಉಮಾ ಹಿರೇಮಠ ಮಾತನಾಡಿದರು. ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತಿಗಳಿಗೆ ನೀಡಲಾಯಿತು.

Share this article